ಪುತ್ತೂರು: ಕೊಂಬೆಟ್ಟು ಪ್ರಭು ಚರುಂಬುರಿ ಪ್ರಭು’ಸ್ ಚರುಂಬುರಿಯಾಗಿ ಬದಲಾಗಿದ್ದು, ಇದರ ನೂತನ ಲೋಗೋವನ್ನು ತುಳು ಸಿನಿಮಾ ನಟ ಅರವಿಂದ್ ಬೋಳಾರ್ ಅವರು ಶನಿವಾರ ಅನಾವರಣಗೊಳಿಸಿದರು.
ಆಜಿ ವರ್ಷದ ದುಂಬು ಬಜಿಲ್ ಮನ್ತ್ ಪೋತೆ ಪನ್ತ್’ಜೆರ್. ಚರುಂಬುರಿ ಮನ್ತ್ ಪೋತೆ ಪಂಡೆರ್ ಎಂದು ನಗೆ ಚಟಾಕಿ ಹಾರಿಸುತ್ತಲೇ ಮಾತು ಆರಂಭಿಸಿದ ಅರವಿಂದ್ ಬೋಳಾರ್, ಪ್ರಭು ಹಲವು ಇರಬಹುದು. ಅದೆಲ್ಲವೂ ಅವರ ಹೊಟ್ಟೆಪಾಡು ಇರಲಿ. ಆದರೆ ಅವೆಲ್ಲಕ್ಕಿಂತ ಪ್ರಭು’ಸ್ ಭಿನ್ನ. ಉತ್ತಮ ರುಚಿ ಇರುವಲ್ಲಿಗೆ ನಾವು ಹೋಗುವುದು ಸಹಜ. ಅದರಂತೆ ಜನರು ಪ್ರಭು’ಸ್ ಚರುಂಬುರಿ ಬಳಿ ಬರುತ್ತಾರೆ ಎಂದರು.
ಸಮಸ್ಯೆಗಳು ಬರುವುದು ಸಹಜ. ಹಾಗೇ ಸಮಸ್ಯೆಗಳು ಬಂದಾಗ ಸಂಸ್ಥೆಯ ಸಿಬ್ಬಂದಿಗಳೇ ಕುಳಿತು ಮಾತನಾಡಿದರೆ, ಸಮಸ್ಯೆ ಬಗೆಹರಿಯುತ್ತವೆ. ಸಂಸ್ಥೆ ಬೆಳೆಯುತ್ತದೆ. ಕಳೆದ ಆರು ವರ್ಷದಲ್ಲಿ ರಾಜೇಶ್ ಪ್ರಭು ಅವರು ಕಟ್ಟಿದ ಸಂಸ್ಥೆ ಬೆಳೆದಿದೆ. ಇಷ್ಟು ಸಾಕಲ್ವೇ. ಹುಡುಗಿಯ ಕೈ ಹಿಡಿದು ಒಳ್ಳೆಯದಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ರಾಜೇಶ್ ಅವರು ಚರುಂಬುರಿಯ ಕೈ ಹಿಡಿದು ಒಳ್ಳೆಯದಾಗಿದ್ದಾರೆ. ಇದು ತುಂಬಾ ದೊಡ್ಡ ವಿಷಯ ಎಂದರು.
ಅರವಿಂದ್ ಬೋಳಾರ್ ದಕ್ಷಿಣ ಕನ್ನಡದ ರಾಜ್ ಕುಮಾರ್: ಡಾ. ಪ್ರಸಾದ್ ಭಂಡಾರಿ
ಆದರ್ಶ ಆಸ್ಪತ್ರೆಯ ಡಾ. ಪ್ರಸಾದ್ ಭಂಡಾರಿ ಮಾತನಾಡಿ, ಹತ್ತಾರು ಪ್ರಭು ಚರುಂಬುರಿ ಇರುವುದನ್ನು ನೋಡಿ ಆಗಲೇ ಹೇಳಿದ್ದೆ – ರಾಜೇಶ್ ಪ್ರಭು ಅವರದ್ದು ಪ್ರತ್ಯೇಕತೆ ಬೇಕು ಎಂದು. ಪರಿಶ್ರಮಿ ರಾಜೇಶ್ ಅವರು ಇಂದು ಪ್ರಭು’ಸ್ ಚರುಂಬುರಿ ಎಂಬ ಹೊಸ ಹೆಸರನ್ನು ಸಂಸ್ಥೆಗೆ ಇರಿಸಿ, ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರು ಬೆಳೆದಿರುವುದು ನಮಗೆ ಖುಷಿಯ ವಿಷಯ. ಪ್ರತಿ ವಾರ ಇಲ್ಲಿಗೆ ಆಗಮಿಸಿ ನಮ್ಮ ಸಿಬ್ಬಂದಿಗಳಿಗೆ ಚರುಂಬುರಿ ಕೊಂಡೊಯ್ಯುತ್ತೇನೆ ಎಂದರು.
ಅರವಿಂದ್ ಬೋಳಾರ್ ಅವರನ್ನು ದಕ್ಷಿಣ ಕನ್ನಡದ ರಾಜ್ ಕುಮಾರ್ ಎಂದು ಬಣ್ಣಿಸಿದ ಡಾ. ಪ್ರಸಾದ್ ಭಂಡಾರಿ, ಬೋಳಾರ್ ಸಿನಿಮಾಕ್ಕೆ ಹೋದದ್ದು ನಮಗೆ ನಷ್ಟ. ನಾಟಕದಲ್ಲೇ ಇರಿ ಎಂದು ಸಲಹೆ ನೀಡಿದರು. ಹಲವು ಭಾಷೆಗಳನ್ನು ಬಲ್ಲ ಅರಿವಂದ್ ಬೋಳಾರ್ ಅವರು ಬಹುಮುಖ ಪ್ರತಿಭೆ. ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಬೇಕು ಎಂದರು.
ಸ್ಟಾಲ್ ನಿಂದ ಅಂಗಡಿವರೆಗೆ: ಮಹೇಶ್ ಕಜೆ
ಕಜೆ ಲಾ ಛೇಂಬರ್’ನ ಮಹೇಶ್ ಕಜೆ ಮಾತನಾಡಿ, ಛಲದಿಂದ ನಿರಂತರ ಪ್ರಯತ್ನ ಹಾಕಿದಾಗ ಪ್ರಭುಸ್ ಚರುಂಬುರಿಯಂತಹ ಸಂಸ್ಥೆ ಆಗುತ್ತದೆ. ಜಾತ್ರಾ ಗದ್ದೆಯಲ್ಲಿ ಸ್ಟಾಲ್ ಹಾಕಿಕೊಂಡಿದ್ದ ರಾಜೇಶ್ ಅವರು, ಅಂಗಡಿಯೊಂದನ್ನು ಹಾಕಿದ್ದಾರೆ. ನಿರಂತರ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಅವರ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಎಂಬಿಎ ವಿದ್ಯಾರ್ಥಿಗಳಿಗೆ ಉತ್ತಮ ಕೇಸ್ ಸ್ಟಡಿ: ವಿಶ್ವಾಸ್ ಶೆಣೈ
ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ವಿಶ್ವಾಸ್ ಶೆಣೈ ಮಾತನಾಡಿ, ಎಂಬಿಎ ವಿದ್ಯಾರ್ಥಿಗಳಿಗೆ ರಾಜೇಶ್ ಪ್ರಭು ಅವರ ಪ್ರಭು’ಸ್ ಚರುಂಬುರಿ ಒಂದೊಳ್ಳೆಯ ಕೇಸ್ ಸ್ಟಡಿ. ಇವರ ಹೆಸರನ್ನು ಪಠ್ಯದಲ್ಲೂ ಸೇರಿಸಬಹುದು. ಗಾಂಧಾರಿ ಮೆಣಸಿನಿಂದ ರಾಕೆಟ್ ಚರುಂಬುರಿಯನ್ನು ಹುಟ್ಟುಹಾಕಿ, ಚರುಂಬುರಿಗೆ ಹೊಸ ವರಸೆ ನೀಡಿದ್ದಾರೆ ಎಂದರು.
ಪ್ರಭು’ಸ್ ಚರುಂಬುರಿಯ ರಾಜೇಶ್ ಪ್ರಭು ಸ್ವಾಗತಿಸಿದರು. ಉಪನ್ಯಾಸಕ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಶಿಳ್ಳೆ ಬೇಡ:
ಸ್ಮರಣಿಕೆ ನೀಡುವ ಸಂದರ್ಭ ಚೆಂಡೆ, ಮದ್ದಳೆ, ಶಂಖ, ಜಾಗಟೆ, ಚಕ್ರತಾಳದಂತೆ ನಿಮ್ಮ ಚಪ್ಪಾಳೆ. ಆದ್ದರಿಂದ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವಂತೆ ನಿರೂಪಕರು ವಿನಂತಿ ಮಾಡಿಕೊಂಡರು. ಇದೇ ಸಂದರ್ಭ ಅರವಿಂದ್ ಬೋಳಾರ್ ಅವರು `ಶಿಳ್ಳೆ ಬೇಡ’ ಎಂದು ನಗೆ ಚಟಾಕಿ ಹಾರಿಸಿದರು. ಯಕ್ಷಗಾನದ ಪ್ರಸಂಗವೊಂದರಲ್ಲಿ ಪ್ರೇಕ್ಷಕರು ಶಿಳ್ಳೆ ಹಾಕಿದರು ಎಂದು ಕಲಾವಿದರೊಬ್ಬರು ವೇದಿಕೆಯಿಂದಲೇ ಗದರಿಸಿದ ಪ್ರಸಂಗಕ್ಕೆ ಟಾಂಗ್ ನೀಡಿದಂತಿತ್ತು.























