ಪುತ್ತೂರು: ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಇಲಾಖೆಗಳಿಗೆ ಹಳೆ ನ್ಯಾಯಾಲಯ ಕಟ್ಟಡದಲ್ಲಿ ಸ್ಥಳಾವಕಾಶ ನೀಡುವಂತೆ ಪುತ್ತೂರು ಸಹಾಯಕ ಆಯುಕ್ತರಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಮನವಿ ಮಾಡಿಕೊಂಡಿದ್ದಾರೆ.
ಮಂಗಳವಾರ ಸಹಾಯಕ ಆಯುಕ್ತರನ್ನು ಭೇಟಿಯಾಗಿ ಮನವಿ ನೀಡಿರುವ ಅವರು, ಪುತ್ತೂರಿನಲ್ಲಿ ನೂತನ ನ್ಯಾಯಲಯ ಸಂಕೀರ್ಣ ಉದ್ಘಾಟನೆಗೊಂಡಿದೆ. ಈ ಕಟ್ಟಡದಲ್ಲಿ ಪುತ್ತೂರಿನ ಎಲ್ಲಾ ನ್ಯಾಯಲಯದ ಕೆಲಸ ಕಾರ್ಯಗಳಿಗೆ ಬೇಕಾದ ಕಟ್ಟಡ ಹಾಗೂ ಸ್ಥಳಾವಕಾಶ ಇದೆ. ಹಳೆ ನ್ಯಾಯಾಲಯ ಕಟ್ಟಡ ಖಾಲಿ ಇದೆ.
ಪುತ್ತೂರು ತಾಲೂಕಿನ ಬಹಳಷ್ಟು ಸರಕಾರಿ ಇಲಾಖೆಗಳು ಬಾಡಿಗೆ ಕಟ್ಟಡ ಮತ್ತು ಇತರ ಇಲಾಖೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ , ಹಿಂದುಳಿದ ವರ್ಗಗಳ ಇಲಾಖೆ, I.T.D.P ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಹಾಗೂ ಇನ್ನಿತರ ಇಲಾಖೆಗಳಿಗೆ ಹಳೆ ನ್ಯಾಯಾಲಯ ಕಟ್ಟಡದಲ್ಲಿ ಸ್ಥಳಾವಕಾಶ ಮಾಡಿಕೊಡಬೇಕು. ಇದರಿಂದ ಸರಕಾರ ಕೊಡುವ ಬಾಡಿಗೆ ಹಾಗೂ ಸಾರ್ವಜನಿಕರಿಗೆ ಆಗುವ ಅನಾನೂಕೂಲವನ್ನು ತಪ್ಪಿಸಬಹುದು. ಈ ಬಗ್ಗೆ ತಾವು ಕೊಡಲೇ ಸೂಕ್ತ ಕ್ರಮ ಕೈಗೊಂಡು ಕರ್ನಾಟಕ ಲೋಕೊಪಯೋಗಿ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆ ಮತ್ತು ಬಾರ್ ಅಸೋಸಿಯೇಷನ್ ಜೊತೆ ಮಾತುಕತೆ ಮಾಡಿ ಈ ಇಲಾಖೆಗಳನ್ನು ಹಳೆ ಕೋರ್ಟ್ ಕಟ್ಟಡಗಳ ಸಂಕೀರ್ಣಕ್ಕೆ ಸ್ಥಳಾಂತರ ಮಾಡುವಂತೆ ಕೇಳಿಕೊಂಡಿದ್ದಾರೆ.






















