ಪುತ್ತೂರು: ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನವು ಕಾಸರಗೋಡು ಕುನಿಯ ಎಂಬಲ್ಲಿ 2026ರ ಫೆ. 4-8 ರ ತನಕ ನಡೆಯಲಿದ್ದು, ಇದರ ಪ್ರಚಾರಾರ್ಥ ಪುತ್ತೂರು ತಾಲೂಕು ಸಮಸ್ತ ಕೇರಳ ಜಂಇಯತ್ತುಲ್ ಉಲಾಮಾ ವತಿಯಿಂದ ಉಲಮಾ ಉಮರಾ ಸಂಗಮ ಹಾಗೂ ಸಮಸ್ತ ಆದರ್ಶ ಮಹಾ ಸಮ್ಮೇಳನವು ಪುತ್ತೂರು ಬದ್ರಿಯಾ ಮಸೀದಿ ವಠಾರದಲ್ಲಿ ಡಿ. 14ರಂದು ಅಪರಾಹ್ನ 2 ಗಂಟೆಗೆ ಆಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಧ್ಯಾಹ್ನ ಎರಡು ಗಂಟೆಗೆ ಸರಿಯಾಗಿ ಮರ್ಹೂಂ ಶೈಖುನಾ ತೊಟ್ಟಿ ಉಸ್ತಾದ್ ವೇದಿಕೆಯಲ್ಲಿ ಉಲಮಾ- ಉಮರಾ ಸಂಗಮ ನಡೆಯಲಿದ್ದು, ಅಹ್ಮದ್ ಪೂಕೋಯ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭವನ್ನು ಸಮಸ್ತ ಕೇಂದ್ರ ಮುತಾವರ ಸದಸ್ಯರಾದ ಉಸ್ಥಾನಲ್ ಫೈಝಿ ತೋಡಾರು ಉದ್ಘಾಟನೆ ಮಾಡಲಿದ್ದು, `ಮೊಹಲ್ಲಾ ಸಬಲೀಕರಣ’ ಎಂಬ ವಿಷಯದಲ್ಲಿ ಖ್ಯಾತ ಯುವ ವಿದ್ವಾಂಸ ಸುಹೈಲ್ ದಾರಿಮಿ ಆರ್. ಹೈತಮಿ ಹಳ್ಳಕ್ಕರ ವಿಷಯ ಮಂಡಿಸಲಿದ್ದಾರೆ ಎಂದರು.
ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಸಮಸ್ತ ಆದರ್ಶ ಮಹಾ ಸಮ್ಮೇಳನವು ಮರ್ಹೂಂ ಪುತ್ತೂರು ತಂಙಳ್ ವೇದಿಕೆಯಲ್ಲಿ ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಮಸ್ತ ಕೇಂದ್ರ ಮುತಾವರ ಸದಸ್ಯ ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ ಉಸ್ತಾದ್ ಉದ್ಘಾಟನೆಗೈಯ್ಯಲಿದ್ದಾರೆ. ಎಸ್ಕೆಎಸ್ಎಸ್ಎಫ್ ಕೇಂದ್ರ ಸಮಿತಿ ನಾಯಕ, ಯುವ ವಾಗ್ಮಿ ಸತ್ತಾರ್ ಪಂದಲ್ಲೂರ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಮ್ಮೇಳನದಲ್ಲಿ ಸಮಸ್ತದ ಜಿಲ್ಲಾ ನಾಯಕರು, ಎಸ್ ಎಸ್ಎಫ್ ಜಿಲ್ಲಾ ನಾಯಕರು, ವಲಯ ಮಟ್ಟದ ನಾಯಕರು, ಸಮಸ್ತ ಮದ್ರಸಾ ಮ್ಯಾನೇಜೆಂಟ್ ಅಸೋಸಿಯೇಷನ್ ಪದಾಧಿಕಾರಿಗಳು, ಸುಮಾರು ನೂರರಷ್ಟು ಮೊಹಲ್ಲಾದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಉಪಾಧ್ಯಕ್ಷ ಪಿ.ಉಮರ್ ದಾರಿಮಿ ಸಾಲ್ಮರ, ದ.ಕ. ಜಿಲ್ಲಾ ಅಧ್ಯಕ್ಷ ಶಂಸುದ್ದೀನ್ ದಾರಿಮಿ, ಎಸ್ಕೆಎಸ್ಎಸ್ಎಫ್ ಪುತ್ತೂರು ವಲಯ ಅಧ್ಯಕ್ಷ ಬಾತಿಷಾ ಹಾಜಿ ಪಾಟ್ರಕೋಡಿ ಉಪಸ್ಥಿತರಿದ್ದರು.



























