ಪುತ್ತೂರು: ಪುತ್ತೂರು ತಾಲೂಕು ಗೌಡ ಸೇವಾ ಸಂಘದ(Puttur Taluk Gowda Seva Sangha) ನೇತೃತ್ವದಲ್ಲಿ ಗೌಡ ಯುವ ಸಂಘ, ಗೌಡ ಮಹಿಳಾ ಸಂಘ ಮತ್ತು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸಹಯೋಗದೊಂದಿಗೆ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ದಶಮಾನೋತ್ಸವ ಸಂಭ್ರಮವು ಜ. 4ರಂದು ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿನಡೆಯಲಿದೆ ಎಂದು ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸ್ವಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ ಸಭಾ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಸಾಧನೆ ಮಾಡಿದ ಹಿರಿಯ, ಯುವ ಮತ್ತು ಮಹಿಳಾ ಹೀಗೆ 3 ಮಂದಿ ಸಾಧಕರಿಗೆ “ಸಾಧನ ಪ್ರಶಸ್ತಿ”ಯನ್ನು ನೀಡಲಾಗುವುದು ಎಂದರು. ಟ್ರಸ್ಟಿನಿಂದ ಇಬ್ಬರಿಗೆ ಸನ್ಮಾನ, ಸ್ಮರಣ ಸಂಚಿಕೆ ಸಾಂಕೇತಿಕ ಬಿಡುಗಡೆ ನಡೆಯಲಿದೆ ಎಂದರು.
ಸುಮಾರು 10 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಸಂಘಟನೆಯನ್ನು ಬಲಪಡಿಸುವ ಮತ್ತು ಸಮಾಜದಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದವರಿಗೆ ಸಹಕಾರ ನೀಡುವ ಹಿನ್ನಲೆಯಲ್ಲಿ ಗೌಡ ಯುವ ಸಂಘದಿಂದ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿಕೊಂಡಿದ್ದು, 64 ಗ್ರಾಮಗಳಲ್ಲಿ 66 ಒಕ್ಕೂಟ ಮತ್ತು 1050 ಗುಂಪುಗಳ ರಚನೆಯಾಗಿದ್ದು, ಆ ಮೂಲಕ 10,000ಕ್ಕೂ ಮಿಕ್ಕಿ ಸದಸ್ಯರಿರುತ್ತಾರೆ. ಇದೀಗ ಒಕ್ಕಲಿಗೆ ಸ್ವಸಹಾಯ ಟ್ರಸ್ಟಿನ ದಶಮಾನೋತ್ಸವನ್ನು ಬಹು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ.
ಹೊಸ ಪರಿಕಲ್ಪನೆ
ದಶಮಾನೋತ್ಸವಕ್ಕೆ ಪೂರಕವಾಗಿ ಎಲ್ಲಾ ಒಕ್ಕೂಟಗಳಲ್ಲಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಸಮಾಜದ ಹಲವು ಮಂದಿ ದಂಪತಿಯನ್ನು ಆಯಾ ಗ್ರಾಮಗಳಲ್ಲಿ ಗುರುತಿಸಿ ಗೌರವಿಸಲಾಗಿದೆ. ಈ ಹೊಸ ಪರಿಕಲ್ಪನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಹೆಸರಿಗೆ ಪುತ್ತೂರು ಖಾಸಗಿ ಬಸ್ ನಿಲ್ದಾಣದ ಎದುರುಗಡೆ ಸ್ವಂತ ಕಟ್ಟಡ ಹೊಂದಿದ್ದು, ದಶಮಾನೋತ್ಸವದ ನೆನಪಿಗೆ ನೂತನ ಸಭಾಭವನ ಕೂಡ ಇದೇ ಕಟ್ಟಡದಲ್ಲಿ ನಿರ್ಮಾಣಗೊಂಡಿದೆ. ಡಿ. 4ರಂದು ಇದು ಲೋಕಾರ್ಪಣೆಗೊಳ್ಳಲಿದೆ. ಒಟ್ಟು ದಶಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ವಾರ್ಷಿಕ ಸಮಾವೇಶದ ಜೊತೆಗೆ ನಡೆಯಲಿದೆ ಎಂದರು.
ಅಂದಿನ ಕಾರ್ಯಕ್ರಮಗಳು
ಅಂದು ಬೆಳಗ್ಗೆ 6ರಿಂದ ಗಣಪತಿ ಹವನ, 8 ಗಂಟೆಯಿಂದ ಸತ್ಯನಾರಾಯಣ ಪೂಜೆ, 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 10 ಗಂಟೆಯಿಂದ ಸಭಾ ಕಾರ್ಯಕ್ರಮ ಹಾಗೂ ಅನಂತರ ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮ
ಸಭಾ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಆರ್ಶಿರ್ವಚನ ಮಾಡಲಿದ್ದಾರೆ. ಈ ಕಾರ್ಯಕ್ರಮವು ಮಂಗಳೂರು ಶಾಖಾ ಮಠದ ಪರಮಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಶಾಸಕ ಸಂಜೀವ ಮಠಂದೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಸಂಸದ ಡಿ.ಕೆ. ಸುರೇಶ್, ರಾಜ್ಯ ಯುವ ಜಾತ್ಯಾತೀತ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜ್ಯ ಅಖಿಲ ಕರ್ನಾಟಕ ಮಹಿಳಾ ಒಕ್ಕೂಟ ಅಧ್ಯಕ್ಷೆ ಡಾ| ಶಾಂತ ಸುರೇಂದ್ರ ಗೌಡ, ಮಡಿಕೇರಿ ಶಾಸಕ ಮಂಥರ್ ಗೌಡ, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಮೊದಲಾದವರು ಭಾಗವಹಿಸಲಿದ್ದಾರೆ. ದ.ಕ. ಜಿಲ್ಲೆಯ ಎಲ್ಲಾ ತಾಲೂಕು ಒಕ್ಕಲಿಗ ಗೌಡ ಸಂಘಗಳ ಅಧ್ಯಕ್ಷರು ಅತಿಥಿಗಳಾಗಿ ಭಾಗವಹಿಸಿದ್ದಾರೆ.
ಅಪರಾಹ್ನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯದ ಚಲನಚಿತ್ರ ನಟರು ಮತ್ತು ಧಾರವಾಹಿ ಕಲಾವಿದರು ಭಾಗವಹಿಸಲಿದ್ದಾರೆ. ಒಟ್ಟು ಕಾರ್ಯಕ್ರಮದಲ್ಲಿ ಸುಮಾರು 6000ಕ್ಕೂ ಮಿಕ್ಕಿ ಸಮಾಜ ಬಾಂಧವರು ಸೇರುವ ನೀರಿಕ್ಷೆಯಿದ್ದು, ಸಭಾ ಕಾರ್ಯಕ್ರಮದ ಅನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಕೂಡಾ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ಚಿದಾನಂದ ಬೈಲಾಡಿ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್, ಪ್ರಚಾರ ಸಮಿತಿಯ ಪುರುಷೋತ್ತಮ ಮುಂಗ್ಲಿಮನೆ, ಒಕ್ಕಲಿಗ ಸ್ವಸಹಾಯ ಸೇವಾ ಟ್ರಸ್ಟ್ ಅಧ್ಯಕ್ಷ ಮನೋಹರ್ ಡಿ.ವಿ., ಪ್ರಮುಖರಾದ ವಿಶ್ವನಾಥ ಗೌಡ ಕೆಯ್ಯೂರು, ದಯಾನಂದ್, ಶ್ರೀಧರ್ ಕಣಜಾಲು ಉಪಸ್ಥಿತರಿದ್ದರು.