ಉಪ್ಪಿನಂಗಡಿ: ಪವಿತ್ರ ಕುಮಾರಧಾರಾ ನದಿಯ ದಡದಲ್ಲಿ ಬುಧವಾರ ಸಂಜೆ ಬೃಹತ್ ಮೊಸಳೆಯೊಂದು ಕಾಣಿಸಿಕೊಂಡು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. 34 ನೆಕ್ಕಿಲಾಡಿ ಸಮೀಪದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆಯು, ಜನರು ಹತ್ತಿರ ಬರುತ್ತಿದ್ದಂತೆ ಬಾಯಿ ತೆರೆದು ಆಕ್ರಮಣಕಾರಿಯಾಗಿ ವರ್ತಿಸಿ, ಕ್ಷಣಾರ್ಧದಲ್ಲಿ ನೀರಿಗೆ ಜಿಗಿದು ಮಾಯವಾಗಿದೆ.
ಶೇಖಬ್ಬ ಹಾಜಿ ಅವರ ಮನೆಯ ಸಮೀಪದ ನದಿ ದಡದಲ್ಲಿ ಮೊಸಳೆಯು ಬಿಸಿಲಿಗೆ ಮೈಯೊಡ್ಡಿ ವಿಶ್ರಾಂತಿ ಪಡೆಯುತ್ತಿತ್ತು. ಇದನ್ನು ದೂರದಿಂದ ನೋಡಿದ ಮಕ್ಕಳು, ಹಿರಿಯರಿಗೆ ವಿಷಯ ತಿಳಿಸಿದ್ದಾರೆ. ಕುತೂಹಲದಿಂದ ಸ್ಥಳೀಯರು ಹತ್ತಿರಕ್ಕೆ ತೆರಳುತ್ತಿದ್ದಂತೆ ಎಚ್ಚೆತ್ತುಕೊಂಡ ಮೊಸಳೆಯು, ತನ್ನ ಬೃಹತ್ ಬಾಯಿಯನ್ನು ಅಗಲಿಸಿ ಅಬ್ಬರಿಸಿ, ಜನರತ್ತ ಆಕ್ರಮಣಕಾರಿ ಭಂಗಿ ತೋರಿದೆ.
ಇದರಿಂದ ಬೆಚ್ಚಿಬಿದ್ದ ಜನರು ಹಿಂದಕ್ಕೆ ಸರಿಯುತ್ತಿದ್ದಂತೆ, ಅದು ವೇಗವಾಗಿ ನದಿಗೆ ಇಳಿದು ಕಣ್ಮರೆಯಾಗಿದೆ
ಈ ಭಾಗದಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ಮೊದಲೇನಲ್ಲ. ಎರಡು ವರ್ಷಗಳ ಹಿಂದೆ ನೇತ್ರಾವತಿ ನದಿಯಲ್ಲಿ ಎರಡು ದೈತ್ಯ ಮೊಸಳೆಗಳು ಹಾಗೂ ಕಳೆದ ವರ್ಷವೂ ಇದೇ ನದಿಯ ದಡದಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಂಡಿದ್ದನ್ನು ಸ್ಥಳೀಯರು ಸ್ಮರಿಸುತ್ತಾರೆ
ಬೇಟೆಗಾಗಿ ಬಂದ ಜಲಚರಗಳು:
ನದಿಯಲ್ಲಿ ಮೀನುಗಳ ಸಂಖ್ಯೆ ಹೆಚ್ಚಿರುವುದೇ ಮೊಸಳೆಗಳಂತಹ ಜಲಚರಗಳ ಉಪಸ್ಥಿತಿಗೆ ಕಾರಣ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. “ಎರಡು ವರ್ಷಗಳ ಹಿಂದೆ ನದಿಗೆ ಬಿಡಲಾಗಿದ್ದ ಮೀನಿನ ಮರಿಗಳು ಈಗ ದೊಡ್ಡದಾಗಿ ಬೆಳೆದಿವೆ. ಇವುಗಳನ್ನು ಬೇಟೆಯಾಡಲು ಮೊಸಳೆಗಳು ಮತ್ತು ನೀರು ನಾಯಿಗಳು ಬರುತ್ತಿವೆ” ಎನ್ನುತ್ತಾರೆ ಸ್ಥಳೀಯರು.
ಕೆಲ ದಿನಗಳ ಹಿಂದೆ ನೇತ್ರಾವತಿ ನದಿಯ ಕಡವಿನ ಬಾಗಿಲು ಬಳಿ ಸುಮಾರು 10 ನೀರು ನಾಯಿಗಳ ಹಿಂಡು ಕೂಡ ಕಾಣಿಸಿಕೊಂಡಿತ್ತು ಎಂದು ಪ್ರವಾಹ ರಕ್ಷಣಾ ತಂಡದ ಗೃಹ ರಕ್ಷಕ ದಿನೇಶ್ ಬಿ. ದೃಢಪಡಿಸಿದ್ದಾರೆ.
ಒಟ್ಟಿನಲ್ಲಿ, ಕುಮಾರಧಾರಾ ಮತ್ತು ನೇತ್ರಾವತಿ ನದಿಗಳಲ್ಲಿ ಮೊಸಳೆ ಹಾಗೂ ನೀರು ನಾಯಿಗಳಂತಹ ವನ್ಯಜೀವಿಗಳ ಸಂಚಾರ ಹೆಚ್ಚಾಗಿದ್ದು. ನದಿ ತೀರದ ನಿವಾಸಿಗಳು ಮತ್ತು ನದಿಯನ್ನು ಅವಲಂಬಿಸಿರುವವರು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವನ್ನು ಈ ಘಟನೆ ಒತ್ತಿ ಹೇಳಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.