ಬೆಂಗಳೂರು: ಸದನದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸದ ಹಿನ್ನೆಲೆ 8 ಐಎಎಸ್ ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಿಎಸ್ ಶಾಲಿನಿ ರಜನೀಶ್ ಕ್ರಮಕೈಗೊಂಡಿದ್ದಾರೆ. ಇಲಾಖೆ ಅಧಿಕಾರಿಗಳು ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಆರ್.ವಿನೋತ್ ಪ್ರಿಯಾ, ವಸತಿ ಇಲಾಖೆ ಕಾರ್ಯದರ್ಶಿ ಮೋಹನ್ ರಾಜ್ ಕೆ.ಪಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ ಪ್ರಸಾದ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಆರ್.ಗೀರಿಶ್, ಲೋಕಪಯೋಗಿ ಇಲಾಖೆ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಕಂದಾಯ ಇಲಾಖೆ ರಾಜೇಂದರ್ ಕುಮಾರ್ ಕಟಾರಿಯಾಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಸರ್ಕಾರಕ್ಕೆ ತೀವ್ರ ಮುಜುಗರ, ಶಾಸಕರ ಹಕ್ಕು, ಸದನದ ಘನತೆಗೆ ಚ್ಯುತಿಯುಂಟು ಮಾಡಿರುತ್ತದೆ. ಸದನದಲ್ಲಿ ಪಶ್ನೆಗಳಿಗೆ ಏಕೆ ಉತ್ತರ ನೀಡಿಲ್ಲ? ಉತ್ತರಿಸದ ಬಗ್ಗೆ ಲಿಖಿತ ಸಮಜಾಯಿಸಿ ನೀಡುವಂತೆ ಎಲ್ಲಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.
























