ಕರ್ನಟಕ ಹೈಕೋರ್ಟ್ನ ಆದೇಶದಂತೆ ಜೂನ್ 16ರಿಂದ ರಾಜ್ಯದಾದ್ಯಂತ 8 ಲಕ್ಷಕ್ಕೂ ಅಧಿಕ ಬೈಕ್ ಟ್ಯಾಕ್ಸಿಗಳ ಸೇವೆಯನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ.
ಇದರಿಂದ ರಸ್ತೆಯಲ್ಲಿ ಬೈಕ್ ಟ್ಯಾಕ್ಸಿಗಳು ಕಂಡುಬಂದರೆ ಸಾರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಕ್ರಮ ಕೈಗೊಳ್ಳಲಿದ್ದಾರೆ. ಆದರೆ, ಈ ವಿಷಯದ ಕುರಿತು ಜೂನ್ 24ರಂದು ಹೈಕೋರ್ಟ್ನಲ್ಲಿ ವಿಚಾರಣೆ ನಿಗದಿಯಾಗಿದ್ದು, ಅಂತಿಮ ತೀರ್ಪಿನ ನಿರೀಕ್ಷೆಯಿದೆ. ಈ ನಿಷೇಧದಿಂದ 1 ಲಕ್ಷಕ್ಕೂ ಹೆಚ್ಚು ಚಾಲಕರು ಉದ್ಯೋಗ ಕಳೆದುಕೊಂಡಿದ್ದು, ನಿಷೇಧವನ್ನು ಮರುಪರಿಶೀಲಿಸಲು ಒತ್ತಾಯಗಳು ಕೇಳಿಬಂದಿವೆ.
ರಾಜ್ಯ ಸರಕಾರದ ಆದೇಶದಂತೆ, ಬೈಕ್ ಟ್ಯಾಕ್ಸಿಗಳಿಗೆ ಮಾರ್ಗಸೂಚಿಗಳು ಜಾರಿಯಾಗುವವರೆಗೆ ಸೇವೆ ಸ್ಥಗಿತಗೊಳಿಸಲು ಹೈಕೋರ್ಟ್ ಸೂಚಿಸಿತ್ತು. ಕಂಪನಿಗಳಿಗೆ ನೀಡಲಾಗಿದ್ದ 6 ವಾರಗಳ ಕಾಲಾವಕಾಶ ಜೂನ್ 15ರಂದು ಮುಕ್ತಾಯಗೊಂಡಿತು. ಇದರಿಂದ ರ್ಯಾಪಿಡೋ, ಉಬರ್ ಮುಂತಾದ ಕಂಪನಿಗಳು ತಮ್ಮ ಆ್ಯಪ್ಗಳಿಂದ ಬೈಕ್ ಟ್ಯಾಕ್ಸಿ ಸೇವೆಯ ಆಯ್ಕೆಯನ್ನು ತೆಗೆದುಹಾಕಿವೆ.
2021ರಲ್ಲಿ ಆರಂಭವಾಗಿದ್ದ ಈ ಬೈಕ್ ಟ್ಯಾಕ್ಸಿ ಆಟೋ ಚಾಲಕರು ಮತ್ತು ಕ್ಯಾಬ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಲ್ಲಿ ಬೈಕ್ ಟ್ಯಾಕ್ಸಿ ಸವಾರರ ಮೇಲೆ ಹಲ್ಲೆಯೂ ನಡೆದಿತ್ತು. ಆದರೆ ಕಡಿಮೆ ಖರ್ಚಿನಲ್ಲಿ ಬೇಗ ಪ್ರಯಾಣಿಸಬಹುದಾಗಿದ್ದ ಬೈಕ್ ಟ್ಯಾಕ್ಸಿ ಪ್ರಯಾಣವನ್ನು ಲಕ್ಷಾಂತರ ಮಂದಿ ಇಷ್ಟಪಡುತ್ತಿದ್ದರು. ಈಗ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ ಗೊಂಡಿದೆ. ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಕಂಪೆನಿಗಳು ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಕೋರ್ಟ್ ಆದೇಶಕ್ಕೆ ಗೌರವ
ಹೈಕೋರ್ಟ್ನ ಇತ್ತೀಚಿನ ಆದೇಶದ ಅನು ಸಾರವಾಗಿ 2025ರ ಜೂನ್ 16ರಿಂದ ಕರ್ನಾಟಕದಲ್ಲಿ ನಮ್ಮ ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಾವು ಕಾನೂನನ್ನು ಗೌರವಿಸುತ್ತೇವೆ. ಹೈಕೋರ್ಟ್ ನಿರ್ದೇಶನ ಪಾಲಿಸುತ್ತೇವೆ ಎಂಬುದಾಗಿ ಬೈಕ್ ಟ್ಯಾಕ್ಸಿ ಸೇವೆಗಳ ಸ್ಥಗಿತ ಕುರಿತು ಆ್ಯಪ್ ಮೂಲಕ ತನ್ನ ಗ್ರಾಹಕರಿಗೆ ರ್ಯಾಪಿಡೋ ಕಂಪೆನಿ ಮಾಹಿತಿ ನೀಡಿದೆ. ನಿಯಮಗಳಿಗೆ ಅನುಗುಣವಾಗಿ, ಸುಸ್ಥಿರ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ನಿಯಂತ್ರಕ ಚೌಕಟ್ಟನ್ನು ರೂಪಿಸಲು ಸಾರಿಗೆ ಇಲಾಖೆ ಮತ್ತು ಕರ್ನಾಟಕ ಸರ್ಕಾರದೊಂದಿಗೆ ಸಹಯೋಗದಿಂದ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ಪ್ರಯಾಣಿಕರ ಸುರಕ್ಷೆಯನ್ನು ಖಚಿತಪಡಿಸಿಕೊಳ್ಳುವ ಜತೆಗೆ ಗಿಗ್ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ ಎಂದು ರ್ಯಾಪಿಡೋ ಸಂಸ್ಥೆ ತಿಳಿಸಿದೆ.
ನಿಷೇಧದಿಂದ ನಷ್ಟವೇನು ?
ರಾಜ್ಯದಲ್ಲಿ ಲಕ್ಷಾಂತರ ಮಂದಿ ಬೈಕ್ ಟ್ಯಾಕ್ಸಿ ಸೇವೆಯನ್ನೇ ಅವಲಂಬಿಸಿದ್ದಾರೆ. ವಿದ್ಯಾರ್ಥಿಗಳು, ದಿನಗೂಲಿ ನೌಕರರು ಸಹಿತ ಬಹುತೇಕ ನಿರುದ್ಯೋಗಿ ಗಳಿಗೆ ಇದು ಆಸರೆಯಾಗಿತ್ತು. ಈಗ ಈ ಬೆಳವಣಿಗೆಯಿಂದ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಹಲವು ಮಂದಿಗೆ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಇನ್ನು ಆಟೋ, ಬಾಡಿಗೆ ಕಾರುಗಳಿಗೆ ದುಪ್ಪಟ್ಟು ಹಣ ತೆತ್ತು ಪ್ರಯಾಣಿಸುತ್ತಿದ್ದವರಿಗೆ ಆಟೋಟ್ಯಾಕ್ಸಿ ವರದಾನವಾಗಿತ್ತು. ಈಗ ಮತ್ತೆ ಆಟೋ, ಟ್ಯಾಕ್ಸಿ ಮೊರೆ ಹೋಗಬೇಕಾಗಿದೆ.
ರಾಜ್ಯದಲ್ಲಿ 8 ಲಕ್ಷ ಬೈಕ್ ಟ್ಯಾಕ್ಸಿ
ರಾಜ್ಯದಲ್ಲಿ ಸುಮಾರು 1.50 ಲಕ್ಷಕ್ಕೂ ಹೆಚ್ಚಿನ ಬೈಕ್ ಟ್ಯಾಕ್ಸಿಗಳಿವೆ. ಮೊದಲು ಸರಕಾರವು ಬೈಕ್ ಟ್ಯಾಕ್ಸಿಗಳಿಗೆ ಗೈಡೈನ್ಸ್ ಕೊಡಲಿ. ಅದನ್ನು ಪಾಲಿಸದಿದ್ದರೆ ಅದನ್ನು ಬ್ಯಾನ್ ಮಾಡಿ. ರ್ಯಾಪಿಡೋದವರು ಜಿಎಸ್ಟಿ ತೆರೆಗೆ 100 ಕೋಟಿ ರೂ.ಗೂ ಹೆಚ್ಚು ತೆರಿಗೆ ಪಾವತಿಸಿದ್ದಾರೆ. ಇದರಿಂದ ಸಾಕಷ್ಟು ಬಡ ಉದ್ಯೋಗಿಗಳ ಮೇಲೆ ಹೊಡೆತ ಬಿದ್ದಿದೆ ಎಂದು ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಸಲೀಂ ತಿಳಿಸಿದ್ದಾರೆ.
ಪುನರಾರಂಭಕ್ಕೆ ಅನುಮತಿ ಕೊಡಿ: ರಾಹುಲ್, ಸಿದ್ದುಗೆ ಪತ್ರ
ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತದಿಂದ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಲಕ್ಷಕ್ಕೂ ಅಧಿಕ ಮಂದಿ ತಮ್ಮ ಕೆಲಸವನ್ನು ಕಳೆದುಕೊಂಡು, ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳು, ದಿನಗೂಲಿ ನೌಕರರು ಎನ್ನದೇ ಅನೇಕರು ಯಾವುದೇ ಕೆಲಸ ಸಿಗದಿದ್ದಾಗ ಅಥವಾ ತಮ್ಮ ಬಿಡುವಿನ ಸಮಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಆರಂಭಿಸಿ ಜೀವನೋಪಾಯ ಮಾರ್ಗವನ್ನು ಕಂಡುಕೊಂಡಿದ್ದರು. ಆದರೆ ನಿಷೇಧದಿಂದ ಅವರ ಜೀವನೋಪಾಯಕ್ಕೆ ಧಕ್ಕೆಯಾಗಿದೆ. ಹಾಗಾಗಿ ನಿಷೇಧ ವಾಪಸ್ ಪಡೆದು. ಸೇವೆಗೆ ಅನುಮತಿ ಕೊಡಿ ಎಂದು ನಮ್ಮ ಟ್ಯಾಕ್ಸಿ ಅಸೋಸಿಯೇಶನ್ ಅಧ್ಯಕ್ಷ ಮೊಹಮ್ಮದ್ ಸಲೀಂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಬೈಕ್ ಟ್ಯಾಕ್ಸಿ ರದ್ದಾದರೂ “ಪಾರ್ಸೆಲ್ ಹೆಸರಲ್ಲಿ ಸೇವೆ!
ಬೆಂಗಳೂರು: ಸಾರಿಗೆ ಇಲಾಖೆ ಚಾಪೆ ಕೆಳಗೆ ನುಗ್ಗಿದರೆ, ಬೈಕ್ ಟ್ಯಾಕ್ಸಿ ಆಪರೇಟರ್ಗಳು ಈಗ ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಜೂನ್ 16ರಿಂದ ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿ, ಅವುಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಬೈಕ್ ಟ್ಯಾಕ್ಸಿ ಆಪರೇಟರ್ಗಳು ತಮ್ಮ ಆ್ಯಪ್ನಿಂದ “ಟ್ಯಾಕ್ಸಿ’ ಆಯ್ಕೆಯನ್ನು ತೆಗೆದುಹಾಕಿ, “ಪಾರ್ಸೆಲ್’ ಆಯ್ಕೆಯನ್ನು ನೀಡಿದ್ದಾರೆ. ಈಗ ಪಾರ್ಸೆಲ್’ ಎಂದು ಬುಕ್ ಮಾಡಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪ್ರತಿಯಾಗಿ ಸಾರಿಗೆ ಸಿಬಂದಿ ಪ್ರತಿತಂತ್ರ ರೂಪಿಸಿದ್ದು, ತಾವೇ ಆಪರೇಟರ್ಗಳ ಆ್ಯಪ್ನಲ್ಲಿ “ಪಾರ್ಸೆಲ್’ ಸೇವೆಯನ್ನು ಬುಕಿಂಗ್ ಮಾಡುತ್ತಿದ್ದು, ಬೈಕ್ ಟ್ಯಾಕ್ಸಿಗಳು ಬಂದಾಕ್ಷಣ ಹಿಡಿದು ಜಪ್ತಿ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.