ಪುತ್ತೂರು: ಬುಧವಾರದಿಂದ ಆರಂಭಗೊಂಡ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಂಗವಾಗಿ ಅಯೋಧ್ಯೆಯಿಂದ ಹೊರಟ ಶ್ರೀರಾಮ ಜ್ಯೋತಿ, ಮೂಲಮೃತ್ತಿಕೆ, ಪ್ರಯಾಗರಾಜ್ ನ ತ್ರಿವೇಣಿ ಸಂಗಮದ ಗಂಗಾಜಲ, ಅಂಜನಾದ್ರಿಯಿಂದ ಹನುಮ ಜ್ಯೋತಿ, ಮೃತ್ತಿಕೆ, ಪಂಪ ಸರೋವರದ ಪವಿತ್ರ ಜಲ ಸಂಗ್ರಹಿಸಿಕೊಂಡು ಏ. 9ರಂದು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಾಲಯಕ್ಕೆ ಪ್ರವೇಶಿಸಿತು.

ಸನ್ನಿಧಿಗೆ ಆಗಮಿಸಿದ ಜ್ಯೋತಿಯನ್ನು ಭದ್ರದೀಪಕ್ಕೆ ಜ್ವಲಿಸಲಾಯಿತು.
ಅಯೋಧ್ಯೆಯಿಂದ ಹೊರಟ ಜ್ಯೋತಿಯು ಶ್ರೀರಾಮನ ಪರಮ ಭಕ್ತ ಆಂಜನೇಯ ಹುಟ್ಟಿರುವ ಅಂಜನಾದ್ರಿಗೆ ಬಂದು ಅಲ್ಲಿನ ಜ್ಯೋತಿಯನ್ನು ಸ್ಪರ್ಶಿಸಿ ಅಲ್ಲಿಂದ ಕಾರ್ಕಳಕ್ಕೆ ಆಗಮಿಸಿತು. ಕಾರ್ಕಳದಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ರಥದಲ್ಲಿ ಶ್ರೀರಾಮ ಹನುಮ ಜ್ಯೋತಿಯ ರಥಯಾತ್ರೆ ಎ. 2ರಂದು ಹೊರಟು ಪುತ್ತೂರು, ಸುಳ್ಯ, ಕಡಬ ತಾಲೂಕಿನ ಸುಮಾರು 60 ಗ್ರಾಮಗಳಲ್ಲಿ ಸಂಚರಿಸಿ ಪ್ರತೀ ಮನೆಗಳಲ್ಲೂ ಶ್ರೀರಾಮ ಹನುಮ ಜ್ಯೋತಿಯನ್ನು ಬೆಳಗಿಸಿ ಏ. 9ರಂದು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿತು.
ಹನುಮಗಿರಿ ಕ್ಷೇತ್ರಕ್ಕೆ ಆಗಮಿಸಿದ ರಥಯಾತ್ರೆಯನ್ನು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರಮುಖರು ಸ್ವಾಗತಿಸಿದರು. ಬಳಿಕ ರಥದಲ್ಲಿದ್ದ ಶ್ರೀ ರಾಮ ಹನುಮ ಜ್ಯೋತಿ, ಗಂಗಾಜಲ, ಮೃತ್ತಿಕೆ, ಪವಿತ್ರ ಜಲ ಇರಿಸಿದ್ದ ಪೀಠವನ್ನು ಆಂಜನೇಯನ ಸನ್ನಿಧಿಗೆ ತರಲಾಯಿತು. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಶ್ರೀ ರಾಮ ಹನುಮ ಜ್ಯೋತಿಯನ್ನು ಆಂಜನೇಯ ದೇವರ ಎದುರಿನ ದೀಪದಲ್ಲಿ ಪ್ರಜ್ವಲಿಸಿದರು. ಬಳಿಕ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.






















