ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವೇದ ಸಂವರ್ಧನ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ವಸಂತ ವೇದ ಪಾಠಶಾಲೆ ಏ. 22ರಿಂದ ಆರಂಭವಾಗಲಿದೆ.
ಋಗ್ವೇದ ಮತ್ತು ಯಜುರ್ವೇದ ವಿದ್ಯಾರ್ಥಿಗಳಿಗಾಗಿ ನಿತ್ಯಾನುಷ್ಠಾನ, ರುದ್ರಾದಿ ಸೂಕ್ತ ಮಂತ್ರಗಳು, ಪೂಜಾ ವಿಧಾನಗಳನ್ನು ಮೂರು ತರಗತಿಗಳಾಗಿ ವಿಂಗಡಿಸಲಾಗಿದೆ. ಏ 22ರಂದು ಆರಂಭವಾಗುವ ಈ ವಿಶೇಷ ತರಬೇತಿ ಶಿಬಿರ ಮೇ 24ರವರೆಗೆ ನಡೆಯಲಿದೆ.
ಪ್ರಾಚಾರ್ಯರಾದ ವೇ.ಮೂ. ಬಡಜ ಜಯರಾಮ ಜೋಯಿಸರು ಮತ್ತು ಸಂಸ್ಕೃತ ವಿದ್ವಾಂಸರಾದ ವೇ ಮೂ. ಮಂಜುಳಗಿರಿ ವೆಂಕಟರಮಣ ಭಟ್, ನಿವೃತ್ತ ಮುಖ್ಯ ಗುರುಗಳು ಹಾಗೂ ಇತರ ವೇದ ವಿದ್ವಾಂಸರ ಸಹಕಾರದಲ್ಲಿ ತರಗತಿ ನಡೆಸಲು ನಿರ್ಣಯಿಸಲಾಗಿದೆ.
ಶೀಘ್ರದಲ್ಲೇ ದೇವಸ್ಥಾನದ ಆಡಳಿತ ಮಂಡಳಿ ಅರ್ಜಿ ಆಹ್ವಾನಿಸಲಿದ್ದು, ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ನೋಂದಣಿ ನಡೆಯಲಿದೆ.
ಯಜುರ್ವೇದಿಗಳಿಗಲ್ಲದೇ ಎರಡನೇ ತರಗತಿಯ ವಿಭಾಗದಲ್ಲಿ ಋಗ್ವೇದಿಗಳೂ ಭಾಗವಹಿಸಬಹುದು. ಮೂರನೇ ತರಗತಿಯಲ್ಲಿ ವಯಸ್ಕರನ್ನೂ ಸೇರ್ಪಡೆ ಮಾಡಲು ಅವಕಾಶವಿದೆ. ಶಿವ ಪೂಜೆ , ಗಣಪತಿ ಹೋಮ, ನಿತ್ಯ ಪೂಜೆ, ವಿವಿದ ಮುದ್ರೆಗಳು , ಕ್ರಮಗಳ ಅಭ್ಯಾಸಾದಿ ವರ್ಗಗಳನ್ನು ನಡೆಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಯಂ.ಟಿ. ಜಯರಾಮ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕಕ್ಕಾಗಿ 94484 45827, 94493 86677, 93809 40675.























