ಉಡುಪಿ: ಮಲ್ಪೆ ಕಡಲ ತೀರದಲ್ಲಿ ಕೃಷ್ಣನ ವಿಗ್ರಹ ತೇಲಿ ಬಂದು ಪವಾಡ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಭಾನುವಾರ ಕೃಷ್ಣಮಠದಲ್ಲಿ ಇಸ್ಕಾನ್ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮ ಇದ್ದು, ಸುಮಾರು 18 ಬಸ್ಸುಗಳಲ್ಲಿ ಇಸ್ಕಾನ್ ಅನುಯಾಯಿಗಳು ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕಡಲಲ್ಲಿ ತೇಲಿ ಬಂದ ವಿಗ್ರಹವೊಂದು ಎಲ್ಲರ ಗಮನ ಸೆಳೆಯಿತು.
ಅಲ್ಲಿ ಸೇರಿದ್ದ ಸಾವಿರಾರು ಮಂದಿ ಆ ವಿಗ್ರಹವನ್ನು ಮೇಲಕ್ಕೆ ತೆಗೆದು ಸಂಭ್ರಮಿಸಿದರು. ಉಡುಪಿಯ ಕೃಷ್ಣ ದೇವರು ಕೂಡ ಕಡಲಲ್ಲೇ ಲಭ್ಯವಾದ ಕಾರಣ, ಭಾವುಕ ಭಕ್ತರು ಅದೇ ಪವಾಡ ಮತ್ತೊಮ್ಮೆ ಸಂಭವಿಸಿದೆ ಎಂದು ಕುಣಿದು ಸಂಭ್ರಮಿಸಿದರು. ಅಲ್ಲಿ ಸೇರಿದ್ದ ಸಾವಿರಾರು ಇಸ್ಕಾನ್ ಭಕ್ತರು ಆ ವಿಗ್ರಹವನ್ನು ಕೃಷ್ಣನೆಂದೇ ಭಾವಿಸಿ ಅಲ್ಲಿಂದ ಕೊಂಡೊಯ್ದರು. ಆದರೆ ಮೇಲ್ನೋಟಕ್ಕೆ ಇದು ಕರಾವಳಿ ಭಾಗದ ದೇಗುಲಗಳ ಪ್ರವೇಶ ದ್ವಾರದ ಬಳಿ ಇರುವ ಜಯ- ವಿಜಯರ ವಿಗ್ರಹ ಇದಾಗಿರಬಹುದು ಎಂಬ ವಿಶ್ಲೇಷಣೆಗಳೂ ಕೇಳಿಬಂದಿವೆ.
ದೇವಾಲಯದಲ್ಲಿ ಭಿನ್ನಗೊಂಡ ವಿಗ್ರಹಗಳನ್ನು ಸಮುದ್ರಕ್ಕೆ ಮುಳುಗಿಸಿ ಬಿಡುವ ಪರಿಪಾಠ ಇದೆ. ಈ ರೀತಿ ಮುಳುಗಿಸಿ ಬಿಟ್ಟ ಜಯ- ವಿಜಯರ ವಿಗ್ರಹವೇ ತೇಲಿ ಬಂದು ಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ. ಇದು ಕಡಲಲ್ಲಿ ತೇಲಿ ಬಂದ ಕೃಷ್ಣನ ವಿಗ್ರಹ ಎಂದು ಎಲ್ಲರೂ ಸಂಭ್ರಮಿಸಿ ಕುಣಿಯುವಂತಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.



























