ಪುತ್ತೂರಿನ ಹೃದಯ ಭಾಗದಲ್ಲಿ ಇರುವ ಮಾಯ್ ದೆ ದೇವುಸ್ ಚರ್ಚಿನಲ್ಲಿ ಯೇಸುಕ್ರಿಸ್ತನ ಪುನರ್ಜನ್ಮವನ್ನು ಸಾರುವ ಈಸ್ಟರ್ ಹಬ್ಬವನ್ನು ಆಚರಿಸಲಾಯಿತು.
ಚರ್ಚ್ ವಠಾರದ ಎಲ್ಲಾ ವಿದ್ಯುತ್ ಬೆಳಕನ್ನು ನಂದಿಸಿ ನಂತರ ಒಂದು ದೊಡ್ಡ ಮೇಣದ ಬತ್ತಿಗೆ, ಯೇಸುವನ್ನು ಶಿಲುಬೆಗೆ ಏರಿಸಿದಾಗ ಹೊಡೆದಿರುವoತಹ ಮೊಳೆಗಳನ್ನು ಚುಚ್ಚಲಾಯಿತು. ತದನಂತರ ಆಶೀರ್ವದಿಸಿದ ಹೊಸ ಬೆಂಕಿಯಿಂದ ಮೇಣದ ಬತ್ತಿಯನ್ನು ಹೊತ್ತಿಸಲಾಯಿತು. ಈ ಮೇಣದ ಬತ್ತಿಯನ್ನು ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್ ರವರು ಹಿಡಿದು ಜನರ ನಡುವಿನಿಂದ ಹೋಗುವಾಗ ಇದು ಯೇಸಕ್ರಿಸ್ತರ ಜ್ಯೋತಿಯು ಎಂದು ಉದ್ಗರಿಸಿದಾಗ ಎಲ್ಲಾ ಭಕ್ತಾದಿಗಳು ದೇವರಿಗೆ ಮಹಿಮೆ ಸಲ್ಲಲ್ಲಿ ಎಂದು ಜೈಕಾರವನ್ನು ಕೂಗುತ್ತಾ ಆ ಜ್ಯೋತಿಯಿಂದ ತಮ್ಮಲ್ಲಿ ಇರುವ ಮೇಣದ ಬತ್ತಿಯನ್ನು ಹೊತ್ತಿಸಿದರು.
ಧಾರ್ಮಿಕ ವಿಧಿವಿಧಾನಗಳು, ಬೈಬಲ್ ನ ಹಳೆ ಒಡoಬಡಿಕೆಯ ಮೂರು ವಾಚನಗಳು, ಸ್ತುತಿ ಗೀತೆಗಳು, ಆದನಂತರ ಪುನರುತ್ಥಾನ ಯೇಸುವಿನ ಪ್ರತಿಮೆಯು ಆನವರಣಗೊಳಿಸಲಾಯಿತು.
ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ ರವರ ನೇತೃತ್ವದಲ್ಲಿ ಬಲಿ ಪೂಜೆ ನಡೆಯಿತು. ಬಲಿ ಪೂಜೆಯಲ್ಲಿ ವಂದನೀಯ ರೂಪೇಶ್ ತಾವ್ರೋರವರು ತಮ್ಮ ಪ್ರವಚನದಲ್ಲಿ ಯೇಸು ಕ್ರಿಸ್ತರ ಪುನರುತ್ಥಾನ ನಮಗೆ ನಿರೀಕ್ಷೆಯ ಯಾತ್ರಿಕರಾಗಲು ಕರೆ ಕೊಡುತ್ತದೆ. “ಗುಡ್ ಫ್ರೈಡೇ ಜನರ ದಿನವಾಗಿತ್ತು – ಅವರು ಯೇಸುವನ್ನು ಕೊಂದರು. ಆದರೆ ಈಸ್ಟರ್ ದಿನ ದೇವರ ದಿನವಾಗಿದೆ – ಆವರು ಜೀವವನ್ನು ಕೊಟ್ಟರು. ಯೇಸುವಿನ ಪುನರುತ್ಥಾನವು ನಮಗೆ ನಂಬಿಕೆಯ ಜೀವನ, ನಿರೀಕ್ಷೆಯ ಜೀವನ ಮತ್ತು ಧೈರ್ಯಪೂರ್ಣ ಸತ್ಯದ ಜೀವನವನ್ನು ನಡೆಸಬೇಕೆಂಬ ಆಹ್ವಾನ ನೀಡುತ್ತದೆ,” ಎಂದು ಭೋದಿಸಿದರು.
ವಂದನೀಯ ಮ್ಯಾಕ್ಸಿಮ್ ಡಿಸೋಜಾ ಮತ್ತು ವಂದನೀಯ ಅಶೋಕ್ ರಾಯನ್ ಕ್ರಾಸ್ತಾ ರವರು ನೀರನ್ನು ಆಶೀರ್ವದಿಸಿದರು. ಮೇಣದಬತ್ತಿಯನ್ನು ಬೆಳಗಿಸಿ ಎಲ್ಲಾ ಭಕ್ತಾದಿಗಳು ಯೇಸು ಕ್ರಿಸ್ತರು ನಮಗೆ ನೀಡಿರುವ ಪುನರುತ್ಥಾನವನ್ನು ವಿಶ್ವಾಸಿಸುತ್ತೇವೆ ಎನ್ನುವ ವಾಗ್ದಾನವನ್ನು ನವೀಕರಿಸಿದ ನಂತರ ಪವಿತ್ರ ನೀರನ್ನು ಭಕ್ತಾದಿಗಳಿಗೆ ಸಿಂಪಡಿಸಿ ಎಲ್ಲರನ್ನು ಪಾವನ ಮಾಡಿದರು.
ಕ್ರಿಸ್ತನ ಪುನರ್ಜನ್ಮ ಪ್ರಯುಕ್ತ ಸಾವಿರಾರು ಭಕ್ತಾದಿಗಳಿಗೆ ತಿಂಡಿ ಮತ್ತು ಪಾನೀಯಗಳನ್ನು ವಿತರಿಸಲಾಯಿತು.