ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನದ ಚುನಾವಣೆ ಏಪ್ರಿಲ್ 13ರಂದು ನಡೆಯಲಿದ್ದು, ಗುರುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಜಿಲ್ಲಾ ಪ್ರತಿನಿಧಿಗಳ ಆಯ್ಕೆಯಲ್ಲಿ ಶರ್ಮಾ ಬೆಂಬಲಿತ ಹಲವರು ಅವಿರೋಧ ಆಯ್ಕೆ ಆಗಿದ್ದು, ಘೋಷಣೆ ಒಂದೇ ಬಾಕಿ ಉಳಿದಿದೆ. ಈ ಮೂಲಕ ಪ್ರಚಾರದ ಮೊದಲ ಹಂತದಲ್ಲೇ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಅವರು ಮೇಲುಗೈ ಸಾಧಿಸಿದ್ದಾರೆ.
ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಬೆಂಬಲದೊಂದಿಗೆ ಅಧ್ಯಕ್ಷ ಗಾದಿಗಾಗಿ ಕಣಕ್ಕೆ ಇಳಿದಿರುವ ಭಾನುಪ್ರಕಾಶ್ ಶರ್ಮಾ ಅವರ ಪರವಾಗಿ ನಿಂತಿರುವ ಹಲವರು ಜಿಲ್ಲಾ ಪ್ರತಿನಿಧಿಗಳಾಗಿ ಅವಿರೋಧ ಆಯ್ಕೆ ಆಗಿದ್ದಾರೆ.
- ಕೊಡಗಿನಲ್ಲಿ ದುರ್ಗಾ ಪ್ರಸಾದ್
- ಮಂಗಳೂರಿನಲ್ಲಿ ಮಹೇಶ್ ಕಜೆ
- ಬಳ್ಳಾರಿಯಲ್ಲಿ ಡಾ.ಶ್ರೀನಾಥ್
- ವಿಜಯನಗರದಲ್ಲಿ ಕೆ.ದಿವಾಕರ್
- ಬೆಳಗಾವಿಯಲ್ಲಿ ಅಕ್ಷಯ ಕುಲಕರ್ಣಿ
- ಚಿಕ್ಕಮಗಳೂರಿನಲ್ಲಿ ಜೆ.ಎಸ್.ಮಹಾಬಲ
- ಗದಗದಲ್ಲಿ ಶ್ರೀನಿವಾಸ ಹುಯಿಲಗೋಳ
- ಉತ್ತರ ಕನ್ನಡದಲ್ಲಿ ಶ್ರೀಪಾದ ನಾರಾಯಣ ರಾಯಸದ್
ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಚುನಾವಣೆ ಮೂಲಕ ಪ್ರತಿನಿಧಿಗಳ ಆಯ್ಕೆ ನಡೆಯಲಿದೆ.
ದಿನ ಕಳೆದಂತೆ ಬೆಂಗಳೂರಿನ ಜತೆಗೆ ಇತರ ಜಿಲ್ಲೆಗಳಲ್ಲಿ ಪ್ರಚಾರದ ಜತೆಗೆ ಚುನಾವಣಾ ಕಾವು ಹೆಚ್ಚತೊಡಗಿದೆ.




















