ಪುತ್ತೂರು: ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಭಾರ ಪ್ರಾಂಶುಪಾಲರ ಅಮಾನತು ವಿಚಾರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕ ಕಿಶೋರ್ ಕುಮಾರ್ ಅವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಧೂಳಿನ ಸಮಸ್ಯೆಯಿಂದ ಬೇಸತ್ತ ವಿದ್ಯಾರ್ಥಿನಿಯರು ನಡೆಸಿದ ನ್ಯಾಯಸಮ್ಮತ ಪ್ರತಿಭಟನೆಗೆ ಸ್ಪಂದಿಸಿದ ಪ್ರಭಾರ ಪ್ರಾಂಶುಪಾಲರಾದ ವೇದಶ್ರೀ ನಿಡ್ಯಾ ಅವರನ್ನು ಅಮಾನತು ಮಾಡಿರುವುದು “ದ್ವೇಷದ ರಾಜಕಾರಣ” ಎಂದು ಅವರು ಟೀಕಿಸಿದ್ದಾರೆ.
ಕಾಲೇಜಿನ ಸ್ಥಿತಿ ಗಂಭೀರವಾಗಿದ್ದು,ಹಳೆ ಜೈಲು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಾಲೇಜಿನಲ್ಲಿ ಐನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದಾರೆ.ತರಗತಿ ಕೋಣೆಗಳ ಕೊರತೆ,ಡಿಜಿಟಲ್ ಕ್ಲಾಸ್ ಹಾಗೂ ಪ್ರೊಜೆಕ್ಟರ್ ಸೌಲಭ್ಯ ಇದ್ದರೂ ಬಳಸಲು ಜಾಗದ ಅಭಾವ,ಕತ್ತಲೆಯ ಕೋಣೆಗಳು, ಕಾರ್ಯನಿರ್ವಹಿಸದ ಫ್ಯಾನ್ಗಳು, ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ಕೊರತೆ, ಕಲಾ, ವಾಣಿಜ್ಯ, ಹಿಂದಿ ಮತ್ತು ಇಂಗ್ಲಿಷ್ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರ ಅಭಾವ ಇಂತಹ ಸಮಸ್ಯೆಗಳನ್ನು ಪರಿಹರಿಸುವ ಬದಲು, ಸಮೀಪದ ಕಾಮಗಾರಿಯಲ್ಲಿ ಧೂಳು ನಿಯಂತ್ರಣ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದೆ ಪ್ರಾಂಶುಪಾಲರನ್ನೇ ಅಮಾನತು ಮಾಡಿರುವುದು ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಕಿಶೋರ್ ಕುಮಾರ್ ಆರೋಪಿಸಿದ್ದಾರೆ.
ಅಮಾನತು ಆದೇಶ ಹಿಂಪಡೆಯಲು ಒತ್ತಾಯ
ಯಾವುದೇ ಸಮಗ್ರ ವಿಚಾರಣೆ ಇಲ್ಲದೆ ಹೊರಡಿಸಿದ ಅಮಾನತು ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಜೊತೆಗೆ ಮಹಿಳಾ ಕಾಲೇಜಿಗೆ ಶುದ್ಧ ಕುಡಿಯುವ ನೀರು, ಸಮರ್ಪಕ ಶೌಚಾಲಯ, ಗಾಳಿ–ಬೆಳಕಿನ ವ್ಯವಸ್ಥೆ ಮತ್ತು ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಪ್ರಾಂಶುಪಾಲರ ಅಮಾನತು ಹಿಂಪಡೆಯದಿದ್ದರೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸದಿದ್ದರೆ, ವಿದ್ಯಾರ್ಥಿನಿಯರು ಮತ್ತು ಪೋಷಕರೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಕಿಶೋರ್ ಕುಮಾರ್ ಎಚ್ಚರಿಸಿದ್ದಾರೆ.






















