ಪುತ್ತೂರು: ಕೇಪು ಕೋಳಿ ಅಂಕದಲ್ಲಿ ಶಾಸಕರ ವೈಫಲ್ಯ ಎಂದು ಮಾತನಾಡಲು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಟೀಕಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅಶೋಕ್ ಕುಮಾರ್ ರೈ ಅವರು ಕೇಪು ದೈವಸ್ಥಾನದಲ್ಲಿ ನಡೆಯುತ್ತಿರುವ ಕೋಳಿ ಅಂಕಕ್ಕೆ ಧಾರ್ಮಿಕ ಹಿನ್ನೆಲೆ ಇದೆ. ಬಹಳ ವರ್ಷಗಳಿಂದಲೂ ಇಲ್ಲಿ ಕೋಳಿ ಅಂಕ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿ, ಧೈರ್ಯ ತುಂಬಿ ಅವರೊಂದಿಗೆ ನಿಂತಿದ್ದಾರೆ. ಶಾಸಕರು ತನ್ನ ಕರ್ತವ್ಯವನ್ನು ಮಾಡಿದ್ದಾರೆ. ಇದನ್ನು ಶಾಸಕರ ವೈಫಲ್ಯ ಎಂದು ಅಪಹಾಸ್ಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಜ್ಯ ಸರಕಾರವನ್ನು ಟೀಕಿಸಲು ನೀವು ಅಸಮರ್ಥರು ಎಂದ ಕೃಷ್ಣಪ್ರಸಾದ್ ಆಳ್ವ, ಪಂಚ ಗ್ಯಾರೆಂಟಿಯೊಂದಿಗೆ ಅನೇಕ ಹೊಸ ಯೋಜನೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಸಮರ್ಥವಾಗಿ ಆಡಳಿತ ನಡೆಸುತ್ತಿದೆ. ಹಿಂದೂಗಳ ಪರ ನಾವಿದ್ದೇವೆ ಎಂದು ಹೇಳುವ ನೀವುಗಳು, ಹಿಂದೂಗಳ ಗುತ್ತಿಗೆ ಪಡೆದುಕೊಂಡಿದ್ದೀರೇ? ಶಾಸಕ ಅಶೋಕ್ ಕುಮಾರ್ ರೈ ಅವರು ಅದೇಷ್ಟು ದೈವಸ್ಥಾನ, ಭಜನಾ ಮಂದಿರದ ಅಡಿಸ್ಥಳವನ್ನು ಅವರವರಿಗೆ ಸಿಗುವಂತೆ ಸರಕಾರದಿಂದ ಆದೇಶ ಮಾಡಿಸಿದ್ದು ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ಕೇಪು ಜಾತ್ರೆಯ ಕೋಳಿ ಅಂಕಕ್ಕೆ ಶಾಸಕರು ಹೋದದ್ದು ಅವರ ಕರ್ತವ್ಯ. ಪೊಲೀಸರು ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡರು. ಆದರೆ ಮರುದಿನ ಮತ್ತೊಮ್ಮೆ ಕೋಳಿ ಅಂಕ ನಡೆಸಿ, ಶಾಂತಿ ಕದಡಿ, ಗಲಾಟೆ ನಡೆಸುವ ಉದ್ದೇಶವಲ್ಲದೇ ಇನ್ನೇನು ಎಂದರು.
ಮತ ರಾಜಕಾರಣ ಮಾಡುವ ಬಿಜೆಪಿಗರು, ಅಶೋಕ್ ರೈ ಅವರು ಮಾತನಾಡಿದ ವಿಚಾರವನ್ನೇ ಮರುದಿನ ಪತ್ರಿಕಾಗೋಷ್ಠಿ ಮಾಡಿ ಮಾತನಾಡುತ್ತಿದ್ದಾರೆ. ಇದರ ಮೇಲೆ ಶಾಸಕರನ್ನೇ ಅನರ್ಹರು ಎಂದು ಹೇಳುತ್ತಿದ್ದಾರೆ. ಆದರೆ ಅಶೋಕ್ ರೈ ಅವರ ಸಾಧನೆಯನ್ನು ಪ್ರಶ್ನೆ ಮಾಡಲು ಸತೀಶ್ ಕುಂಪಲ ಅವರೇ ಅನರ್ಹರು. ನಿಮ್ಮ ಮತ್ತೊಂದು ಬಿಟಿಎಂ ಯುವಕರ ತಂಡ ಅಶೋಕ್ ರೈ ಅವರನ್ನು ಅಭಿನಂದಿಸಿದೆ. ಅವರನ್ನು ನೋಡಿ ಕಲಿಯಿರಿ. ಪುತ್ತೂರಿನ ಅಭಿವೃದ್ಧಿಯಲ್ಲಿ ಸಹಕಾರವಿರಲಿ. ಕ್ಷುಲ್ಲಕ ವಿಚಾರದಲ್ಲಿ ಸರಕಾರವನ್ನು ಮತ್ತು ಶಾಸಕರನ್ನು ನಿಂದಿಸುವುದು ನಿಮ್ಮ ಪಕ್ಷಕ್ಕೆ ಶೋಭೆ ಅಲ್ಲ ಎಂದು ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರವೀಂದ್ರ ರೈ ನೆಕ್ಕಿಲು, ಪ್ರಮುಖರಾದ ಮೋನಪ್ಪ ಪೂಜಾರಿ, ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಉಪಸ್ಥಿತರಿದ್ದರು.



























