ಪುತ್ತೂರು: ಎಸ್.ಡಿ.ಪಿ.ಐ. 17ನೇ ಸಂಸ್ಥಾಪನಾ ದಿನವನ್ನು ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ಷೇತ್ರಾಧ್ಯಕ್ಷ ಅಶ್ರಫ್ ಬಾವು ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಉಪಾಧ್ಯಕ್ಷರೂ ಬಂಟ್ವಾಳ ಪುರಸಭೆಯ ಉಪಾಧ್ಯಕ್ಷರೂ ಆಗಿರುವ ಮೂನಿಶ್ ಅಲಿ, ಈ ಸಂಸ್ಥಾಪನಾ ದಿನದಂದು ದ್ವೇಷ ರಾಜಕೀಯ, ಮನುವಾದಿಗಳ ಶೋಷಣೆ ಮತ್ತು ಫ್ಯಾಶಿಸ್ಟ್ ಧೋರಣೆಗಳ ವಿರುದ್ಧ ನಮ್ಮ ಹೋರಾಟವನ್ನು ತೀವ್ರಗೊಳಿಸುವ ಸಂಕಲ್ಪವನ್ನು ನಾವು ಮಾಡಬೇಕಾಗಿದೆ. MK ಫೈಝಿಯಂತಹ ನಾಯಕರ ಬಿಡುಗಡೆಗಾಗಿ ಮತ್ತು UAPA, ED ದುರ್ಬಳಕೆಯ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸುವ ಜೊತೆಗೆ ಸರ್ಕಾರದ ಷಡ್ಯಂತ್ರದ ವಿರುದ್ಧ ಜನ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಈ ದಿನವು ಭಾರತದ ಶೋಷಿತ, ವಂಚಿತ ಮತ್ತು ಹಿಂದುಳಿದ ವರ್ಗಗಳಿಗೆ ಸಮಾನತೆ ಮತ್ತು ನ್ಯಾಯದ ಆಶಯವನ್ನು ಮತ್ತಷ್ಟು ಬಲಪಡಿಸುವ ಸಂದರ್ಭವಾಗಿದೆ. SDPIಯ ಎಲ್ಲಾ ಕಾರ್ಯಕರ್ತರು, ಸದಸ್ಯರು ಮತ್ತು ಹಿತೈಷಿಗಳಿಗೆ ಸಂಸ್ಥಾಪನಾ ದಿನದ ಶುಭಾಶಯಗಳೊಂದಿಗೆ ಒಗ್ಗಟ್ಟಿನೊಂದಿಗೆ, ಸಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಮುಂದುವರಿಯೋಣ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಕೆದಿಲ, ಪಕ್ಷ ಆರಂಭಕ್ಕೆ ಮುಂಚಿತವಾಗಿ ಅನ್ಯಾಯ, ಅಕ್ರಮ ಅನಾಚರ, ಕೋಮು ದ್ವೇಷಗಳು ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದ್ದ ಸಮಯದಲ್ಲಿ ಪಕ್ಷದ ಉದಯವಾಗಿದ್ದು ಹೋರಾಟ, ತ್ಯಾಗ, ನ್ಯಾಯ ಮತ್ತು ಸಮಾನತೆ ಮತ್ತು ಧರ್ಮ ನಿರಪೇಕ್ಷತೆ ಎಂಬ ಅಡಿಗಲ್ಲಿನ ಮೇಲೆ ಪಕ್ಷ ಸ್ಥಾಪನೆಯಾಗಿದೆ. ಇವತ್ತಿಗೂ ಈ ಪಕ್ಷವು ತನ್ನ ಮೂಲ ತತ್ವಗಳಲ್ಲಿ ದೃಢವಾಗಿ ನಿಂತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಯಾವ ರೀತಿ ನಮ್ಮ ಪೂರ್ವಿಕರು ಭಾರತದಿಂದ ಬ್ರಿಟೀಷ್ ಮುಕ್ತ ಸಂಕಲ್ಪದೊಂದಿಗೆ ಹೋರಾಟ ನಡೆಸಿದರೋ ಅದೇ ರೀತಿ ಇಂದು ನಮ್ಮ ದೇಶದಿಂದ ಆರ್ ಎಸ್ ಎಸ್ ಮುಕ್ತ ಮಾಡಬೇಕಾದ ಮಹತ್ತರ ಜವಬ್ಧಾರಿ ನಮ್ಮ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಶ್ರಫ್ ಬಾವು, ಕ್ಷೇತ್ರದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಟಪಡಿಸಿಕೊಂಡು ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಹೆಚ್ಚಿನ ಜನಪ್ರತಿನಿಧಿಯನ್ನು ಪಡೆಯಲಿದ್ದೇವೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಹಮೀದ್ ಸಾಲ್ಮರ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾದ ಸುಂದರ ಮತ್ತು ಸೌಹಾರ್ದ ಭಾರತವನ್ನು ನಿರ್ಮಿಸಲು ಎಲ್ಲರೂ ಎಸ್ ಡಿ ಪಿ ಐ ಯೊಂದಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಸಯ್ಯದ್ ಮಲೆ ಜುಮಾ ಮಸೀದಿ ಅಧ್ಯಕ್ಷ ಡಾ. ಶಂಸುದ್ದೀನ್ ಸಾಲ್ಮರ, ಪುತ್ತೂರು ನಗರಸಭೆ ಸದಸ್ಯೆ ಫಾತಿಮಾ ಝಹರ, ಪುತ್ತೂರು ನಗರ ಸಮಿತಿ ಅಧ್ಯಕ್ಷ ಯಹ್ಯಾ ಕೆ. ಎಚ್, ಜಮಾತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ಕಾರ್ಯಕ್ರಮದ ಉಸ್ತುವಾರಿ ರಜಾಕ್ ಸಾಲ್ಮರ, ಹಿರಿಯರಾದ ಪುತ್ತಬ್ಬಾ, ಅನ್ಸಾರುದ್ದೀನ್ ಉಪಸ್ಥಿತರಿದ್ದರು.
ತಾಜುದ್ದೀನ್ ಸಾಲ್ಮರ ಸ್ವಾಗತಿಸಿ, ಕುಂಬ್ರ ಬ್ಲಾಕ್ ಅಧ್ಯಕ್ಷ ರಿಯಾಜ್ ಬಲಕ ವಂದಿಸಿದರು. ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿದರು.
























