ಹೊಸದಿಲ್ಲಿ: ಭಾರತವು ಬುಧವಾರ ಮಧ್ಯರಾತ್ರಿ ಸಮಯದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಭಾರತ ಪ್ರದೇಶದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದೆ.
ಈ ಕಾರ್ಯಾಚರಣೆಯನ್ನು ‘ಆಪರೇಷನ್ ಸಿಂಧೂರ್ ‘ ಎಂದು ಕರೆಯಲಾಗಿದ್ದು, ಭಾರತೀಯ ರಕ್ಷಣಾ ಇಲಾಖೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಒಟ್ಟು 9 ಉಗ್ರ ಅಡಗುತಾಣಗಳನ್ನು ಧ್ವಂಸ ಮಾಡಿದೆ. ಈ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಮಿಲಿಟರಿಗೆ ಸಂಬಂಧಿಸಿದಂತೆ ಯಾವುದೇ ಹಾನಿ ಉಂಟು ಮಾಡಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಭಾರತವು ಕೋಟ್ಲಿ, ಬಹ್ವಲ್ಪುರ್ ಮತ್ತು ಮುಜಫರಾಬಾದ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕನ ಹತ್ಯೆಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಕ್ರಮಗಳು ಬಂದಿವೆ. ಏ.22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ 26 ಜನರ ಸಾವಿಗೆ ಕಾರಣರಾಗಿದ್ದರು.
ಭಾರತವು ಯುದ್ಧಕ್ಕೆ ಸಿದ್ದತೆ ನಡೆಸಲೆಂದು ದೇಶದ ಹಲವು ಜಿಲ್ಲೆಗಳಲ್ಲಿ ಬುಧವಾರ ಮಾಕ್ ಡ್ರಿಲ್ ಗೆ ಯೋಜನೆ ರೂಪಿಸಿದೆ. ಅದಕ್ಕೂ ಮೊದಲು ಯಾರೂ ಊಹಿಸದ ರೀತಿಯಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದೆ.
ಪಾಕಿಸ್ತಾನದ ಡಿಜಿ ಐಎಸ್ ಪಿಆರ್ ಲೆಫ್ಟೆನೆಂಟ್ ಜನರಲ್ ಅಹಮದ್ ಶರೀಫ್ ಚೌಧರಿ ಅವರು, ಭಾರತವು ಕೋಟ್ಲಿ, ಮುರಿಡ್ಕೆ, ಬಹವಾಲ್ಪುರ್ ಮತ್ತು ಮುಜಫರಾಬಾದ್ಗಳಲ್ಲಿನ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿದರು.
ಮುರಿಡ್ಕೆ ಲಷ್ಕರ್-ಎ-ತೈಬಾ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯಾಗಿದೆ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹಲ್ವಾಪುರವು ಮಸೂದ್ ಅಜರ್ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ನ ನೆಲೆಯಾಗಿದೆ.
‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಭಾರತವು ಗುರಿಯಿಟ್ಟುಕೊಂಡಿದ್ದ ಸ್ಥಳಗಳ ಹೆಸರನ್ನು ಉಲ್ಲೇಖಿಸಿಲ್ಲ. ದಾಳಿಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ಪೂಂಚ್ ರಾಜೌರಿ ಪ್ರದೇಶದ ಭಿಂಬರ್ ಗಾಲಿಯಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಫಿರಂಗಿ ಗುಂಡಿನ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಪಡೆಗಳು “ಸೂಕ್ತ ರೀತಿಯಲ್ಲಿ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿವೆ” ಎಂದು ಸೇನೆಯ ಮೂಲಗಳು ಹೇಳಿದರು.
ಸಾವು ನೋವಿನ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.






















