ಪುತ್ತೂರು: ಬೊಳುವಾರು ಭಾರತ್ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಜೂನ್ 1ರಂದು ತಿಂಗಳ ಮಾಸಿಕ ಸಭೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಘದ ಕಚೇರಿಯಲ್ಲಿ ನಡೆಯಿತು.
ಸಂಚಾರಿ ಆರೋಗ್ಯ ಘಟಕದ ವೈದ್ಯ ಡಾ. ಅಶ್ರಫ್ ಮಾತನಾಡಿ, ಆರೋಗ್ಯ ಸಂಚಾರಿ ಘಟಕದಲ್ಲಿ ಕಾರ್ಮಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುವುದು. ಇಲ್ಲಿ ಬಿಪಿ, ಸಕ್ಕರೆ ಕಾಯಿಲೆ, ಲಿವರ್, ಕಿಡ್ನಿ ಟೆಸ್ಟ್ ಸೇರಿದಂತೆ ಇತರ ರೋಗಗಳ ಬಗ್ಗೆಯೂ ತಪಾಸಣೆ ನಡೆಸಲಾಗುವುದು. ವಾಹನದಲ್ಲಿ ಲ್ಯಾಬ್ ಇದ್ದು, ಇಬ್ಬರು ವೈದ್ಯರು ತಪಾಸಣೆ ನಡೆಸುತ್ತಾರೆ. ಅಗತ್ಯ ಔಷಧಗಳನ್ನು ಸ್ಥಳದಲ್ಲೇ ವಿತರಿಸಲಾಗುವುದು ಎಂದರು.
ಶಿಬಿರದಲ್ಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಸಂಚಾರಿ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಭಾರತ್ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಅಶ್ರಫ್, ಕಾರ್ಯದರ್ಶಿ ಪೌಲ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಸಂಘದ ಸಮಿತಿ ಸದಸ್ಯರು ಮತ್ತು ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.