ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಹದಿನೆಂಟು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆಗೈದು ಇದೀಗ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ವಿಶ್ರಾಂತ ಯೋಧ ಹವಾಲ್ದಾರ್ ಲಕ್ಷ್ಮೀಶ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹವಾಲ್ದಾರ್ ಲಕ್ಷ್ಮೀಶ್ ಅವರು ದೇಶದ ಜನತೆ ನೆಮ್ಮದಿಯಿಮದ ಬದುಕು ನಡೆಸುವಲ್ಲಿ ಮೈಯೆಲ್ಲಾ ಕಣ್ಣಾಗಿಸಿ, ಗಡಿಯನ್ನು ಕಾಯುವ ಯೋಧನ ಪರಿಶ್ರಮವಿದೆ. ಅಂತಹ ಯೋಧರನ್ನು ಸಮಾಜ ಗುರುತಿಸುವುದಾಗ ದೇಶಕ್ಕಾಗಿ ಅರ್ಪಿಸಿಕೊಂಡದ್ದಕ್ಕೆ ಸಾರ್ಥಕತೆಯ ಭಾವ ಮೂಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜ ಸ್ವಚ್ಚಂದವಾಗಿ ಹಾರಾಡುತ್ತಿರುವುದು ಗಾಳಿಯಿಂದಲ್ಲ, ಬದಲಾಗಿ ದೇಶಕ್ಕಾಗಿ ಪ್ರಾಣಾರ್ಪಣೆಯನ್ನಾದರೂ ಮಾಡಬಲ್ಲ ಯೋಧರ ಉಸಿರಿನಿಂದ. ಅಂತಹ ಯೋಧರನ್ನು ಗೌರವಿಸಬೇಕಾದದ್ದು ಸಮಾಜದ ಕರ್ತವ್ಯ. ಪುತ್ತೂರಿನ ಪರಿಸರದಲ್ಲಿನ ಯೋಧರು ನಿವೃತ್ತರಾಗಿ ಊರಿಗೆ ಬಂದಾಗ ಅವರನ್ನು ಕರೆತಂದು ಮಾನಿಸುವ ಕಾರ್ಯವನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಮಾತನಾಡಿ, ಶುಭ ಹಾರೈಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಪ್ರಾಚಾರ್ಯೆ ಮಾಲತಿ ಡಿ., ಹವಾಲ್ದಾರ್ ಲಕ್ಷ್ಮೀಶ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.
ಆರನೆ ತರಗತಿ ವಿದ್ಯಾರ್ಥಿ ಶ್ರೀವತ್ಸ ಸೈನಿಕರ ಬದುಕಿನ ಬಗೆಗೆ ಭಾಷಣಗೈದರು. ಏಳನೇ ತರಗತಿ ವಿದ್ಯಾಥಿಗಳಾದ ಸನ್ಮಯ್, ಶೌರಿ, ಅನ್ವಿತಾ ಮತ್ತು ಮನಸ್ವಿ ದೇಶಭಕ್ತಿಗೀತೆ ಹಾಡಿದರು.
ಶಾಲಾ ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಹವಾಲ್ದಾರ್ ಲಕ್ಷ್ಮೀಶ್ ಅವರ ಪರಿಚಯಗೈದರು. ಒಂಬತ್ತನೇ ತರಗತಿ ವಿದ್ಯಾಥಿಗಳಾದ ರಕ್ಷಾ ಸ್ವಾಗತಿಸಿ, ನಿಹಾರಿಕಾ ವಂದಿಸಿದರು. ವೈಷ್ಣವಿ ಎಂ.ಆರ್. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಹವಾಲ್ದಾರ್ ಲಕ್ಷ್ಮೀಶ್ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.