ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಸೌತಡ್ಕ ಸೇರಿದಂತೆ ಹಲವು ಪ್ರವಾಸಿ ತಾಣಗಳಿರುವ ಬೆಳ್ತಂಗಡಿ ತಾಲೂಕಿಗೆ ರೈಲು ಸಂಪರ್ಕ ಬೇಕೆಂಬ ಬೇಡಿಕೆ ಮತ್ತೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ಬೆಳ್ತಂಗಡಿ ತಾಲೂಕಿಗೆ ಇನ್ನೂ ನೇರ ರೈಲು ಸಂಪರ್ಕವಿಲ್ಲ. ಬಂಟ್ವಾಳವೇ ಸಮೀಪದ ಕೊನೆಯ ರೈಲು ನಿಲ್ದಾಣ. ಜನರು 40–50 ಕಿ.ಮೀ ದೂರ ರಸ್ತೆ ಮೂಲಕ ಪ್ರಯಾಣಿಸಬೇಕಾಗಿದೆ.
ಈ ಹಿಂದೆ ಸುಬ್ರಹ್ಮಣ್ಯ – ಧರ್ಮಸ್ಥಳ – ಕೊಲ್ಲೂರು ರೈಲು ಮಾರ್ಗದ ಸರ್ವೇ ನಡೆದರೂ, ಯೋಜನೆ ಕಡತದಲ್ಲೇ ಉಳಿದಿದೆ. ಈ ಮಾರ್ಗ ಜಾರಿಯಾದರೆ ಭಕ್ತರು, ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಸಂಚಾರ ಸುಲಭವಾಗುವ ಜೊತೆಗೆ ವಾಣಿಜ್ಯ, ಕೃಷಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ.
ಅರಣ್ಯ ವ್ಯಾಪ್ತಿ ಅಡ್ಡಿಯಾಗಿದ್ದರೂ, ಪರ್ಯಾಯ ಯೋಜನೆಯ ಮೂಲಕ ಈ ರೈಲು ಸಂಪರ್ಕ ಸಾಧ್ಯವೆಂಬ ಅಭಿಪ್ರಾಯವಿದೆ. ಬೆಳ್ತಂಗಡಿ ತಾಲೂಕಿಗೆ ರೈಲು ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕರಿಂದ ಮತ್ತೆ ಒತ್ತಾಯ ಹೆಚ್ಚಾಗಿದೆ.





















