ಹಿಮಾಚಲ ಪ್ರದೇಶದಲ್ಲಿ ಉಂಟಾದ ಪ್ರವಾಹದಿಂದಾಗಿ ಇದುವರೆಗೂ 60ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜನ ಮನೆ – ಮಠ ಕಳೆದುಕೊಂಡು ಆಶ್ರಯ ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದಾರೆ.
ಜೂನ್ 30 ರಂದು, ಮಧ್ಯರಾತ್ರಿಯಿಂದ 1 ಗಂಟೆಯ ನಡುವೆ, ಮಂಡಿಯ ಧರಂಪುರ ಪ್ರದೇಶದ ಸಿಯಾಥಿ ಗ್ರಾಮ ದಿಢೀರ್ ಭೂಕುಸಿತದಿಂದಾಗಿ ಅಕ್ಷರಶಃ ನಾಶವಾಗಿ ಹೋಗಿದೆ.
ಆದರೆ ಒಂದೇ ಒಂದು ಮುನ್ಸೂಚನೆಯಿಂದಾಗಿ ಗ್ರಾಮದ ಜನರು ಯಾವುದೇ ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ವರದಿಯಾಗಿದೆ.
ಶ್ವಾನವೊಂದು ಮನೆಯವರನ್ನು ಸರಿಯಾದ ಸಮಯಕ್ಕೆ ಎಚ್ಚರಿಸಿದ ಪರಿಣಾಮ 20 ಕುಟುಂಬದ 67 ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಧರಂಪುರ ಪ್ರದೇಶದ ಸಿಯಾಥಿಯಲ್ಲಿ ನಡೆದಿದೆ.
ಸಿಯಾಥಿ ಗ್ರಾಮದ ಮನೆಯೊಂದರಲ್ಲಿರುವ ಶ್ವಾನವೊಂದು ನಡುರಾತ್ರಿ ಇದ್ದಕ್ಕಿದ್ದಂತೆ ಬೊಗಳಲು ಶುರು ಮಾಡಿದೆ. ಇದನ್ನು ಕೇಳಿದ ಮನೆಯ ಸದಸ್ಯ ನರೇಂದ್ರ ನಿದ್ದೆಯಿಂದ ಎಚ್ಚರಗೊಂಡು ಶ್ವಾನದ ಬಳಿ ಹೋಗಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಕಂಡಿದ್ದು, ನೀರು ಒಳಗೆ ಬರಲು ಪ್ರಾರಂಭಿಸಿದೆ. ಇದಾದ ಬಳಿಕ ನರೇಂದ್ರ ಶ್ವಾನದೊಂದಿಗೆ ಮನೆಯ ಕೆಳಗೆ ಓಡಿ ಎಲ್ಲರನ್ನು ಎಬ್ಬಿಸಿದ್ದಾರೆ.
ನಂತರ ನರೇಂದ್ರ ಗ್ರಾಮದ ಇತರ ಜನರನ್ನು ಎಚ್ಚರಗೊಳಿಸಿ ಸುರಕ್ಷಿತ ಸ್ಥಳಕ್ಕೆ ಓಡಲು ಹೇಳಿದ್ದಾರೆ. ಮಳೆಯ ನಡುವೆಯೇ ಗ್ರಾಮಸ್ಥರು ಆಶ್ರಯ ಸ್ಥಳದತ್ತ ತೆರಳಿದ್ದಾರೆ. ಸ್ವಲ್ಪ ಸಮಯದ ನಂತರ ಗ್ರಾಮದಲ್ಲಿ ಭೂಕುಸಿತ ಉಂಟಾಗಿದೆ. ಪರಿಣಾಮ ಹತ್ತಾರು ಮನೆಗಳು ಕುಸಿತ ಕಂಡಿದೆ. ಸದ್ಯ ಗ್ರಾಮದಲ್ಲಿ ನಾಲೈದು ಮನೆಗಳು ಮಾತ್ರ ಇದೆ ಎಂದು ವರದಿ ತಿಳಿಸಿದೆ.
ಸುರಕ್ಷಿತ ಜನರು ಕಳೆದ ಏಳು ದಿನಗಳಿಂದ ತ್ರಿಯಂಬಲ ಗ್ರಾಮದಲ್ಲಿ ನಿರ್ಮಿಸಲಾದ ನೈನಾ ದೇವಿ ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಮಧ್ಯೆ ದುರಂತದಿಂದಾಗಿ ಹಲವಾರು ಗ್ರಾಮಸ್ಥರು ರಕ್ತದೊತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ತಿಳಿಸಿದೆ.