ಪುತ್ತೂರು: ಸಕಲೇಶಪುರದ ಹೋಂಕ್ರಳ್ಳಿ ಬಳಿ ನಡೆದ ದುರ್ಘಟನೆಯಲ್ಲಿ ನೆಲ್ಯಾಡಿ ಸಮೀಪದ ಬಲ್ಯ ಮೂಲದ ವಿಠಲ ಆಚಾರ್ಯ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಸೋಮವಾರ ಸಂಜೆ ಘಟನೆ ನಡೆದಿದ್ದು, ಹೋರಿ ತಿವಿತದಿಂದ ಗಂಭೀರ ಗಾಯಗೊಂಡಿದ್ದ ವಿಠಲ ಆಚಾರ್ಯ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ವಿಠಲ ಆಚಾರ್ಯ ಅವರು ಹೋಂಕ್ರಳ್ಳಿ ಬಳಿ ವಾಸವಾಗಿದ್ದು, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಇದರೊಂದಿಗೆ ಕಬ್ಬಿಣದ ಕೆಲಸವನ್ನು ನಿರ್ವಹಿಸುತ್ತಿದ್ದರು.
ಸೋಮವಾರ ಸಂಜೆ ತಮ್ಮ ದನಗಳನ್ನು ಕರೆ ತರಲು ಗದ್ದೆಗೆ ಹೋಗಿದ್ದ ವೇಳೆ, ಏಕಾಏಕೀ ನುಗ್ಗಿದ್ದ ಹೋರಿ, ವಿಠಲ ಆಚಾರ್ಯ ಅವರನ್ನು ತಿವಿದಿದೆ. ಈ ವಿಷಯವನ್ನು ಸ್ಥಳೀಯ ಬಾಲಕರು ವಿಠಲ ಆಚಾರ್ಯ ಅವರ ಮನೆಗೆ ತಿಳಿಸಿದ್ದಾರೆ.
ತಕ್ಷಣ ಮನೆಯವರು ಆಗಮಿಸಿದ್ದಾರೆ. ಆಗಲೂ ಹೋರಿ ದೇಹವನ್ನು ತಿವಿಯುವುದನ್ನು ಮುಂದುವರಿಸುತ್ತಲೇ ಇತ್ತು ಎನ್ನಲಾಗಿದೆ.
ಮೃತರು ಪತ್ನಿ, ಪುತ್ರ, ಸೊಸೆ, ಪುತ್ರಿ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.