ಹಾಸನ: ಹಣ ಕದಿಯಲು ಬಂದ ಚೋರರು ಎಟಿಎಂ ಮಷಿನ್ ಅನ್ನೇ ಹೊತ್ತೊಯ್ದಿರುವ ಘಟನೆ ಹಾಸನ ಜಿಲ್ಲೆಯ ಹನಮಂತಪುರ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಅರಕಲಗೂಡು ಮೂಲದ ತನುಜ ಎಂಬವರು ಮೂರು ಎಟಿಎಂ ಮಷಿನ್ ಹೊರ ಗುತ್ತಿಗೆ ಪಡೆದುಕೊಂಡಿದ್ದು ಒಂದನ್ನು ಹನುಮಂತಪುರದಲ್ಲಿ ಇಂಡಿಯಾ ಒನ್ ಹೆಸರಿನ ಎಟಿಎಂ ಕೇಂದ್ರ ತೆರೆದು ಸ್ಥಾಪನೆ ಮಾಡಿದ್ದರು. ನಿನ್ನೆ ಸಂಜೆ ಮಷಿನ್ ಗೆ ಒಂದು ಲಕ್ಷ ಹಣವನ್ನು ಎಟಿಎಂಗೆ ಹಾಕಿದ್ದರು. ಆದರೆ, ರಾತ್ರಿ 2 ಗಂಟೆ ಸುಮಾರಿಗೆ ಎಟಿಎಂಗೆ ನುಗ್ಗಿದ ಚೋರರು ಹಣ ದೋಚಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಎಟಿಎಂ ಮಷಿನ್ ಅನ್ನೇ ಹೊತ್ತೊಯ್ದಿದ್ದಾರೆ.
ಮಷಿನ್ ನಲ್ಲಿಯೇ ಸಿಸಿ ಕ್ಯಾಮೆರಾ ಹಾಗೂ ಡಿವಿಆರ್ ಇದ್ದ ಕಾರಣ ಹಣ ತೆಗೆದುಕೊಂಡು ಹೋಗಿ ಮಷಿನ್ ಅಲ್ಲೇ ಬಿಟ್ಟರೆ ತಮ್ಮ ಸುಳಿವು ಸಿಗಲಿದೆ ಎನ್ನುವ ಆತಂಕದಿಂದ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿದ್ದಾರೆ ಎಂದು ಹೇಳಲಾಗಿದೆ.
ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳದಲ್ಲಿ ಶ್ವಾನ ದಳದ ಮೂಲಕ ಪರಿಶೀಲನೆ ನಡೆಸಲಾಗಿದ್ದು ಸುತ್ತ ಮುತ್ತ ಲಭ್ಯವಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆದರಿಸಿ ಪೊಲಿಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.