ಮುಂಬೈ: ದೇಶದ ಅಣು ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿಗ್ಗಜ ನ್ಯೂಕ್ಲಿಯರ್ ವಿಜ್ಞಾನಿ ಡಾ ಆರ್. ಚಿದಂಬರಂ (88) ಶನಿವಾರ ಬೆಳಗ್ಗೆ ನಿಧನರಾದರು.
ಪೋಗ್ರಾನ್ನಲ್ಲಿ 1974 ಹಾಗೂ 1998ರಲ್ಲಿ ನಡೆಸಲಾದ ಭಾರತದ ಪರಮಾಣು ಸ್ಫೋಟ ಪರೀಕ್ಷೆಗಳಲ್ಲಿ ಚಿದಂಬರಂ ಅವರು ಪ್ರಧಾನ ಪಾತ್ರ ವಹಿಸಿದ್ದರು.
ಆಟೋಮಿಕ್ ಎನರ್ಜಿ ಕಮಿಷನ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಭಾರತ ಸರ್ಕಾರಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರರೂ ಆಗಿದ್ದರು. ಭಾರತವನ್ನು ಅಣ್ವಸ್ತ್ರ ದೇಶವನ್ನಾಗಿಸುವಲ್ಲಿ ಗಣನೀಯ ಕೊಡುಗೆ ನೀಡಿದ್ದ ಅವರು ಪದ್ಮ ವಿಭೂಷಣ ಪುರಸ್ಕಾರಕ್ಕೆ ಭಾಜನತಾಗಿದ್ದಾರೆ.
ಖ್ಯಾತ ಭೌತ ವಿಜ್ಞಾನಿ ಮತ್ತು ಭಾರತದ ಅತ್ಯಂತ ಯಶಸ್ವಿ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ ರಾಜಗೋಪಾಲ ಚಿದಂಬರಂ ಅವರು ಜ.4ರ ಬೆಳಗ್ಗೆ 3.20ಕ್ಕೆ ನಿಧನರಾದರು ಎಂದು ಡಿಎಇ ಹೇಳಿಕೆಯಲ್ಲಿ ತಿಳಿಸಿದೆ.
1936ರಲ್ಲಿ ಜನಿಸಿದ ಚಿದಂಬರಂ, ಚೆನ್ನೈನ ಪ್ರೆಸಿಡೆನ್ಸಿ ಕಾಲೇಜ್ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದರು. ತಮ್ಮ ವೃತ್ತಿ ಬದುಕಿನಲ್ಲಿ ಚಿದಂಬರಂ ಅವರು ಅನೇಕ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (2001- 2018), ಭಾಭಾ ಆಟೋಮಿಕ್ ಸಂಶೋಧನಾ ಕೇಂದ್ರದ ನಿರ್ದೇಶಕ (1990- 1993), ಅಣು ಶಕ್ತಿ ಆಯೋಗದ ಅಧ್ಯಕ್ಷ ಮತ್ತು ಭಾರತದ ಸರ್ಕಾರದ ಡಿಎಇ ಕಾರ್ಯದರ್ಶಿಯಾಗಿ (1993- 2000) ಸೇವೆ ಸಲ್ಲಿಸಿದ್ದರು.
1994-95ರಲ್ಲಿ ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (ಐಎಇಎ) ಗವರ್ನ್ರಗಳ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.1974ರಲ್ಲಿ ‘ಆಪರೇಷನ್ ಸ್ಟೈಲಿಂಗ್ ಬುದ್ಧ’ ಹಾಗೂ 1998ರಲ್ಲಿ ‘ಆಪರೇಷನ್ ಶಕ್ತಿ’ಯಲ್ಲಿಯೂ ಅವರ ಪಾತ್ರ ಮಹತ್ವದ್ದಾಗಿತ್ತು
ಆರ್.ಚಿದಂಬರಂ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ. ಡಾ. ರಾಜಗೋಪಾಲ ಚಿದಂಬರಂ ಅವರು ಭಾರತದ ಅಣು ಕಾರ್ಯಕ್ರಮದ ಪ್ರಮುಖ ರೂವಾರಿಗಳಲ್ಲಿ ಒಬ್ಬರಾಗಿದ್ದರು ಎಂದು ಮೋದಿ ಸ್ಮರಿಸಿದ್ದಾರೆ.





















