ಬೀದಿನಾಯಿಗಳು ಕಚ್ಚಿ ಎಳೆದಾಡಿರುವ ನವಜಾತ ಶಿಶುವೊಂದರ ಅರ್ಧ ದೇಹ ಪತ್ತೆಯಾಗಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ವೆಂಕಟೇಶ್ವರ ಶಾಲೆ ಆವರಣದಲ್ಲಿ ನಡೆದಿದೆ.
ಶಿಶುವಿನ ಅರ್ಧಭಾಗ ಮಾತ್ರ ಪತ್ತೆಯಾಗಿದೆ. ಬೀದಿನಾಯಿಗಳು ಎಳೆದಾಡಿರುವ ಶಿಶು ಶವ ಭಯಾನಕವಾಗಿ ಕಾಣುತ್ತಿದೆ. ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಆವರಣದಿಂದ ನಾಯಿಗಳು ಎಳೆದು ತಂದಿರುವ ಶಂಕೆ ವ್ಯಕ್ತವಾಗಿದೆ. ಮೃತ ಶಿಶು ಸೂಕ್ತ ಡಿಸ್ಪೋಸ್ ಮಾಡದ ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿಬಂದಿದೆ. ಬೇಕಾಬಿಟ್ಟಿಯಾಗಿ ಶಿಶು ಮೃತದೇಹ ಆವರಣದಲ್ಲಿ ಬಿಸಾಡಿರುವ ಹಿನ್ನೆಲೆ ಬೀದಿನಾಯಿಗಳು ಎಳೆದು ತಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.
ಆತಂಕ ಹುಟ್ಟಿಸುತ್ತೆ ಶಿಶುಗಳ ಮರಣ ಪ್ರಮಾಣ!
ರಾಜಧಾನಿ ಬೆಂಗಳೂರಿನಲ್ಲಿ 2024-25ನೇ ಸಾಲಿನ ಮೊದಲಾರ್ಧದಲ್ಲಿ 5 ವರ್ಷದೊಳಗಿನ 535 ಶಿಶುಗಳು ಕಿಡ್ನಿ ವೈಫಲ್ಯ, ಕ್ಯಾನ್ಸರ್, ಹೃದ್ರೋಗ ಸೇರಿ ಮೊದಲಾದ ಕಾರಣಕ್ಕೆ ಮೃತಪಟ್ಟಿವೆ.
ಕಳೆದ ಏಪ್ರಿಲ್ನಿಂದ ಸೆಪ್ಟಂಬರ್ ಅವಧಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 23ಕ್ಕೂ ಅಧಿಕ ತಾಯಿ ಮರಣ ಪ್ರಕರಣ ಸಂಭವಿಸಿದ್ದು, ಇನ್ನೂ ಇದೇ ಅವಧಿಯಲ್ಲಿ 535 ಶಿಶು ಮರಣ ಪ್ರಕರಣ ದಾಖಲಾಗಿದೆ. ನಗರದ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಲ್ಲೆಯ ವ್ಯಾಪ್ತಿಯಲ್ಲಿನ ತಾಯಿ ಮರಣ ಹಾಗೂ ಶಿಶು ಮರಣವನ್ನು ಪ್ರತಿ ಮೂರು ಹಾಗೂ ಆರು ತಿಂಗಳಿಗೆ ಒಂದು ಬಾರಿ ಡೆತ್ ಆಡಿಟ್ ನಡೆಸಲಾಗುತ್ತಿದೆ.
ಶಿಶುಗಳಲ್ಲಿ ಕಿಡ್ನಿ, ಹೃದ್ರೋಗ, ಕ್ಯಾನ್ಸರ್ ಸಮಸ್ಯೆ:
ಮೃತಪಟ್ಟ ಮಕ್ಕಳು 5 ವರ್ಷದೊಳಗಿನವರಾಗಿದ್ದಾರೆ. ಆದರೆ, ಸಾವಿಗೆ ಹಲವು ಕಾರಣಗಳಿವೆ. ಸಾಮಾನ್ಯವಾಗಿ ನವಜಾತ ಶಿಶುಗಳ ಮರಣಕ್ಕೆ ಕಡಿಮೆ ತೂಕ, ಅವಧಿಗೆ ಮುನ್ನ ಜನನ, ಉಸಿರಾಟ ಸಮಸ್ಯೆ ಸೇರಿದಂತೆ ಮೊದಲಾದ ಕಾರಣಕ್ಕೆ ಮೃತಪಟ್ಟ ವರದಿಯಾಗಿದೆ. ಆದರೆ, ಮತ್ತೆ ಕೆಲವು ಮಕ್ಕಳು ಕಿಡ್ನಿ ವೈಫಲ್ಯ, ಹೃದ್ರೋಗ, ಕ್ಯಾನ್ಸರ್ ನಂತಹ ಭಯಂಕರ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಇನ್ನಷ್ಟು ಮೃತ ಪ್ರಕರಣಗಳು ಅಪಘಾತದಿಂದ ಸಂಭವಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.