ಶಿವಮೊಗ್ಗ: ಶಿವಮೊಗ್ಗ ನಗರದ ಹೊರವಲಯದ ಸೂಳೆಬೈಲು ಪ್ರದೇಶದಲ್ಲಿ 15 ವರ್ಷದ ವಿದ್ಯಾರ್ಥಿ ಸಂಕೇತ್ ಮೇಲೆ ಆತನ ಸಹಪಾಠಿಗಳು ಹಲ್ಲೆ ನಡೆಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ನಡೆದಿದೆ.ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಹಿಂದಿರುಗುವ ವೇಳೆ ವಿದ್ಯಾರ್ಥಿಗಳ ನಡುವೆ ಗಲಾಟೆ ಉಂಟಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಾಹಿತಿಯಂತೆ, ಗಿರೀಶ್ ಎಂಬ ವಿದ್ಯಾರ್ಥಿಗೆ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳು ಹಲ್ಲೆ ನಡೆಸುತ್ತಿದ್ದರು. ಈ ವೇಳೆ ಗಿರೀಶ್ಗೆ ಸಹಾಯ ಮಾಡಲು ಸಂಕೇತ್ ತೆರಳಿದ್ದಾನೆ. ಆದರೆ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡು ಸಂಕೇತ್ ಮೇಲೆಯೂ ಹಲ್ಲೆ ನಡೆದಿದೆ. ಹಲ್ಲೆಯ ತೀವ್ರತೆಗೆ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮೊದಲು ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಗಿರೀಶ್ ನೀಡಿದ ಮಾಹಿತಿಯ ಪ್ರಕಾರ, ಶಾಲೆಯಿಂದ ಹೊರಬಂದ ಬಳಿಕ ಫೀಲ್ಡ್ ಕಡೆ ಕರೆದುಕೊಂಡು ಹೋಗಿ ಐದಾರು ಮಂದಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ತಾನೂ ಪ್ರಜ್ಞೆ ತಪ್ಪಿದ ಸ್ಥಿತಿಗೆ ತಲುಪಿದ್ದಾಗಿ ಹೇಳಿದ್ದಾನೆ. ನಂತರ ಪ್ರಜ್ಞೆ ಬಂದಾಗ ಸಂಕೇತ್ ನೆಲದಲ್ಲಿ ಬಿದ್ದಿರುವುದು ಗಮನಿಸಿ ಶಿಕ್ಷಕರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾನೆ.
ಶಾಲಾ ದಿನಗಳಲ್ಲಿ ಇಂತಹ ಘಟನೆ ಸರಿಯೇ?
ಭವಿಷ್ಯದ ಕನಸು ಹೊತ್ತು ಶಾಲೆಗೆ ತೆರಳುವ ಮಕ್ಕಳಲ್ಲಿ ಇಂತಹ ಮನೋಭಾವ ಆತಂಕ ಮೂಡಿಸುತ್ತಿದೆ. ಇತ್ತೀಚೆಗೆ ಹಿರಿಯ–ಕಿರಿಯ ವಿದ್ಯಾರ್ಥಿಗಳ ನಡುವೆ ಗಲಾಟೆ, ವೈಯಕ್ತಿಕ ದ್ವೇಷ, ಗುಂಪುಗಾರಿಕೆ ಹೆಚ್ಚುತ್ತಿದೆ. ಇದು ಮಕ್ಕಳಲ್ಲಿನ ಆತಂಕಕಾರಿ ಬೆಳವಣಿಗೆಯಾಗಿದ್ದು, ಪೋಷಕರು ಹಾಗೂ ಶಿಕ್ಷಕರು ಈ ಬಗ್ಗೆ ಎಚ್ಚರ ವಹಿಸಬೇಕಿದೆ. ಈ ಬಗ್ಗೆ ಶಾಲೆಯ ಹೊರವಲಯದಲ್ಲಿ ಸಮರ್ಪಕ ಮೇಲ್ವಿಚಾರಣೆ, ಸ್ಪೆಷಲ್ ಕ್ಲಾಸ್ಗಳು ರಾತ್ರಿ ತನಕ ನಡೆಯುವ ಸಂದರ್ಭಗಳಲ್ಲಿ, ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚುವರಿ ಜಾಗೃತಿ ಮತ್ತು ಮೇಲ್ವಿಚಾರಣೆ ಅಗತ್ಯವೆಂದು ಶಿಕ್ಷಣ ತಜ್ಞರು ಹೇಳುತ್ತಾರೆ.
ಅಲ್ಲದೇ ಇಂತಹ ಘಟನೆಗಳಿಂದ ಇತರ ಮಕ್ಕಳ ಮೇಲೆ ಪರಿಣಾಮ ಬೀರಿ ಮಕ್ಕಳಲ್ಲಿ ಆತಂಕ ಕೂಡ ಹೆಚ್ಚಾಗಬಹುದು. ಮಾತ್ರವಲ್ಲದೇ, ಶಾಲಾ ಮಟ್ಟದಲ್ಲಿ ಇಂತಹ ಕೃತ್ಯಗಳಲ್ಲಿ ಭಾಗಿಯಾದ ಮಕ್ಕಳು ಮುಂದೆ ಸಮಾಜದಲ್ಲಿ ಬೇರೆ ದೃಷ್ಕೃತ್ಯಕ್ಕೆ ಇಳಿಯುವ ಸಾಧ್ಯತೆಯಿದೆ. ಆದ್ದರಿಂದ ಶಾಲೆಗಳು ಕೌನ್ಸೆಲಿಂಗ್, ಶಿಸ್ತು ಸಮಿತಿಗಳು, ಮತ್ತು ಪೋಷಕರ ಸಭೆಗಳ ಮೂಲಕ ಮಕ್ಕಳಲ್ಲಿ ಶಾಂತಿ, ಸಹಾನುಭೂತಿ ಮತ್ತು ಕಾನೂನು ಅರಿವು ಮೂಡಿಸುವ ಅಗತ್ಯವಿದೆ.ವಿದ್ಯಾರ್ಥಿಗಳಿಗೆ ಶಿಸ್ತು, ಸಹಕಾರ, ಮತ್ತು ಕೋಪ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು.ಪೋಷಕರೊಂದಿಗೆ ನಿಯಮಿತ ಸಭೆ ನಡೆಸಿ ಮಕ್ಕಳ ವರ್ತನೆ ಕುರಿತು ಚರ್ಚಿಸಬೇಕು.ಇಲ್ಲವಾದಲ್ಲಿ ಬೆಳೆಯುವ ಮಕ್ಕಳ ಮೇಲೆ ಇದು ತೀರಾ ಅಪಾಯಕಾರಿ ಪರಿಣಾಮ ಬೀರಬಹುದು.
ವಿಶ್ವ ಹಿಂದೂ ಪರಿಷದ್ ಹೇಳಿಕೆ
ಶಿವಮೊಗ್ಗ ಹೊರವಲಯದ ಊರುಗಡೂರಿನಲ್ಲಿ 10 ನೇ ಕ್ಲಾಸ್ ವಿದ್ಯಾರ್ಥಿ ಸಂಕೇತ್ (16) ಎಂಬಾತನನ್ನು ಅನ್ಯಕೋಮಿನ ಬಾಲಕರು ಕೊಲೆಗೈದ ಘಟನೆ ಬಹಳ ಆತಂಕಕಾರಿಯಾಗಿದೆ. ಸಂಕೇತ್ ಮೇಲೆ ನಾಲ್ವರು ಅನ್ಯಕೋಮಿನ ವಿದ್ಯಾರ್ಥಿಗಳು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಈ ಅಮಾನವೀಯ ಕೃತ್ಯವನ್ನು ಖಂಡಿಸುತ್ತೇವೆ. ಅಪ್ರಾಪ್ತ ಮಕ್ಕಳು ಡ್ರಗ್ಸ್ ಸೇವಿಸಿ ಹಿಂದೂ ವಿದ್ಯಾರ್ಥಿಯನ್ನು ಕೊಲೆ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತು ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸಿರುವ ದೊಡ್ಡ ಜಾಲ ಇರುವ ಬಗ್ಗೆ ಸಂಶಯವಿದ್ದು ಮತ್ತು ಅಪ್ರಾಪ್ತ ಮಕ್ಕಳಲ್ಲಿ ಕೊಲೆ ಮಾಡುವಷ್ಟು ದ್ವೇಷ ಮಾನಸಿಕತೆಯನ್ನು ತುಂಬಿರುವ ಬಗ್ಗೆ ಕೂಡ ಸಂಶಯವಿದ್ದು ಹಾಗಾಗಿ ಇವೆಲ್ಲವನ್ನೂ ಪತ್ತೆಹಚ್ಚಲು ಈ ಕೊಲೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲು ಆಗ್ರಹಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.





















