ವಿಟ್ಲ: ಕಸಬಾ ಗ್ರಾಮದ ಮಾರ್ನೆಮಿಗುಡ್ಡೆ ಎಂಬಲ್ಲಿ ಆಟೋ ಚಾಲಕರೊಬ್ಬರಿಗೆ ಮೂವರು ಮುಸುಕುಧಾರಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಪಡ್ನೂರು ನಿವಾಸಿ, ಆಟೋ ಚಾಲಕ ಇಸುಬು ಹಲ್ಲೆಗೊಳಗಾದವರು. ಇಸುಬು ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಹಲ್ಲೆ ನಡೆಸಿದ್ದಾರೆ ಎಂದು ಇಸುಬು ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಘಟನೆಗೆ ಸಂಬಂಧಿಸಿ ವಿಟ್ಲ ಕಸಬಾ ಗ್ರಾಮದ ಕೆ. ರವೀಶ್ ಕುಲಾಲ್ (40), ಅಶೋಕ (42) ಎಂಬವರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಚಾಲಕ ಇಸುಬು ಅವರು ಶನಿವಾರ ಮಹಿಳೆಯೊಬ್ಬರನ್ನು ಮನೆಗೆ ತಲುಪಿಸಿ ಹಿಂತಿರುಗುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ.
ವಿಟ್ಲ ಕಸಬಾ ಗ್ರಾಮದ ಮಾರ್ನಮಿಗುಡ್ಡೆ ಬಳಿ ಆಟೋ ಬರುತ್ತಿದ್ದಂತೆ ಬಟ್ಟೆಯಿಂದ ಮುಖ ಮುಚ್ಚಿಕೊಂಡು ಬಂದಿದ್ದ ಇಬ್ಬರು ಇಸುಬು ಅವರನ್ನು ತಡೆದು ವಿಚಾರಿಸಿದ್ದಾರೆ. ನಾನು ಬಾಡಿಗೆ ಹೋಗಿ ಬರುತ್ತಿದ್ದೇನೆಂದು ಹೇಳಿದರೂ ಕೇಳಿಸಿಕೊಳ್ಳದ ಮುಸುಕುಧಾರಿಗಳು ಚಾಲಕನ ಮೇಲೆ ಅವಾಚ್ಯ ಶಬ್ದಗಳಿಂದ ಬೈದು, ಥಳಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದರು ಎಂದು ಗಾಯಾಳು ಆರೋಪಿಸಿದ್ದಾರೆ.






















