ಮದುವೆಯಾದ ಗಂಡ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ಮಹಿಳೆ ಆತ್ಮಹತ್ಯೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬೆಟ್ಟಸೋಗೆ ಗ್ರಾಮದಿಂದ ವರದಿಯಾಗಿದೆ.
ನನ್ನ ಮೇಲೆ ನನ್ನ ಗಂಡ ಅನುಮಾನ ಪಡ್ತಿದ್ದಾನೆ ಎಂದು ವಿಡಿಯೋ ಮಾಡಿ ಮಹಿಳೆ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗ್ತಿದೆ.
29 ವರ್ಷದ ಮಹಾದೇವಿ ಎಂಬ ಮಹಿಳೆ ಮೂರು ವರ್ಷದ ಹಿಂದಷ್ಟೇ ಸೀಬಿಹಳ್ಳಿ ಗ್ರಾಮದ ಕುಮಾರ್ ಎಂಬಾತನನ್ನು ಮದುವೆಯಾಗಿದ್ದರಂತೆ. ಇದಕ್ಕೂ ಮುನ್ನ ಮತ್ತೊಬ್ಬನ ಜೊತೆ ಮಹಾದೇವಿ ಮದುವೆಯಾಗಿ ವಿಚ್ಛೇದನ ಪಡೆದಿದ್ದರಂತೆ. ಕುಮಾರ್ ಜೊತೆ ಎರಡನೇ ಮದುವೆಯಾಗಿತ್ತು. ಈತ ಮದುವೆ ಆದಾಗಿನಿಂದಲೂ ಕಿರುಕುಳ ನೀಡ್ತಿದ್ದಾನೆ ಎಂದು ಮಹಿಳೆ ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ.
ಈ ಮಗು ನನ್ನದಲ್ಲ ಎಂದ ಗಂಡ:
ನಿನ್ನ ನಡತೆ ಸರಿಯಿಲ್ಲ, ಬಸ್ ಹತ್ತಿಕೊಂಡು ಬೇರೆಯವರನ್ನ ನೋಡೋಕೆ ಹೋಗ್ತಿಯಾ. ನಿನಗೆ ಹುಟ್ಟಿದ ಮಗು ನನ್ನದಲ್ಲ ಎಂದು ನನ್ನ ಗಂಡ ಹೇಳ್ತಿದ್ದಾನೆ. ನಿತ್ಯ ಅನುಮಾನದಲ್ಲೇ ಬಾಯಿಗೆ ಬಂದಂತೆ ಬೈಯ್ತಿದ್ದ. ನನ್ನ ಅತ್ತೆ ಕೂಡ ಚಿತ್ರಹಿಂಸೆ ಕೊಡ್ತಿದ್ರು ಎಂದು ಮಹಿಳೆ ಮಹಾದೇವಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಕಾವೇರಿ ನದಿಗೆ ಹಾರಿ ಆತ್ಮಹತ್ಯೆ
ನನ್ನಿಂದ ಯಾರಿಗೂ ಕಷ್ಟ ಬೇಡ ಎಂದು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮಹಿಳೆ ಮಹಾದೇವಿ ಸೆಲ್ಫಿ ವಿಡಿಯೋದಲ್ಲಿ ನೋವು ತೋಡಿಕೊಂಡಿದ್ದಾರೆ. ಬಳಿಕ ಪುಟ್ಟ ಮಗುವಿನ ಜೊತೆ ಮಹಿಳೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿ ಆಗಿದೆ.
ಯಾರ ಮಾತನ್ನು ನನ್ನ ಗಂಡ ಕೇಳಲಿಲ್ಲ
ಮಹಿಳೆ ಮಹಾದೇವಿ ಮನೆಯಲ್ಲಿ ಡೆತ್ ನೋಟ್ ಕೂಡ ಬರೆದಿಟ್ಟಿದ್ದು ನನ್ನ ಗಂಡ ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತಾನೆ. ಪೊಲೀಸರು ಎಷ್ಟೇ ಬುದ್ದಿ ಹೇಳಿದ್ರೂ ನನ್ನ ಗಂಡ ಕೇಳುತ್ತಿಲ್ಲ. ನನ್ನ ಸಾವಿನಿಂದ ಅವನಿಗೆ ನೆಮ್ಮದಿ ಸಿಗುವುದಾದ್ರೆ ಸಿಗಲಿ ಎಂದು ವಿಡಿಯೋ ಮಾಡಿಟ್ಟು ಹಾಸನ ಜಿ. ಅರಕಲಗೂಡು ತಾ. ರಾಮನಾಥಪುರ ಬಳಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.


























