ಬಿಸಿಲೆಘಾಟಿನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಆ್ಯಂಬುಲೆನ್ಸಿಗೆ ಅಡ್ಡ ಬಂದು ಹುಚ್ಚಾಟವಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಯನ್ನು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಮಹಮ್ಮದ್ ಮನ್ಸೂರ್ ಎಂದು ಗುರುತಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಮದುವೆಗೆಂದು ಬರುತ್ತಿದ್ದ ಟೆಂಪೋ ಬಿಸಿಲೆ ಘಾಟಿನಲ್ಲಿ ಪಲ್ಟಿಯಾಗಿತ್ತು. ಅಪಘಾತದಲ್ಲಿ 20 ಮಂದಿ ಗಾಯಗೊಂಡಿದ್ದು, ಏಳು ಮಂದಿ ಗಂಭೀರ ಗಾಯಗೊಂಡಿದ್ದರು. ಇದರಲ್ಲಿ ಓರ್ವರಾದ ಶಿವರಾಜ್ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಗಂಭೀರ ಗಾಯಗೊಂಡವರು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ KA.22.C.1382ರಲ್ಲಿ ಮಧ್ಯಾಹ್ನ 1.30ರ ಹೊತ್ತಿಗೆ ಬಿ.ಸಿ.ರೋಡ್’ನಿಂದ ಮುಂದೆ ಸಾಗಿಸಲಾಗುತ್ತಿತ್ತು. ಈ ಸಂದರ್ಭ ದ್ವಿಚಕ್ರ KA.19.EK.0696 ಇದರ ಸವಾರ ಆ್ಯಂಬುಲೆನ್ಸಿಗೆ ಅಡ್ಡ ಬರುತ್ತಿದ್ದ. ಸೈರನ್ ಹಾಗೂ ಹಾರನ್ ಹಾಕಿದರೂ ದಾರಿ ಬಿಟ್ಟುಕೊಡದೇ ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡ ಬಂದಿದ್ದ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ 128/2025 :110, 125 ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಿಸಲಾಗಿದೆ.





















