ಸುಳ್ಯ: ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಸುಳ್ಯ ನ್ಯಾಯಾಲಯ ದಂಡ ವಿಧಿಸಿದ್ದಲ್ಲದೆ 10 ದಿನಗಳ ಕಾಲ ಸುಳ್ಯ ಪೊಲೀಸ್ ಠಾಣೆಯ ಆವರಣವನ್ನು ಶುಚಿಗೊಳಿಸುವ ಶಿಕ್ಷೆಯನ್ನು ವಿಧಿಸಿದೆ.
2025ರ ಎ. 22ಎಂದು ರಾತ್ರಿ ಅಂಕತ್ ಪಲ್ಸಾಯ ಎಂಬಾತ ಮದ್ಯದ ಅಮಲಿನಲ್ಲಿ ಕೆವಿಜಿ ಜಂಕ್ಷನ್ ಬಳಿ ಸುಳ್ಯ ಎಸ್ಐ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ ವಾಹನದ ದಾಖಲೆಯನ್ನು ಹಾಜರುಪಡಿಸದೆ ವಾಹನ ಚಲಾಯಿಸಿಕೊಂಡು ಹೋಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಹಿರಿಯ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಮೋಹನ್ಬಾಬು ಅವರು ಕುಡಿದು ವಾಹನ ಚಲಾಯಿಸಿರುವುದು ಮತ್ತು ಅನುಚಿತ ವರ್ತನೆಯ ಕಾರಣಕ್ಕೆ 12 ಸಾವಿರ ರೂ. ದಂಡ ಪಾವತಿಸುವಂತೆ ಮತ್ತು ಜು. 19ರಿಂದ ಜು. 28ರ ಸಮುದಾಯ ಸೇವೆ (ಠಾಣೆಯ ಆವರಣ ಶುಚೀಕರಣ) ಮಾಡುವಂತೆ ಆದೇಶಿಸಲಾಗಿದೆ.
























