ಮಂಗಳೂರು ನಗರದ ಹೊರವಲಯದಲ್ಲಿ ಸಾಮೂಹಿಕವಾದ ಗುಂಪು ಹಲ್ಲೆ ನಡೆದು ಕೊಲೆಗೀಡಾದ ವ್ಯಕ್ತಿ ಕೇರಳದ ವಯನಾಡು ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಅಶ್ರಫ್ ಎಂದು ದೃಢೀಕರಿಸಲಾಗಿದೆ.
ಇದರೊಂದಿಗೆ ಪ್ರಕರಣ ಗಂಭೀರವಾದ ತಿರುವು ಪಡೆದು 15 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೋಲೀಸ್ ಕಮೀಷನರ್ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಕುಡುಪು ಭಟ್ರಕೆರೆ ಎಂಬಲ್ಲಿ ಏ. 27ರಂದು ಸಂಜೆ 5.30ಕ್ಕೆ ಕಲ್ಲುರ್ಟಿ ದೈವಸ್ಥಾನ ಸಮೀಪ ಯುವಕನ ಕೊಲೆಯಾಗಿತ್ತು. ಈ ಪ್ರದೇಶದಲ್ಲಿ ನಡೆದ ಕ್ರಿಕೇಟ್ ಪಂದ್ಯಾಟದಲ್ಲಿ ಆಟವಾಡುತ್ತಿದ್ದವರು ಮಾನಸಿಕ ಅಸ್ವಸ್ಥನಾದ ಯುವಕನನ್ನು ಹೊಡೆದು ಕೊಲೆಗೈದಿದ್ದರು. ತದನಂತರ ಪೋಲೀಸರು ವಿಳಂಬಿಸಿ ಬಂದು ಅಸಹಜ ಮರಣಕ್ಕೆ ಕೇಸು ದಾಖಲಿಸುವಾಗಲೇ ಸ್ಥಳೀಯ ಸಂಘಟನೆಗಳು ಇದನ್ನು ಪ್ರಶ್ನಿಸಿದ್ದವು. ಉತ್ತರ ಭಾರತೀಯ ಮಾದರಿಯ ಗುಂಪು ಹಲ್ಲೆ, ಕೊಲೆ ನಡೆಸಿದವರ ಬಂಧನಕ್ಕೆ ಒತ್ತಾಯಿಸಿದ್ದರು. ಬಳಿಕ ನಡೆದ ಮರಣೋತ್ತರ ಪರೀಕ್ಷಾ ವರದಿಯಲ್ಲೂ ಹೊಡೆತಗಳಿಂದ ಉಂಟಾದ ರಕ್ತಸ್ರಾವ ಮತ್ತು ಸಕಾಲಿಕ ಚಿಕಿತ್ಸೆ ಲಭಿಸದೇ ಸಾವು ಸಂಭವಿಸಿದೆ ಎಂದು ಉಲ್ಲೇಖಿಸಲಾಗಿತ್ತು.
ಕ್ರಿಕೆಟ್ ಆಡುತ್ತಿದ್ದವರೊಂದಿಗೆ ಈತನಿಗೆ ಜಗಳ ನಡೆದಿದ್ದು, ಈತ ಪಾಕ್ ಪರ ಘೋಷಣೆ ಕೂಗಿದ್ದು ಹೊಡೆದಾಟಕ್ಕೆ ಕಾರಣವೆಂದೂ ಪೊಲೀಸರು ಹೇಳುತ್ತಿದ್ದಾರೆ. ಸುಮಾರು 30 ಮಂದಿಯ ತಂಡ ಸೇರಿ ಹೊಡೆದು ಹಲ್ಲೆ ನಡೆಸಿ ಮೃತಪಟ್ಟ ಬಳಿಕ ಶವ ಉಪೇಕ್ಷಿಸಿರುವುದಾಗಿ ಹೇಳಲಾಗಿದೆ. ಮೃತ ವ್ಯಕ್ತಿಯನ್ನು ಆತನ ಕುಟುಂಬದವರು ಮಂಗಳೂರಿಗೆ ತಲುಪಿ, ಗುರುತಿಸಿದ್ದಾರೆ. ಈತ ಮಂಗಳೂರಿನಲ್ಲಿ ಅಂಗಡಿ ಜಗಲಿಯಲ್ಲಿ ವಾಸಿಸುತ್ತಿದ್ದವನೆಂದು ಪೋಲೀಸರು ತಿಳಿಸಿದ್ದಾರೆ.