ಮಂಗಳೂರು: 2022ರಲ್ಲಿ ಮಂಗಳೂರಿನ ಅತ್ತಾವರದ ನಂದಿಗುಡ್ಡೆಯ ಫ್ಲ್ಯಾಟ್ನಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಎಲ್ಲಾ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಯಿತು.
ಮಂಗಳೂರಿನಲ್ಲಿ ಸಂಚಲನ ಉಂಟು ಮಾಡಿದ್ದ ಈ ಪ್ರಕರಣವನ್ನು ಅಂದಿನ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದ ತಂಡ ದಾಳಿ ನಡೆಸಿ ಪತ್ತೆ ಮಾಡಿತ್ತು. ಅಧಿಕಾರಿಗಳು ಉಳ್ಳಾಲದ ಪ್ರಭಾವಿ ರಾಜಕಾರಣಿಗಳ ಸಹವರ್ತಿಗಳು ಮತ್ತು ಪ್ರಮುಖ ಸ್ಥಳೀಯ ಬಿಲ್ಡರ್ಗಳು ಸೇರಿದಂತೆ 17ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ಕಾಸರಗೋಡಿನ ಉಪ್ಪಳದ ಶಮೀನಾ ಎಂಬಾಕೆ ಆಕೆಯ ಪತಿ ಅಬೂಬಕರ್ ಸಿದ್ದಿಕ್ ಮತ್ತು ಸಹವರ್ತಿಗಳಾದ ಅಸ್ಮಾ, ಐಸಮ್ಮ, ರೆಹಮತ್ ಮತ್ತು ಉಮ್ಮರ್ ಕುಂಞಿ ಅವರೊಂದಿಗೆ ಸೇರಿ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿತ್ತು.
ತನಿಖೆಯ ಪ್ರಕಾರ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಯುವತಿಯರನ್ನು, ಅದರಲ್ಲೂ ಕಾಲೇಜು ವಿದ್ಯಾರ್ಥಿನಿಯರನ್ನು ಐಷಾರಾಮಿ ಜೀವನಶೈಲಿ ಮತ್ತು ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ಕರೆತರಲಾಗಿತ್ತು. ಇಬ್ಬರು ಮುಸ್ಲಿಂ ಯುವತಿಯರನ್ನು ರಕ್ಷಿಸಲಾಗಿದ್ದು, ಮೂವರು ಮಹಿಳೆಯರು ಮತ್ತು 75 ವರ್ಷದ ವೃದ್ಧ ಸೇರಿದಂತೆ 15 ಜನರನ್ನು ಬಂಧಿಸಲಾಗಿತ್ತು. ಖಾಸಗಿ ಅಪಾರ್ಟ್ಮೆಂಟ್ಗಳಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಭೇಟಿಯಾಗಬಹುದು ಎಂದು ನಂಬಿಸಿ ವಂಚಿಸಲಾದ ಗ್ರಾಹಕರಲ್ಲಿ ಕೇರಳದ ಶ್ರೀಮಂತ ವ್ಯಕ್ತಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳು ಕಾಲೇಜು ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ, ಅವರನ್ನು ಹೊರಗೆ ಕರೆದುಕೊಂಡು ಹೋಗಿ, ನಂತರ ಲಕ್ಷಾಂತರ ರೂಪಾಯಿಗಳನ್ನು ನೀಡಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿ 86 ಸಾಕ್ಷಿಗಳನ್ನು ಹಾಜರುಪಡಿಸಿದರೂ, ಪ್ರಮುಖ ಸಾಕ್ಷಿಗಳು ಪ್ರಕರಣಕ್ಕೆ ಪೂರಕ ಸಾಕ್ಷಿ ನೀಡಲು ವಿಫಲರಾದ ಕಾರಣ ಪ್ರಕರಣವು ನ್ಯಾಯಾಲಯದಲ್ಲಿ ಹಿನ್ನಡೆ ಗಳಿಸಿದೆ.
ಮಾರ್ಚ್ 28 ರಂದು, ಮಂಗಳೂರು ಜಿಲ್ಲಾ ಹೆಚ್ಚುವರಿ ಪೋಕ್ಸೋ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಆರೋಪಿಗಳ ಪರವಾಗಿ ತೀರ್ಪು ನೀಡಿತು. ವಿಚಾರಣೆಯ ಸಂದರ್ಭದಲ್ಲಿ ಪ್ರಮುಖ ಆರೋಪಿ ಶಮೀನಾ ಮೃತಪಟ್ಟಿದ್ದಳು.
10 ಪ್ರಕರಣಗಳನ್ನು ಹೊಂದಿದ್ದ ಪ್ರಕರಣದ ಕಿಂಗ್ ಪಿನ್ ಆರೋಪಿಗಳ ಪರ ವಿಕ್ರಮ್ ರಾಜ್ ಎ , ಆಸೀಫ್ ಬೈಕಾಡಿ, ಮಹಮ್ಮದ್ ಅಸ್ಗರ್ ಮುಡಿಪು , ಯಾಸ್ಮಿನ್ ವಾದಿಸಿದ್ದರು . ವೇಶ್ಯಾವಾಟಿಕೆ ಗ್ರಾಹಕ ಆರೋಪಿಗಳ ಪರ ಅರುಣ್ ಬಂಗೇರ , ಮೊಹಮ್ಮದ್ ಸಿನಾನ್ , ಅಬ್ದುಲ್ ಆಝೀಜ್ , ರಾಜೇಶ್ ಎ ವಾದಿಸಿದರು.