ಮೂಡಬಿದ್ರೆಯ ಪ್ರತಿಷ್ಠಿತ ಎಕ್ಸಲೆಂಟ್ ವಿದ್ಯಾ ಸಂಸ್ಥೆಯು ಹಮ್ಮಿಕೊಂಡಿದ್ದ ವರ್ಧಮಾನ ಭಗವಾನ್ ಮಹಾವೀರ ಸ್ವಾಮಿಯ 2625ನೇ ಸಂವತ್ಸರದ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮ ವಿದ್ಯಾಸಂಸ್ಥೆಯ ಆಡಿಟೋರಿಯಂ ಆವರಣದಲ್ಲಿ ನೆರವೇರಿತು.
ಮಾಜಿ ಸಚಿವರು ಅಭಯ್ ಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದ್ದು, ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಎಕ್ಸಲೆಂಟ್ ವಿದ್ಯಾಸಂಸ್ಥೆಯು ಮಹಾವೀರ ಜನ್ಮ ಕಲ್ಯಾಣೋತ್ಸವದ ಶುಭ ಸಂದರ್ಭದಲ್ಲಿ ಸಮಾಜ ಸೇವೆಯನ್ನು ಮಾಡಿರುವ ಸಮಾಜದ 4 ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ಮಾಳ ಗ್ರಾಮದ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಸುಮಾರು 35 ವರ್ಷಗಳಿಂದ ಸಾಮಾಜಿಕ ಧಾರ್ಮಿಕ ಆರ್ಥಿಕ ಹಾಗೂ ವಿದ್ಯಾ ಕ್ಷೇತ್ರದಲ್ಲಿ ಸತತ ಸೇವೆ ಮಾಡಿಕೊಂಡಿರುವ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯಾವುದೇ ಫಲಾಪೇಕ್ಷವಿಲ್ಲದೆ ಕಷ್ಟ ಕಾಲದಲ್ಲಿ ಸ್ಪಂದಿಸುವ ನಿರ್ಮಲ ಮನಸ್ಸಿನ ಹೃದಯ ಶ್ರೀಮಂತ ಹಾಗೂ ಮಹಾಮಾರಿ ಕರೋನ ಸಮಯದಲ್ಲಿ ಸತತವಾಗಿ ಸೇವೆ ಮಾಡಿರುವ ಮತ್ತು ಸುಮಾರು 77 ನೇ ಬಾರಿ ರಕ್ತದಾನ ಮಾಡುವ ಮುಖಾಂತರ ಸಮಾಜದ ಎಲ್ಲರ ಮನೆಮಾತಾಗಿರುವ ಹಲವಾರು ಸಂಘ-ಸಂಸ್ಥೆಯಲ್ಲಿ ಪದಾಧಿಕಾರಿಯಾಗಿ ಗುರುತಿಸಿಕೊಂಡಿರುವ, ಯಾವುದೇ ಸಮಾಜದ ವ್ಯಕ್ತಿ ಕಷ್ಟದಲ್ಲಿ ಇರುವಾಗ ಸ್ಪಂದಿಸುವ ವಿಶೇಷ ಗುಣವಿರುವ ಮತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನಾಗಿರುವ ಜೈನ್ ಸಮಾಜದ ಮಾಳ ಹರ್ಷೇಂದ್ರ ಜೈನ್ ಅವರಿಗೆ ವರ್ಧಮಾನ ಮಹಾವೀರ ಶಾಂತಿ ಸೇವಾ ಪುರಸ್ಕಾರ ಎಕ್ಸಲೆಂಟ್ 2026 ನೀಡಿ ಗೌರವಿಸಲಾಯಿತು.
ಹಾಗೆಯೇ ಮಹಾವೀರ ಪಾರ್ಶ್ವನಾಥ್ ಕುಂದೂರ್ ಮತ್ತು ಬರಹಗಾರ, ಹಿತಚಿಂತಕ ನಿರಂಜನ್ ಕುದ್ಯಾಡಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಳಗಾವಿ ಭರತೇಶ್ ವಿದ್ಯಾಸಂಸ್ಥೆಯ ವಿನೋದ ದೊಡ್ಡಣ್ಣನವರ್ ಅವರಿಗೆ ವರ್ಧಮಾನ ಮಹಾವೀರ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಟ್ಲ ನವಿಲು ಬಸದಿಯ ಅಧ್ಯಕ್ಷ ಜಿತೇಶ್ ಜೈನ್, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ವಿದ್ಯಾಸಂಸ್ಥೆಯ ಮುಖ್ಯಸ್ಥ ಪ್ರೊಫೆಸರ್ ಸಂಪತ್ ಕುಮಾರ್, ಯುವ ಉದ್ಯಮಿ ದರ್ಶನ್ ಜೈನ್ ಮಂಗಳೂರು, ನ್ಯಾಯವಾದಿ ಬಾಹುಬಲಿ ಪ್ರಸಾದ್, ಮೂಡಬಿದಿರೆ ಜೈನ್ ಮಿಲನ್ ಅಧ್ಯಕ್ಷ ಕೃಷ್ಣರಾಜ್, ನೆಲ್ಲಿಕರು ಪುಷ್ಪರಾಜ್ ಜೈನ್, ರಶ್ಮಿ ಎಚ್. ಜೈನ್ ಉಪಸ್ಥಿತರಿದ್ದರು.
























