ಕರಾವಳಿ ಹಾಗೂ ಮಡಿಕೇರಿಯಲ್ಲಿ ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳಿದ ಎಲೆಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಖಾಸಗಿ ಸಂಶೋಧನಾ ಕೇಂದ್ರದ ಸಹಾಯ ಪಡೆಯಲು ಅಡಿಕೆ ಸಹಕಾರ ಸಂಘಗಳು ತೀರ್ಮಾನಿಸಿದೆ.
ರಾಜ್ಯ ಅಡಿಕೆ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಮ್ಯಾಮ್ಕೋಸ್, ಕ್ಯಾಂಪ್ಕೋ, ತುಮ್ಕೋಸ್, ಆಫ್ಕೋಸ್ ಸೇರಿದಂತೆ ವಿವಿಧ ಸಂಘಗಳು ಸಂಶೋಧನೆ, ವೈಜ್ಞಾನಿಕ ಅಧ್ಯಯನ ಹಾಗೂ ಪರಿಣಾಮಕಾರಿ ಔಷಧಿ ಅಭಿವೃದ್ಧಿಗೆ ಒಗ್ಗಟ್ಟಾಗಿ ಮುಂದಾಗಿವೆ.
ಸರ್ಕಾರಿ ಮಟ್ಟದಲ್ಲಿ ಸಮರ್ಪಕ ಸಂಶೋಧನೆ ಮತ್ತು ಪರಿಹಾರ ದೊರೆಯದ ಹಿನ್ನೆಲೆಯಲ್ಲಿ, ರೈತರ ಬೆಳೆ ನಷ್ಟ ತಡೆಯಲು ಖಾಸಗಿ ಮಟ್ಟದಲ್ಲಿ ವೇಗವಾಗಿ ಕಾರ್ಯಾಚರಣೆ ಆರಂಭಿಸುವ ಉದ್ದೇಶ ವ್ಯಕ್ತವಾಗಿದೆ. ಎಲೆಚುಕ್ಕಿ ರೋಗದಿಂದಾಗಿ ಈ ವರ್ಷ ಅಡಿಕೆ ಬೆಳೆ ಶೇ. 50-60ವರೆಗೆ ಹಾನಿಯಾಗಿರುವುದರಿಂದ ರೈತರು ಶೀಘ್ರ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.























