ಯುದ್ಧದ ವಾತಾವರಣದ ಈ ಸಂದರ್ಭದಲ್ಲಿ ಮಾಕ್ ಡ್ರಿಲ್ ಕಾರ್ಯಕ್ರಮ ಸರಕಾರದ ವತಿಯಿಂದ ಈಗಾಗಲೇ ತೀರ್ಮಾನವಾಗಿದೆ. ಮಂಗಳೂರು ನಗರದಲ್ಲಿ ಈ ಕುರಿತು ಜಾಗೃತಿ ನೀಡುವ ಕಾರ್ಯಕ್ರಮದಲ್ಲಿ ಫೇಮ್ ತಂಡವು ಜಿಲ್ಲೆಯ ಇನ್ನೂ ಹಲವು ನಾಯಕತ್ವ ವಹಿಸುವ ತಂಡಗಳನ್ನು ಸೇರಿಸಿಕೊಂಡು ಜನರಲ್ಲಿ ಜಾಗೃತಿ ಮೂಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ.
ಫೇಮ್ ಅಡ್ವೆಂಚರ್ ಅಕಾಡೆಮಿ ಕಳೆದ ಐದು ವರ್ಷಗಳಿಂದ ಶಾಲೆ ಮತ್ತು ಗ್ರಾಮೀಣ ಮಟ್ಟದಲ್ಲಿ ಅಡ್ವೆಂಚರ್ ಹಾಗೂ ಡಿಸಾಸ್ಟರ್ ಮ್ಯಾನೇಜ್ಮೆಂಟ್ ತರಬೇತಿ ನೀಡುತ್ತಾ ಬಂದಿದೆ.
ದಕ್ಷಿಣ ಭಾರತದ ರಾಜ್ಯಗಳಿಗೆ ವಿಶೇಷ ತೊಂದರೆ ಇಲ್ಲದೇ ಇದ್ದರೂ ಜನರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಇದರ ಕುರಿತು ಹೆಚ್ಚಿನ ತಿಳುವಳಿಕೆ ಅಗತ್ಯವಿದೆ.
ಫೇಮ್ ಸಂಸ್ಥಾಪಕ, ಅಧ್ಯಕ್ಷ ವೇಣು ಶರ್ಮ ಅವರು ಈ ಬಗ್ಗೆ ಮಾತನಾಡುತ್ತಾ, “ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ, ಅಪಾರ್ಟ್ಮೆಂಟ್’ಗಳಲ್ಲಿ, ಜನ ಸೇರುವಂತಹ ದೇವಸ್ಥಾನ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಈ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯವನ್ನು ನಾವು ಆರಂಭಿಸುತ್ತಿದ್ದೇವೆ.” ಎಂದರು.
ಶಾಲೆಗೂ ನಮ್ಮ ಸಹಕಾರ:
ತರಬೇತಿ ನೀಡುವ ಹಾಗೂ ಫೇಮ್ ಸಂಸ್ಥಾಪಕ ಕಾರ್ಯದರ್ಶಿ ಎಡ್ವಕೇಟ್ ಸಂತೋಷ್ ಪೀಟರ್ ಡಿಸೋಜಾ ಮಾತನಾಡಿ “ಬೆಂಕಿ ಅವಘಡದ ಸಂದರ್ಭ ಮತ್ತು ವಿಶೇಷ ಅನೌನ್ಸ್ಮೆಂಟ್ ಸಂದರ್ಭಗಳಲ್ಲಿ ಮನೆ, ರಸ್ತೆ, ಕಚೇರಿಯಲ್ಲಿ ಕೆಲಸ ಮಾಡುವವರು ಹೇಗೆ ಜಾಗೃತ ವಹಿಸಬೇಕು ಎಂಬುದರ ಕುರಿತು ನಮ್ಮ ತರಬೇತಿ ಇರುತ್ತದೆ. ಜೂನ್ 1ರಂದು ಶಾಲೆ ಆರಂಭವಾಗಲಿದೆ. ಅಲ್ಲಿನ ಎನ್.ಸಿ.ಸಿ. ಮತ್ತು ಸ್ಕೌಟ್ಸ್ ಶಿಕ್ಷಕರು ಈ ಕುರಿತು ಖಂಡಿತವಾಗಿಯೂ ಕೆಲಸ ಮಾಡುವರು. ಅವರ ಜೊತೆ ನಾವು ಸಹಕರಿಸಲಿದ್ದೇವೆ” ಎಂದರು.
ಈ ಕಾರ್ಯಕ್ರಮದಲ್ಲಿ ಸಲಹೆಗಾರರಾಗಿ ಏರ್ ಫೋರ್ಸ್ ಮಾಜಿ ಏರ್ ವೇಟರನ್ ಹಾಗೂ ಮಂಗಳೂರು ಫೈಯರ್ ಅಂಡ್ ಸೇಫ್ಟಿ ಕಾಲೇಜಿನ ಪ್ರಾಂಶುಪಾಲ ಯಶ್ವಂತ್ ಗೋಪಾಲ್ ಶೆಟ್ಟಿ ಮಾತನಾಡಿ “ನಾನು ಏರ್ ಫೋರ್ಸ್ ನಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದು, ನನ್ನ ಅನುಭವವನ್ನು ಹಂಚಲಿದ್ದೇನೆ. ಮಂಗಳೂರಿನ 350ಕ್ಕೂ ಹೆಚ್ಚು ನಿವೃತ್ತ ಸೈನಿಕರ ತಂಡದ ಜೊತೆಯಲ್ಲಿ ನಾನಿದ್ದೇನೆ. ಹಾಗೆಯೇ ನಮ್ಮ ಫೈರ್ ಅಂಡ್ ಸೇಫ್ಟಿ ವಿದ್ಯಾರ್ಥಿಗಳು ಮತ್ತು ಅನುಭವಿ ಶಿಕ್ಷಕ ವೃಂದ ‘ಫೇಮ್’ ಈ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮದಲ್ಲಿ ಕೈ ಜೋಡಿಸಲಿದೆ” ಎಂದರು.
ನಿವೃತ್ತ ಪೊಲೀಸ್ ಎಸ್.ಪಿ. ಹರಿಶ್ಚಂದ್ರ ಮಾತನಾಡಿ “ನಮ್ಮ ನಿವೃತ್ತ ಪೊಲೀಸರ ಗೆಳೆಯರ ಬಳಗ ತಮ್ಮ ಅನುಭವವನ್ನು ಹಂಚಲಿದೆ ಎಂದರು.”
ಫೇಮ್ ಜೊತೆ ಸಹಕರಿಸಲು ಮುಂದಾದ ಉದ್ಯಮಿ ಉಮೇಶ್ ಶೆಟ್ಟಿ ಬರ್ಕೆ “ನಮ್ಮೂರಿನ ಪರಂಗಿಪೇಟೆ ಆಂಜನೇಯ ದೇವಸ್ಥಾನದ ವಠಾರದಲ್ಲಿ ಈ ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನಾಳೆಯಿಂದ ಆರಂಭಿಸಲಾಗುವುದು” ಎಂದು ತಿಳಿಸಿದರು.
“ಪ್ರತಿ ಊರಿನಲ್ಲಿ ಮತ್ತು ಜನ ಸೇರುವ ಸ್ಥಳಗಳಲ್ಲಿ ಮುಂದಾಳುತ್ವ ವಹಿಸಿ ಈ ಬಗೆಯ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳು ನಡೆಯಬೇಕಾಗಿದೆ. ಈ ಕುರಿತಂತೆ ಹಲವಾರು ಉತ್ತಮ ವಿಡಿಯೋ ಸಿನಿಮಾ ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಇದನ್ನು ಜನರಿಗೆ ತಲುಪಿಸಬೇಕು” ಎಂದು ವೇಣು ಶರ್ಮ ಮನವಿ ಮಾಡಿಕೊಂಡರು.