Gl jewellers
ಸ್ಥಳೀಯ

ಕಾನೂನುಬದ್ಧವಾಗಿ ಶ್ರೀಮಂತಿಕೆ ಗಳಿಸುವುದು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ |ದ್ವಾರಕೋತ್ಸವ 2025 ಉದ್ಘಾಟಿಸಿ ವಿಶ್ವೇಶ್ವರ ಭಟ್ ಬಂಗಾರಡ್ಕ |  ಸನ್ಮಾನ, ಪ್ರತಿಭಾ ಪುರಸ್ಕಾರ, ಹೊಸ ಪುಸ್ತಕಗಳ ಬಿಡುಗಡೆ, ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ

ಉದ್ಯೋಗ ಸೃಷ್ಟಿಸಿ ಸಮಾಜಕ್ಕೆ ಕೊಡುಗೆ ನೀಡುವುದು ದೊಡ್ಡ ಸಮಾಜ ಸೇವೆ. ಗೋಪಾಲಕೃಷ್ಣ ಭಟ್ ಅವರು ದ್ವಾರಕಾ ಸಂಸ್ಥೆಯ ಮೂಲಕ ಇಂತಹ ಸೇವೆ ಮಾಡುತ್ತಿದ್ದು, ಇನ್ನಷ್ಟು ಜನರಿಗೆ ಇದು ಪ್ರೇರಣೆಯಾಗಲಿ ಎಂದು ಹಿರಿಯ ಆರ್ಥಿಕ ತಜ್ಞ ವಿಶ್ವೇಶ್ವರ ಭಟ್ ಬಂಗಾರಡ್ಕ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಉದ್ಯೋಗ ಸೃಷ್ಟಿಸಿ ಸಮಾಜಕ್ಕೆ ಕೊಡುಗೆ ನೀಡುವುದು ದೊಡ್ಡ ಸಮಾಜ ಸೇವೆ. ಗೋಪಾಲಕೃಷ್ಣ ಭಟ್ ಅವರು ದ್ವಾರಕಾ ಸಂಸ್ಥೆಯ ಮೂಲಕ ಇಂತಹ ಸೇವೆ ಮಾಡುತ್ತಿದ್ದು, ಇನ್ನಷ್ಟು ಜನರಿಗೆ ಇದು ಪ್ರೇರಣೆಯಾಗಲಿ ಎಂದು ಹಿರಿಯ ಆರ್ಥಿಕ ತಜ್ಞ ವಿಶ್ವೇಶ್ವರ ಭಟ್ ಬಂಗಾರಡ್ಕ ಹೇಳಿದರು.

ದ್ವಾರಕಾ ಕಾರ್ಪೋರೇಷನ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನದ ವತಿಯಿಂದ ಫೆ. 16ರಂದು ಮುಕ್ರಂಪಾಡಿಯ ಗೋಕುಲ ಬಡಾವಣೆಯಲ್ಲಿ ನಡೆದ 5ನೇ ವರ್ಷದ `ದ್ವಾರಕೋತ್ಸವ’-2025 ಸನ್ಮಾನ, ಪ್ರತಿಭಾ ಪುರಸ್ಕಾರ, ದ್ವಾರಕಾ ಪ್ರಕಾಶನದಿಂದ ಹೊಸ ಪುಸ್ತಕಗಳ ಬಿಡುಗಡೆ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಅರ್ಥಶಾಸ್ತ್ರದ ಪ್ರಕಾರ, ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿ ತಾವು ಶ್ರೀಮಂತರಾಗುವುದೂ ಕೂಡ ಸಮಾಜಕ್ಕೆ ಕೊಡುಗೆ ನೀಡಿದಂತೆ. ಹೀಗೆ ಶ್ರೀಮಂತರಾದಾಗ ತೆರಿಗೆ ಹಣ ಸರ್ಕಾರಕ್ಕೆ ಪಾವತಿಯಾಗುತ್ತದೆ, ಜನರಿಗೆ ಉದ್ಯೋಗ ಸೃಷ್ಟಿ ಆಗುತ್ತದೆ ಹೀಗೆ ಹತ್ತು ಹಲವು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ಸಲ್ಲುತ್ತದೆ. ಹಾಗಾಗಿ ಕಾನೂನು ಬದ್ಧವಾಗಿ ಶ್ರೀಮಂತರಾಗುವುದೂ ಅಥವಾ ಶ್ರೀಮಂತಿಕೆಯನ್ನು ಸಂಪಾದಿಸುವುದೂ ದೇಶಕ್ಕೆ ದೊಡ್ಡ ಆರ್ಥಿಕತೆಯನ್ನು ನಿರ್ಮಿಸಿದಂತೆ ಎಂದು ವಿಶ್ಲೇಷಿಸಿದರು.

ನಾವು ಶ್ರೀಮಂತರಾದರೆ ಸಾಲದು. ಆ ಶ್ರೀಮಂತಿಕೆಯನ್ನು ಸೇವೆಯ ರೂಪದಲ್ಲಿ ಸಮಾಜಕ್ಕೆ ನೀಡುವ ಕೆಲಸ ಮಾಡಬೇಕು. ಅಂತಹ ಕೆಲಸವನ್ನು ದ್ವಾರಕಾ ಸಂಸ್ಥೆಯ ಮೂಲಕ ದೇಶ, ಸಮಾಜಕ್ಕೆ ಹತ್ತಾರು ಕ್ಷೇತ್ರದಲ್ಲಿ ಗೋಪಾಲಕೃಷ್ಣ ಭಟ್ ಅವರು ಮಾಡುತ್ತಿದ್ದಾರೆ. ಅವರ ಈ ಸಾಧನೆ ಪುತ್ತೂರಿನ ಆಧುನಿಕ ಚರಿತ್ರೆಯಲ್ಲಿ ದಾಖಲಾಗಲಿ. ದ್ವಾರಕಾದ ಹೆಸರು ಅಜರಾಮರವಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಆಪ್ತ ಸಲಹೆಗಾರರೂ ಮಕ್ಕಳ ತಜ್ಞರೂ ಆಗಿರುವ ಡಾ.ಸುಲೇಖಾ ವರದರಾಜ್ ಮಾತನಾಡಿ, ದ್ವಾರಕಾ ಸಂಸ್ಥೆಯ ಮುಖಾಂತರ ಹಲವು ಮನೆ, ಮನಗಳನ್ನು ಒಂದು ಗೂಡಿಸಿರುವ ಕಾರ್ಯವು ಅತ್ಯಂತ ಗೌರವಯುತವಾದದ್ದು. ಬೆಳವಣಿಗೆ ಮತ್ತು ಅಭಿವೃದ್ಧಿಯ ಜೊತೆಗೆ ಸಮಾಜ ಸೇವೆಯ ಮೂಲಕ ಜೀವನದ ವಿಕಾಸವೂ ಮುಖ್ಯ. ಅದನ್ನು ದ್ವಾರಕ ಸಂಸ್ಥೆಯು ಮಾಡಿ ತೋರಿಸಿದೆ. ಜೀವನದ ಅರ್ಥ ಉದ್ದೇಶ ಪರಿಚಯ ಮೂಡಿಸುವ ಜೊತೆಗೆ ಮಕ್ಕಳ ಪರಿಪೂರ್ಣ ವಿಕಸನಕ್ಕೆ ಪೂರಕವಾದ ಕಾರ್ಯವು ದ್ವಾರಕಾ ಪ್ರತಿಷ್ಠಾನದಿಂದ ನಡೆಯುತ್ತಿದೆ ಎಂದರು.

ಪುಸ್ತಕ ಬಿಡುಗಡೆ ಮಾಡಿದ ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ. ಮಾತನಾಡಿ, ಪುಸ್ತಕಗಳನ್ನು ಕೇವಲ ಲೋಕಾರ್ಪಣೆ ಮಾಡಿದರೆ ಸಾಲದು. ಅದನ್ನು ಖರೀದಿಸಿ ಓದುವುದು ಬಹುಮುಖ್ಯ. ಪ್ರಸ್ತುತ ಸನ್ನಿವೇಶದಲ್ಲಿ ಬರೆಯುವ ಕಲೆಯು ಮಾಸಿದೆ. ಎಲ್ಲವೂ ವಾಟ್ಸಪ್ ಸಂದೇಶದಲ್ಲಿ ಮುಗಿಯುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ಕೃತಿ ಬಂದಾಗ ಅದಕ್ಕೆ ಹೆಚ್ಚು ಮೌಲ್ಯ ಇರಲಿದೆ. ಆಯಾ ವಿಷಯಕ್ಕೆ ತಕ್ಕಂತೆ ಒಂದು ಗ್ರಂಥಾಲಯ ನಿರ್ಮಾಣವಾಗಬೇಕು. ಕಲಾ ಕ್ಷೇತ್ರದ ಅಧ್ಯಯನಕ್ಕೆ ಸಂಬಂಧಿಸಿ ವಿಶಿಷ್ಠ ಗ್ರಂಥಾಲಯ ಮಾಡಿದರೆ ಅಧ್ಯಯನಕ್ಕೆ ಅನುಕೂಲವಾಗಲಿದೆ. ಸಾಮಾಜಿಕ, ಸಾಹಿತ್ಯವಾಗಿ ತೊಡಗಿಸಿಕೊಂಡಿರುವ ದ್ವಾರಕ ಪ್ರತಿಷ್ಠಾನದ ಮೂಲಕ ಪುತ್ತೂರಿನ ಸಾಹಿತಿಗಳ ಕೃತಿಗಳು ಒಂದೇ ಕಡೆ ದೊರೆಯುವ ಕಾರ್ಯವಾಗಲಿ ಎಂದರು.

ಗ.ನಾ. ಭಟ್ ರಚಿಸಿದ ಸತೀ ಸಾವಿತ್ರಿ ಪುಸ್ತಕದ ಪರಿಚಯ ಮಾಡಿದ ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಮಾತನಾಡಿ, ಕಟ್ಟಡ ನಿರ್ಮಾಣದ ಜೊತೆಗೆ ಗೋಪಾಲಕೃಷ್ಣ ಭಟ್‌ರವರು ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವುದು ಪುತ್ತೂರಿನ ಭಾಗ್ಯ ಎಂದ ಅವರು, ಗ.ನಾ ಭಟ್‌ ಅವರು ಸ್ವತಃ ಲೇಖಕರಾಗಿ ವಿಶ್ಲೇಷಣೆ ಮಾಡಿ ಸತೀ ಸಾವಿತ್ರಿ ಕೃತಿ ರಚಿಸಿದ್ದಾರೆ. ಕೃತಿಗೆ ನ್ಯಾಯ ಒದಗಿಸಿದ್ದಾರೆ. ಧೀರ ಮಹಿಳೆಯಾಗಿ, ಪರಮ ಪರಿವ್ರತೆಯಾಗಿರುವ ಸಾವಿತ್ರಿಯ ಎಲ್ಲಾ ಪಾತ್ರಗಳನ್ನು ಬಹಳಷ್ಟು ಸೊಗಸಾಗಿ ಕೃತಿಯಲ್ಲಿ ಮೂಡಿಬಂದಿದೆ. ಪ್ರತಿಯೊಬ್ಬರೂ ಈ ಕೃತಿಯನ್ನು ಓದಬೇಕು ಎಂದರು.

ಕೃಷ್ಣಮೂರ್ತಿ ಕೆಮ್ಮಾರ ಅವರ ಪುರಾಣ ರಸಪ್ರಶ್ನಾವಲೀಯ ಪರಿಚಯ ಮಾಡಿದ ಯುವ ಬರಹಗಾರ ನವೀನಕೃಷ್ಣ ಎಸ್. ಉಪ್ಪಿನಂಗಡಿ ಮಾತನಾಡಿ, ಎಲ್ಲಾ ವಯೋಮಾನದವರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಮರ್ಶಾತ್ಮಕ ಮತ್ತು ನೈತಿಕ ಮೌಲ್ಯಗಳ ಸ್ಥೂಲ ಚಿತ್ರಣ ಕೃತಿಯಲ್ಲಿದೆ. ವಯಸ್ಸು ಹಾಗೂ ಓದಿನ ಅನುಭವವನ್ನು ಹೊಂದಿದೆ. ಮಕ್ಕಳ ರಸ ಪ್ರಸ್ನೆಗಳಿಗೆ ಸಂಬಂಧಿಸಿ ಅಧ್ಯಯನಕ್ಕೆ ಭದ್ರ ಬುನಾದಿ ಆಗಲಿದೆ. ಸಾಂಸ್ಕೃತಿಕ ಉದ್ದೀಪನ, ನೆನಪು ಶಕ್ತಿ, ಸಾಮಾನ್ಯ ಜ್ಞಾನ ವೃದ್ದಿಗೆ ಹಾಗೂ ಓದಿನಲ್ಲಿ ಅಸಕ್ತಿ ಮೂಡಿಸಲು ಸಹಕಾರಿಯಾಗಲಿದೆ ಎಂದರು.

ಮಿತ್ತೂರು ಬ್ರಹ್ಮಶ್ರೀ ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬಿ. ಮಾತನಾಡಿ, ವೇದ ವಸಂತ ಮತ್ತು ವೇದ ಮಾಧವ ಕೃತಿ ಬಿಡುಗಡೆಯಾಗುವ ಮೂಲಕ 59 ಗ್ರಂಥಗಳು ಬಿಡುಡಗೆಯಾಗಿದೆ. ಸಂಪ್ರತಿಷ್ಠಾನವು ವೈದ್ಯಕೀಯ ಶಿಬಿರ, ಕೋವಿಡ್ ಸಮಯದಲ್ಲಿ ಮನೆ ಮನೆಗೆ ಕಿಟ್ ಸೇರಿದಂತೆ ಹಲವು ರೀತಿಯ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ದ್ವಾರಕ ಪ್ರತಿಷ್ಠಾನದ ಮೂಲಕ ಇನ್ನಷ್ಟ ಕಾರ್ಯಕ್ರಮಗಳನ್ನು ನಡೆಸುವ ಆಶಯವಿದೆ ಎಂದರು.

ಕೃತಿಕಾರ ಕೃಷ್ಣ ಮೂರ್ತಿ ಕೆಮ್ಮಾರ ಮಾತನಾಡಿ, ಜೀವನದಲ್ಲಿ ನಮ್ಮ ಕಲಿಯುವಿಕೆಯು ನಿರಂತರವಾಗಿರಬೇಕು. ಪುಸ್ತಕದ ಮುಖಾಂತರ ಸಾಧಕರ ವಿಷಯಗಳ ಅನುಭವಕ್ಕೆ ಬರಲಿದೆ. ಪುಸ್ತಕ ಓದುವುದರಿಂದ ಭದ್ರ ಬುನಾದಿ ದೊರೆಯಲಿದ್ದು ನಮ್ಮ ಸಾಧನೆಯ ಯಶಸ್ಸಿನ ಹಾದಿಯಾಗಲಿದೆ ಎಂದರು.

ಸತೀ ಸಾವಿತ್ರಿ ಕೃತಿಕಾರ ಗ.ನಾ ಭಟ್ಟ ಮೈಸೂರು ಮಾತನಾಡಿ, ಮನಸ್ಸು, ಮಾತು, ಕೃತಿ ಮೂರನ್ನು ಸತೀ ಸಾವಿತ್ರಿಯು ಅಭಿನ್ನವಾಗಿ ನಡೆದುಕೊಂಡಿರುವುದು ಕೃತಿಯಲ್ಲಿದೆ. ದ್ವಾರಕಾ ಪ್ರತಿಷ್ಠಾನದ ಗೋಪಾಲಕೃಷ್ಣ ಭಟ್‌ರವರ ಸೇವಾ ಕಾರ್ಯ ಶ್ಲಾಘನೀಯ. ಇವರು ವ್ಯವಹಾರದ ಜೊತೆಗೆ ಸಾಹಿತ್ಯ ಹಾಗೂ ಸಹೃದಯ ಗ್ರಾಹಕರನ್ನು ಒಟ್ಟು ಸೇರಿಸುತ್ತಿದ್ದಾರೆ. ಸಂಸ್ಕೃತ ಪಾಠ ಶಾಲೆ, ಯಕ್ಷಗಾನ ವಿದ್ಯಾಲಯ ಹಾಗೂ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮ ಇನ್ನಷ್ಟು ನಡೆದು ಸಮಾಜದ ಸರ್ವತೋಮಖ ಬೆಳವಣಿಗೆ ದ್ವಾರಕಾ ಪ್ರತಿಷ್ಠಾನದ ಕೊಡುಗೆಯಿರಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ದ್ವಾರಕಾ ಪ್ರರಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ಮಾತನಾಡಿ, ದ್ವಾರಕ ಸಂಸ್ಥೆಯು ಮೊಳಕೆ ಒಡೆದ ಸಂದರ್ಭದಲ್ಲಿ ಕಾರ್ಯರೂಪಕ್ಕೆ ಬಂದ ಕೆಲಸ ಕಾರ್ಯಗಳು ಈಗ ಬೆಳೆದು ಹೆಮ್ಮರದ ರೂಪದಲ್ಲಿ ಎಲ್ಲರಿಗೂ ನೆರಳು, ಆಶ್ರಯ ನೀಡುತ್ತಿದೆ. ವಿದ್ಯಾಭ್ಯಾಸ, ಕಲೆ, ಉದ್ಯೋಗ ಸೇರಿದಂತೆ ಹಲವು ರೀತಿಯಲ್ಲಿ ಸಮಾಜದಲ್ಲಿ ತನ್ನದೇ ಕೊಡುಗೆ ನೀಡುತ್ತಿದೆ. ಸಂಸ್ಥೆಯು ಬೆಳೆದು ಇನ್ನಷ್ಟು ನಾನಾ ರೀತಿಯಲ್ಲಿ ಸಮಾಜ ಸೇವೆಯು ಈ ಸಂಸ್ಥೆಯ ಮೂಲಕ ನಡೆಯಲಿ ಎಂದರು.

ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, 2004-05ರಲ್ಲಿ ನಿರ್ಮಾಣ ಕ್ಷೇತ್ರದಿಂದ ಪ್ರಾರಂಭವಾದ ನಮ್ಮ ಸಂಸ್ಥೆಯು, ಪುತ್ತೂರು ಕೇಂದ್ರವಾಗಿಸಿಕೊಂಡು ದ.ಕ, ಕಾಸರಗೋಡು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಂತ ಹಂತವಾಗಿ ಬೆಳೆಯುವ ಜೊತೆಗೆ ಸಾಮಾಜಿಕ ಕೆಲಸವನ್ನು ಜೀವನದ ಅವಿಭಾಜ್ಯ ಅಂಗವಾಗಿ ನಡೆಸಲಾಗುತ್ತಿದೆ. 2019ರಲ್ಲಿ ಪ್ರತಿಷ್ಠಾನ ನೋಂದಾಯಿಸಿಕೊಂಡು ಕಳೆದ ಐದು ವರ್ಷಗಳಲ್ಲಿ ಸಾಮಾಜಿಕ ಚಟುವಟಿಕೆ ಹಾಗೂ 10ಕ್ಕೂ ಅಧಿಕ ಪುಸ್ತಕಗಳ ಬಿಡುಗಡೆ ಮಾಡಿದೆ. ಜೊತೆಗೆ ಕಲಾ ಕ್ಷೇತ್ರದಲ್ಲಿಯೂ ಕೊಡುಗೆ ನೀಡುತ್ತಿದ್ದು ದ್ವಾರಕ ಕಲಾ ಶಾಲೆಯೂ ಕಾರ್ಯನಿರ್ವಹಿಸುತ್ತಿದೆ. ದ್ವಾರಕಾ ಪ್ರತಿಷ್ಠಾನ, ನಿರ್ಮಾಣ ಸಂಸ್ಥೆ ಹಾಗೂ ಕಲಾ ಶಾಲೆಯವರನ್ನು ಒಟ್ಟು ಸೇರಿಸಿಕೊಂಡು ದ್ವಾರಕಾ ಗ್ರೂಪ್ ಆಫ್ ಕಂಪನಿಯ ವಾರ್ಷಿಕೋತ್ಸವವಾಗಿ ದ್ವಾರಕೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.

ಹೊಸ ಕೃತಿಗಳ ಬಿಡುಗಡೆ:

ವಿದ್ವಾನ್ ಗ.ನಾ. ಭಟ್ ಅವರ ಸತೀ ಸಾವಿತ್ರಿ, ಕೃಷ್ಣಮೂರ್ತಿ ಕೆಮ್ಮಾರವರ ಪುರಾಣ ರಸ ಪ್ರಶ್ನಾವಲೀ, ಮಿತ್ತೂರು ಪುರೋಹಿತ ಶ್ರೀನಿವಾಸ ಭಟ್ಟ ಪರಿಷ್ಕರಣೆ ಮತ್ತು ಪರಿವರ್ಧನೆ ಮಾಡಿದ ವೇದ ವಸಂತ ಮತ್ತು ವೇದ ಮಾಧವ ಎಂಬ ಕೃತಿಗಳು ಲೋಕಾರ್ಪಣೆಗೊಂಡಿತು.

ಸನ್ಮಾನ, ಪ್ರತಿಭಾ ಪುರಸ್ಕಾರ

ಸಾವಯವ ಕೃಷಿ ಕ್ಷೇತ್ರದ ಸಾಧಕ ಸುಬ್ರಹ್ಮಣ್ಯ ಭಟ್ಟ ನೆಕ್ಕರೆಕಳೆಯ, ಭಾರತೀಯ ಸೇನೆ, ಕೃಷಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ.ಗೋಪಾಲಕೃಷ್ಣ ಕಾಂಚೋಡು, ಯಕ್ಷಗಾನ ಹಿಮ್ಮೇಳದ ಪದ್ಯಾಣ ಶಂಕರನಾರಾಯಣ ಭಟ್ಟ, ವೈಜ್ಞಾನಿಕ ಸಂಶೋಧನಾ ಕ್ಷೇತ್ರದ ಸ್ವಸ್ತಿಕ್ ಭಟ್ ಮುರ್ಗಜೆ, ಸಾಮಾಜಿಕ ಜಾಲತಾಣ ಹಾಗೂ ಆಹಾರೋದ್ಯಮದ ಸುದರ್ಶನ ಭಟ್ಟ ಬೆದ್ರಡಿ ಅವರನ್ನು ಸನ್ಮಾನಿಸಲಾಯಿತು. ದ್ವಾರಕ ಕಲಾ ಶಾಲೆಯ ಮೂಲಕ ಕೀ ಬೋರ್ಡ್, ಚೆಂಡೆ, ಮದ್ದಳೆ ತರಬೇತಿ ಪಡೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ರಾಮಾಯಣ, ಮಹಾಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ದುರ್ಗಾ ಗಣೇಶ್ ಪ್ರಾರ್ಥಿಸಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ್ ಕುಂಬ್ಳೆ ಸ್ವಾಗತಿಸಿದರು. ಅಮೃತ ಕೃಷ್ಣಾ ವಂದಿಸಿದರು. ನವೀನಕೃಷ್ಣಾ ಉಪ್ಪಿನಂಗಡಿ ಹಾಗೂ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬಂದಿಗಳು ಸಹಕರಿಸಿದರು.

ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿ:

ಸಭಾ ಕಾರ್ಯಕ್ರಮದ ಬಳಿಕ ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಗೋಪಾಲಕೃಷ್ಣ ಕಾಂಚೋಡು ಕೃಷಿಯಲ್ಲಿ ಅಡಿಕೆಗೆ ಪರ್ಯಾಯ, ವಿಶ್ವೇಶ್ವರ ಭಟ್ ಬಂಗಾರಡ್ಕ ಅವರು ರಿಯಲ್ ಎಸ್ಟೇಟ್ ಮತ್ತು ಆರ್ಥಿಕತೆ ಹಾಗೂ ಸುಬ್ರಹ್ಮಣ್ಯ ಪ್ರಸಾದ ಭಟ್ಟ ನೆಕ್ಕರಕಳೆಯ ಅವರು ದೇಶೀ ಗೋವು ಮತ್ತು ಗನ್ಯೋತ್ಪನ್ನಗಳ ಕುರಿತು ವಿಷಯ ಮಂಡಿಸಿದರು. ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ:

ಅಪರಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಬು ಕಾಟುಕುಕ್ಕೆ ಮತ್ತು ದ್ವಾರಕಾ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕೀ-ಬೋರ್ಡ್ ವಾದನ, ಗಣರಾಜ ಕುಂಬ್ಳೆ ನಿರ್ದೇಶನದಲ್ಲಿ ಚೂಡಾಮಣಿ ಯಕ್ಷಗಾನ ತಾಳಮದ್ದಳೆ, ಸಂಜೆ ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾನಭೂಷಣ ವಿದ್ವಾನ್ ವೆಂಕಟಕೃಷ್ಣ ಭಟ್ ಗುಂಡ್ಯಡ್ಕ ಮತ್ತು ಬಳಗದವರಿಂದ `ಭಾವ ಗಾನ ಲಹರಿ’ ಹಾಗೂ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ದೀಪಕ್ ಕುಮಾರ್ ಮತ್ತು ಶಿಷ್ಯರಿಂದ ಮಧುರಾಕೃತಿ – ಶ್ರೀಕೃಷ್ಣ ಲೀಲೆಗಳು ನೃತ್ಯರೂಪಕ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಕಟ್ ಕನ್ವರ್ಶನ್ ಮತ್ತು ಅನಧಿಕೃತ ಕಟ್ಟಡಗಳಿಗೆ ಬಿ ಖಾತಾ ನೀಡಲು ಸರಕಾರದ ಆದೇಶ! ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಟ್‌ಕನ್ವರ್ಶನ್ ಮತ್ತು ಅನಧಿಕೃತವಾಗಿ ನಿರ್ಮಾಣ ಮಾಡಿರುವ…

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ