ಬಂಟ್ವಾಳ:ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ 10ನೇ ಮೈಲ್ ಕಲ್ಲಿನ ಬಳಿ ನೇತ್ರಾವತಿ ನದಿಯ ದಡದಲ್ಲಿ ಅನೇಕ ಆಧಾರ್ ಕಾರ್ಡ್ಗಳು ಪತ್ತೆಯಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ಸಂಜೆ ನದಿತೀರದಲ್ಲಿ ನಡೆದಾಡುತ್ತಿದ್ದ ವ್ಯಕ್ತಿಯೊಬ್ಬರು ನೀರಿನ ಮೇಲೆ ತೇಲುತ್ತಿದ್ದ ಹಲವಾರು ಆಧಾರ್ ಕಾರ್ಡ್ಗಳನ್ನು ಗಮನಿಸಿ ತಕ್ಷಣ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದರು.
ಪತ್ತೆಯಾದ ಕಾರ್ಡ್ಗಳಲ್ಲಿ ಪುದು ಗ್ರಾಮದ ನಿವಾಸಿಗಳ ವಿಳಾಸಗಳು ಇರುವುದಾಗಿ ತಿಳಿದುಬಂದಿದೆ. ಅಧಿಕೃತ ಗುರುತಿನ ಚೀಟಿಗಳು ನದಿಗೆ ಹೇಗೆ ತಲುಪಿದವು ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರಕಾರ, ಹಲವರು ಆಧಾರ್ ತಿದ್ದುಪಡಿ ಮತ್ತು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ಪರಿಷ್ಕೃತ ಕಾರ್ಡ್ಗಳು ಅಂಚೆ ಮೂಲಕ ಬರಬೇಕಾಗಿತ್ತು. ಆದರೆ ವಿಳಂಬವಾದ ಕಾರಣ ಕೆಲವರು ತುರ್ತು ಅಗತ್ಯಕ್ಕಾಗಿ ಸೈಬರ್ ಕೇಂದ್ರಗಳಲ್ಲಿ ಪ್ರತಿ ಪಡೆದಿದ್ದರು. ಈ ನಡುವೆ ಬಂದ ಮೂಲ ಕಾರ್ಡ್ಗಳು ಫಲಾನುಭವಿಗಳಿಗೆ ತಲುಪದೆ ಎಸೆಯಲ್ಪಟ್ಟಿರುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತವಾಗಿದೆ.
ಈ ಘಟನೆಯ ಹಿನ್ನೆಲೆ ಕುರಿತು ಸಮಗ್ರ ತನಿಖೆ ನಡೆಸಿ, ದಾಖಲೆಗಳ ಸುರಕ್ಷತೆ ಹಾಗೂ ವಿತರಣೆ ಪ್ರಕ್ರಿಯೆಯಲ್ಲಿ ಲೋಪಗಳಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.






















