ಸುಬ್ರಹ್ಮಣ್ಯ: ಮಾಜಿ ಪ್ರಧಾನಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯರಾದ ಎಚ್.ಡಿ.ದೇವೇಗೌಡ ಅವರು ಮಾರ್ಚ್ 2ರಂದು ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ–ಪುನಸ್ಕಾರಗಳನ್ನು ನೆರವೇರಿಸಿದರು.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ ದೇವೇಗೌಡರು ಮೊದಲು ಸಂಕಲ್ಪ ನೆರವೇರಿಸಿ, ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷವಾದ ‘ಆಶ್ಲೇಷಾ ಬಲಿ’ ಸೇವೆಯನ್ನು ಸಮರ್ಪಿಸಿದರು. ಬಳಿಕ ದೇವರ ದರ್ಶನ ಪಡೆದು, ದೇವಸ್ಥಾನದ ಹೊರಾಂಗಣದಲ್ಲಿ ಭಕ್ತಿಪೂರ್ವಕವಾಗಿ ‘ತುಲಾಭಾರ ಸೇವೆ’ಯನ್ನೂ ನೆರವೇರಿಸಿದರು.
ಪೂಜಾ ಕೈಂಕರ್ಯಗಳ ನಂತರ ದೇವಸ್ಥಾನದ ಅರ್ಚಕರಾದ ರಮೇಶ್ ನೂರಿತ್ತಾಯ ಅವರು ದೇವೇಗೌಡರಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿ ಮಹಾಪ್ರಸಾದವನ್ನು ನೀಡಿದರು. ಆನಂತರ ಅವರು ಸನ್ನಿಧಿಯಲ್ಲಿರುವ ಹೊಸಳಿಗಮ್ಮ ದೇವಿಯ ದರ್ಶನ ಪಡೆದು, ಶ್ರೀ ದೇವರ ಪ್ರಸಾದ ಭೋಜನವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಜೊತೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ರಾಜ್ಯ ವಕ್ತಾರ ಎಂ.ಬಿ. ಸದಾಶಿವ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಮುಖಂಡರಾದ ದಯಾಕರ ಆಳ್ವ, ಸಂತೋಷ್ ಜಾಕೆ, ಸಯ್ಯದ್ ಮೀರಾ ಸಾಹೇಬ್, ಕೇನ್ಯ ರವೀಂದ್ರನಾಥ ಶೆಟ್ಟಿ,ಎಇಒ ಎಸ್.ಜೆ.ವೈ. ರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಹಾ, ಶಶಿರಾಜ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.




















