ಪುತ್ತೂರು: ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ತಿರಸ್ಕೃತಗೊಂಡ 94ಸಿ ಮತ್ತು 94ಸಿಸಿ ಕಡತ ಮರು ಪರಿಶೀಲಿಸಿ ಅರ್ಹರಿಗೆ ಹಕ್ಕು ಪತ್ರ ನೀಡುವಂತೆ ಶಾಸಕ ಅಶೋಕ್ ರೈ ಅವರು ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಬುಧವಾರ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು, ಪುತ್ತೂರು ತಾಲೂಕಿನಲ್ಲಿ 94ಸಿ ಮತ್ತು 94ಸಿಸಿ ಯ ಸುಮಾರು 8420 ಕಡತ ಸರಿಯಾಗಿ ಪರಿಶೀಲನೆ ಮಾಡದೆ ಈ ಹಿಂದೆ ಕಡತವನ್ನು ರದ್ದು ಮಾಡಿರುತ್ತಾರೆ. ಪ್ರಸ್ತುತ ತಿರಸ್ಕೃತಗೊಂಡ ಅರ್ಜಿಗಳಲ್ಲಿ ಫಲಾನುಭವಿಗಳು ಮನೆ ನಿರ್ಮಾಣಗೊಂಡು ಎಲ್ಲಾ ದಾಖಲೆಗಳೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ಫಲಾನುಭವಿಗಳಿಗೆ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳಿಂದ ವಂಚಿರತಾಗಿರುತ್ತಾರೆ. ಇದರಿಂದಾಗಿ ಫಲಾನುಭವಿಗಳಿಗೆ ತುಂಬಾ ತೊಂದರೆಯಾಗಿರುತ್ತದೆ. ಆದ್ದುದರಿಂದ ತಿರಸ್ಕೃತಗೊಂಡ ಅರ್ಜಿಗಳನ್ನು ಮರುತನಿಖೆ ಮಾಡಿ ವಿಲೇ ಮಾಡಲು ಇಲಾಖೆಗೆ ಸೂಕ್ತ ನಿರ್ದೇಶನ ನೀಡಲು ಶಿಫಾರಸ್ಸು ಮಾಡುವಂತೆ ಶಾಸಕರು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ಸಚಿವರು ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಮನೆ ಇದ್ದರೂ ಯಾಕೆ ತಿರಸ್ಕಾರ?
ಸುಮಾರು 8420 94 ಸಿ ಮತ್ತು 94 ಸಿ ಸಿ ಅರ್ಜಿಗಳನ್ನು ಈ ಹಿಂದೆ ತಿರಸ್ಕೃತಗೊಳಿಸಿದ್ದಾರೆ . ಅರ್ಜಿ ಹಾಕಿದ್ದ ಫಲಾನುಭವಿಗಳಿಗೆ ಮನೆ ಇದ್ದರೂ ಯಾಕೆ ತಿರಸ್ಕಾರ ಮಾಡಿದ್ದಾರೆ? ಬಡವರು ಕೇಳಿದ್ದು ಅವರು ಮನೆ ಕಟ್ಟಿ ವಾಸ್ತವ್ಯವಿರುವ ಮನೆಯ ಅಡಿಸ್ಥಳವನ್ನು. ಅದನ್ನು ಯಾಕೆ ಕೊಡಲು ಸಾಧ್ಯವಾಗಿಲ್ಲ? ಎಲ್ಲಾ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡಿಸುವ ಕೆಲಸ ಆಗಬೇಕಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.