ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗಂಡನ ಮನೆಯಲ್ಲೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗುಮ್ಮನಹಳ್ಳಿಯಲ್ಲಿ ನಡೆದಿದೆ.
ರೂಪ ಮೃತ ಮಹಿಳೆ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಪರಸ್ಪರ ಎರಡು ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದ ರೂಪ ಮತ್ತು ಸುರೇಶ್ ಆರು ತಿಂಗಳವರೆಗೂ ಸುಖ ಸಂಸಾರ ಮಾಡಿದ್ದಾರೆ. ಆದರೆ ಆರು ತಿಂಗಳು ಕಳೆಯುತ್ತಿದ್ದಂತೆ ನನಗೆ ಸಾಲಗಾರರ ಕಾಟ ಜಾಸ್ತಿಯಾಗುತ್ತಿದೆ. ಮದುವೆಗೆ ಸಾಲ ಮಾಡಿದ್ದು, ಬೇರೆ ಹುಡುಗಿಯನ್ನ ಮದುವೆಯಾಗಿದ್ದರೆ ಹೆಚ್ಚಿನ ವರದಕ್ಷಿಣೆ ಸಿಗುತ್ತಿತ್ತು. ಸಾಲ ತೀರುತಿತ್ತು ಅಂತ ಗಂಡ ಮತ್ತು ಅತ್ತೆ- ಮಾವ ಕಿರುಕುಳ ನೀಡಲು ಆರಂಭಿಸಿದ್ರಂತೆ.
ಅಲ್ಲದೆ ಪದೇ ಪದೇ ತವರು ಮನೆಗೆ ಹೋಗಿ ಹಣ ತೆಗೆದುಕೊಂಡು ಬಾ ಅಂತ ತವರು ಮನೆಗೆ ಕಳಿಸುತ್ತಿದ್ದ ಕಾರಣ ರೂಪ ಬೇಸತ್ತಿದ್ದಾಳೆ. ಹೀಗಾಗಿ ಗಂಡನ ಮನೆಯವರ ಕಿರುಕುಳ ತಾಳಲಾರದೆ ಬೇಸತ್ತ ತುಂಬು ಗರ್ಭಿಣಿ ರೂಪ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೆ ಶರಣಾಗುವ ಮುನ್ನ ಬುಕ್ ಒಂದರಲ್ಲಿ ಪ್ರೀತಿಯ ಅಣ್ಣನಿಗೆ ತಂಗಿ ಮಾಡುವ ನಮಸ್ಕಾರಗಳು. ಅಣ್ಣ ನಾನು ನಿನ್ನ ಮಾತು ಕೇಳದೆ ತಪ್ಪು ಮಾಡಿ ಈ ಮದುವೆ ಆದೆ. ಆದರೆ ನಾನು ಮದುವೆ ಆಗಿ 2 ವರ್ಷದಿಂದ ಒಂದು ದಿನವು ನನಗೆ ಇಲ್ಲಿ ನೆಮ್ಮದಿಯಿಲ್ಲ. ನನ್ನ ಜೀವನ ನರಕವಾಗಿದೆ. ಇನ್ನೂ ನನಗೆ ಬದುಕಲು ಇಷ್ಟವಿಲ್ಲ. ಸಾಧ್ಯವಾದರೆ ಕ್ಷಮಿಸು. ಮುಂದಿನ ಜನ್ಮವಿದ್ದರೆ ನಿನ್ನ ಋಣ ತೀರಿಸುತ್ತೇನೆ. ಅಪ್ಪ, ಅಮ್ಮ, ಅಜ್ಜಿಗೆ ನನ್ನ ಕೊನೆಯ ನಮನಗಳು. ನನ್ನ ಸಾವಿಗೆ ದಯವಿಟ್ಟು ನ್ಯಾಯ ಕೊಡಿಸು. ನನ್ನ ಸಾವಿಗೆ ಅತ್ತೆ, ಮಾವ, ನನ್ನ ಗಂಡ ಮತ್ತು ಗಂಡನ ಮನೆಯವರೇ ಕಾರಣ ಎಂದು ಡೆತ್ ನೋಟ್ ಬರೆದು ಅಣ್ಣನಿಗೆ ವಾಟ್ಸ್ ಆಪ್ ಮೂಲಕ ಫೋಟೋ ಕಳಿಸಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೃತ ರೂಪ ಗಂಡ ಸುರೇಶನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ
























