ಪುತ್ತೂರು: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತಿಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.2 ರಿಂದ ಪ್ರಾರಂಭಗೊಂಡು ಮಾ.5 ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಮಾ. 2ರಂದು ಬೆಳಿಗ್ಗೆ ಗಣಪತಿ ಹೋಮ, ಗುರುಪೂಜೆ, ತೋರಣ ಮುಹೂರ್ತ, ನಾಗದೇವರ ಸಾನಿಧ್ಯದಲ್ಲಿ ಗಣಹೋಮ, ನವಕ ಕಲಶಾಭಿಷೇಕ, ಆಶ್ಲೇಷ ಬಲಿ ಸೇವೆ ನಡೆದು ಮಂಗಳಾರತಿ ಮತ್ತು ಧೂಮವತಿ ಸಾನಿಧ್ಯ ಹಾಗೂ ಎಲ್ಲಾ ಪರಿವಾರ ಸಾನಿಧ್ಯದಲ್ಲಿ ಶುದ್ಧಿ ನವಕ ಕಲಶಾಭಿಷೇಕ ನಡೆಯಿತು. ನಂತರ ಧ್ವಜಾರೋಹಣ ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು.
ಬಳಿಕ ವಿಶೇಷವಾಗಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ‘ಅಮ್ಮನ ಮಡಿಲ ಪ್ರಸಾದ’ ಎಂಬ ಶ್ರೀಮಾತೆ ದೇಯಿ ಬೈದ್ಯೆತಿ ಅಮ್ಮನವರ ಮಹಾ ಸಂಕಲ್ಪದಂತೆ ನಾಡಿನ ಎಲ್ಲಾ ಮಾತೆಯರಿಗೆ ಅಮ್ಮನ ಪ್ರೀತಿ ತುಂಬಿದ ಆಶೀರ್ವಾದ ರೂಪದಲ್ಲಿ ಮಡಿಲು ತುಂಬಿಸುವ ಕಾರ್ಯಕ್ರಮ ಸತ್ಯಧರ್ಮ ಚಾವಡಿಯಲ್ಲಿ ನಡೆಯಿತು. ನಾಡಿನ ಮೂಲೆಮೂಲೆಗಳಿಂದ 25000ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಾತೆಯರು ಆಗಮಿಸಿ ಅಮ್ಮನ ಮಡಿಲ ಪ್ರಸಾದ ಸ್ವೀಕರಿಸಿ ಪಾವನರಾದರು.
ಗೆಜ್ಜೆಗಿರಿ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನ ಕನ್ಯಾಡಿ ಪೀಠಾಧಿಪತಿಗಳು, 1008 ಮಹಾ ಮಂಡಲೇಶ್ವರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಸಂಜೆ ಧೂಮಾವತಿ ಬಲಿ ಉತ್ಸವ, ಧರ್ಮಚಾವಡಿಯಲ್ಲಿ ಭಗವತೀ ಸೇವೆ ಮಹಾಪೂಜೆ ನಡೆಯಿತು. ಊರು ಪರವೂರುಗಳಿಂದ ಸಹಸ್ರ ಸಂಖ್ಯೆಯಲ್ಲಿ ಜನಸಾಗರ ಗೆಜ್ಜೆಗಿರಿಯತ್ತ ಹರಿದು ಬಂದು ಶ್ರೀ ಕೋಟಿ ಚೆನ್ನಯ, ದೇಯಿ ಬೈದ್ಯೆತಿಯ ಅನುಗ್ರಹಕ್ಕೆ ಪಾತ್ರವಾಯಿತು.