ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವರ ಉತ್ಸವ ಬಲಿ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಭಾನುವಾರ ರಾತ್ರಿ ನಡೆಯಿತು.
ಸುರೇಶ್ ನಕ್ಷತ್ರಿತ್ತಾಯರ ಉಪಸ್ಥಿತಿಯಲ್ಲಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರ ನೇತೃತ್ವದಲ್ಲಿ ವೈದಿಕ ವಿಧಿವಿಧಾನ ನಡೆಯಿತು.
ಭಾನುವಾರ ಬೆಳಿಗ್ಗೆಯಿಂದ ದೇವತಾ ಪ್ರಾರ್ಥನೆ, ಗಣಹೋಮ, ನಾಗತಂಬಿಲ, ಆಶ್ಲೇಷ ಬಲಿ, ದೈವ ತಂಬಿಲ, ಸತ್ಯನಾರಾಯಣ ಪೂಜೆ, ಶ್ರೀ ದೇವರಿಗೆ ಕಲಶಪೂಜೆ ಮತ್ತು ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ಧೂಮಾವತಿ, ಗುಳಿಗ ದೈವಗಳ ಭಂಡಾರ ತೆಗೆದು ಶ್ರೀ ದೇವರ ಉತ್ಸವ ಬಲಿ ಆರಂಭಗೊಂಡಿತು. ಪಲ್ಲಕ್ಕಿ ಉತ್ಸವದ ಬಳಿಕ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.
ಉತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು, ಊರ – ಪರವೂರ ಭಕ್ತರು ಉಪಸ್ಥಿತರಿದ್ದರು.
ರಾತ್ರಿ ಧೂಮಾವತಿ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.