ಪುತ್ತೂರು: ಶಾಂತಿ, ನೆಮ್ಮದಿಯನ್ನು ಜಗತ್ತಿನ ಜನ ಬಯಸ್ತಾ ಇದ್ದಾರೆ. ಅದು ಸಿಗುವುದು ಭಾರತದಲ್ಲಿ ಮಾತ್ರ ಎನ್ನುವುದು ಅವರಿಗೂ ಗೊತ್ತು. ಅದಕ್ಕಾಗಿ ಭಾರತದತ್ತ ನೋಡುತ್ತಿದ್ದಾರೆ. ಭಾರತ ನೆಮ್ಮದಿಯ ತಾಣವಾಗಲು ಕಾರಣ ಈ ನೆಲದ ಮೂಲನಂಬಿಕೆ ಎಂದು ಹಿಂದೂ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು.
ಆರ್ಯಾಪು ಗ್ರಾಮದ ದಂಬೆತ್ತಿಮಾರ್ ಶ್ರೀ ಕೊರಗತನಿಯ ಕ್ಷೇತ್ರದ ವಾರ್ಷಿಕ ನೇಮೋತ್ಸವದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದರು.

ಈ ನೆಲದ ಮೂಲನಂಬಿಕೆಗಳು ವೈಜ್ಞಾನಿಕವಾಗಿಯೂ ಸತ್ಯ. ವೈಜ್ಞಾನಿಕತೆಯ ಸವಾಲುಗಳಿಗೆ ಉತ್ತರ ನೀಡಿ, ಇದು ಮೂಢನಂಬಿಕೆ ಅಲ್ಲ ಎನ್ನುವುದನ್ನು ಸಾಬೀತು ಪಡಿಸಿವೆ. ಹಿಂದೂ ಧರ್ಮಕ್ಕೆ ವೈಜ್ಞಾನಿಕತೆಯೇ ಮೂಲ. ಆದ್ದರಿಂದ ಇದು ಜ್ಞಾನದ ಸಾಗರ. ದಂಬೆತ್ತಿಮಾರಿನಂತಹ ಕ್ಷೇತ್ರಗಳಲ್ಲಿ ಜ್ಞಾನ ಸಾಗರದ ಪ್ರತಿಯೊಂದು ಹನಿಯನ್ನು ಕಾಣಲು ಸಾಧ್ಯ ಎಂದರು.

ಕಾಂತಾರ ಸಿನಿಮಾ ನೋಡಿದ ಬಳಿಕ ಮರಳಿ ಊರಿಗೆ ಬಂದು ದೈವ ಸೇವೆಯಲ್ಲಿ ತೊಡಗಿಸಿಕೊಂಡವರಿದ್ದಾರೆ. ಇದು ಈ ಮಣ್ಣಿನ ಶಕ್ತಿ. ತುಳುನಾಡಿನ ವೈವಿಧ್ಯತೆ, ಆಚಾರ – ವಿಚಾರ, ಸಂಸ್ಕೃತಿಯನ್ನು ದೇಶ ಮಾತ್ರವಲ್ಲ ಜಗತ್ತಿನ ಎಲ್ಲಿಯೂ ನೋಡಲು ಸಾಧ್ಯವಿಲ್ಲ. ದಂಬೆತ್ತಿಮಾರ್ ಕ್ಷೇತ್ರದವರ ಸಮರ್ಪಣಾ ಭಾವ, ಭಕ್ತಿ, ನಂಬಿಕೆಯಿಂದಾಗಿ ಕ್ಷೇತ್ರ ನಿತ್ಯನಿರಂತರವಾಗಿ ಬೆಳಗ್ತಾ ಇದೆ. ಹಾಗಾಗಿ ಇಲ್ಲಿಗೆ ಆಗಮಿಸುವ ಭಕ್ತರಿಗೂ ಸದಭಿಪ್ರಾಯ ಮೂಡುತ್ತಿದೆ. ಊರಿನ ಮಾರಿಯನ್ನು ನಿವಾರಿಸುವ ಶಕ್ತಿಯೂ ಈ ಕ್ಷೇತ್ರಕ್ಕಿದೆ ಎಂದ ಅವರು, ಯುವಪೀಳಿಗೆಯನ್ನು ಧಾರ್ಮಿಕತೆಯ ಜೊತೆಗೆ ಕರೆದೊಯ್ಯುವ ಕೆಲಸ ಆಗಬೇಕಿದೆ ಎಂದರು.
ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗೀತಾ ಮಾತನಾಡಿ, ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವುದು ನನ್ನ ಪುಣ್ಯ ಎಂದೇ ಭಾವಿಸುತ್ತೇನೆ. ಈ ಕ್ಷೇತ್ರ ಇನ್ನಷ್ಟು ಬೆಳಗಬೇಕು ಎಂದು ಹಾರೈಸಿದರು.
ಹಿಂದೂ ಜಾಗರಣಾ ವೇದಿಕೆಯ ಅಜಿತ್ ರೈ ಹೊಸಮನೆ ಮಾತನಾಡಿ, ಕಲಿಯುಗದಲ್ಲಿ ಕಷ್ಟ ಬಂದಾಗ ಕೈ ಹಿಡಿಯುವ ದೈವ ಅಜ್ಜ. ಈ ಕ್ಷೇತ್ರ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.
ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಕೈಕಾರ ಮಾತನಾಡಿ, ಆರ್ಯಾಪು ಗ್ರಾಮ ದೇವರ ನಾಡು. ಇಲ್ಲಿ ಹೆಸರುವಾಸಿಯಾದ, ಕಾರಣೀಕ ದೇವಸ್ಥಾನ, ದೈವಸ್ಥಾನಗಳಿವೆ ಎಂದ ಅವರು, ಕ್ಷೇತ್ರದ ಅಭಿವೃದ್ಧಿಗೆ ಸದಾ ಜೊತೆಗಿರಲಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರತ್ನಶ್ರೀ ಕ್ಯಾಂಟೀನ್ ಮಾಲಕ ಜಯಂತ್ ಶೆಟ್ಟಿ ಕಂಬಳತ್ತಡ್ಡ ಮಾತನಾಡಿ, ನಾನು ಈ ಕ್ಷೇತ್ರದ ಭಕ್ತ. ತಾನು ವ್ಯವಹಾರಿಕವಾಗಿಯೂ ಮುಂದೆ ಬಂದಿರುವುದು ಇದೇ ಅಜ್ಜನ ಕಾರಣದಿಂದ. ಯಾವುದೇ ಅಪೇಕ್ಷೆ ಇಲ್ಲದ ಯೋಗೀಶ್ ಮತ್ತು ಅವರ ಮನೆಯವರ ಸಮರ್ಪಣಾ ಭಾವದ ಸೇವೆಯಿಂದ ಈ ಕ್ಷೇತ್ರ ಹೆಚ್ಚು ಜನರನ್ನು ತಲುಪಿದೆ. ತಾನಾಯಿತು ತನ್ನ ಕೆಲಸವಾಯಿತು ಎಂಬಂತಿರುವ ಯೋಗೀಶ್ ಅವರು ಸಮರ್ಪಣಾ ಭಾವದ ಸೇವೆಯಿಂದ ಈ ಕ್ಷೇತ್ರ ಬೆಳಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೈವನರ್ತಕ ದಾಮೋದರ ಎಂ. ಮಾಲಡ್ಕ ಬೆಟ್ಟಂಪಾಡಿ, ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದಂತಹ ದಿನದಲ್ಲಿ ತಾನಿಲ್ಲಿಗೆ ಬಂದಿದ್ದೆ. ದೈವ ಸಂಕಲ್ಪವೋ ಎಂಬಂತೆ ತಾನು ಮಾಡಿದ ಪ್ರಾರ್ಥನೆಯಿಂದ ಒಂದೊಂದಾಗಿ ಸರಿಯಾಗುತ್ತಾ ಬಂದಿತು. ನಂತರ ಪ್ರಶ್ನಾ ಚಿಂತನೆ ನಡೆಸಿದಾಗ ಮೂವರು ದೈವಗಳ ಸಾನಿಧ್ಯ ಇಲ್ಲಿರುವುದು ತಿಳಿದುಬಂದಿತು. ಅಲ್ಲಿಂದ ನಡೆದ ಸೇವಾಕಾರ್ಯ ಇವತ್ತು ಈ ಹಂತಕ್ಕೆ ಬಂದು ನಿಂತಿದೆ. ಸಂಸಾರದಲ್ಲಿ ಅನ್ಯೋನ್ಯತೆ ಇದೆ. ಈ ಕ್ಷೇತ್ರಕ್ಕೆ ಎರಡು ಮನಸ್ಸಿಟ್ಟು ಬರಬೇಡಿ. ಒಂದೇ ಮನಸ್ಸಿನಲ್ಲಿ ಬಂದವರಿಗೆ ಯಶ ಸಿಕ್ಕ ಉದಾಹರಣೆ ಇದೆ ಎಂದರು.
ಸನ್ಮಾನ:
ಇದೇ ಸಂದರ್ಭ ವಾಸ್ತುಶಿಲ್ಪಿ ಶೇಷಪ್ಪ ಗೌಡ ಬೆಟ್ಟಂಪಾಡಿ, ದೈವ ನರ್ತಕ ನೇಮು ಕಣಿಯೂರು ಮಾಡಾವು, ಜಿನ್ನಪ್ಪ ಮಡಿವಾಳ ಇಂತಿಕಲ್ಲು, ರವಿ ಮೇಗಿನಪಂಜ, ನಂದಿನಿ ಕೋಟ್ಲಾರ್, ಲಿಖಿತಾ ದಂಬೆತ್ತಿಮಾರು, ಪುತ್ತೂರು ಸರಕಾರಿ ಆಸ್ಪತ್ರೆಯ ಪುರಂದರ, ಚೇತನ್ ಕನಕಗಿರಿ ಸರ್ವೆ, ಮುದರ ದಂಬೆತ್ತಿಮಾರು ಅವರನ್ನು ಸನ್ಮಾನಿಸಲಾಯಿತು. ಕ್ಯಾಂಪ್ಕೋ ಬ್ರಾಂಚ್ ಮ್ಯಾನೇಜರ್ ಆಗಿ ಜೈಪುರಕ್ಕೆ ವರ್ಗಾವಣೆಗೊಂಡ ತಾರಾನಾಥ್ ಬಂಗೇರ ಮೇರ್ಲ ಅವರನ್ನು ಅಭಿನಂದಿಸಲಾಯಿತು. ವೀಕ್ಷಾ ಸನ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭ ಕರಸೇವಕರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಪ್ರಣವಿ, ದೀಕ್ಷಾ ಪ್ರಾರ್ಥಿಸಿದರು. ಮನೋಜ್ ರೈ ಮೇರ್ಲ ಸ್ವಾಗತಿಸಿ, ತಾರಾನಾಥ ಸುವರ್ಣ ಮೇರ್ಲ ವಂದಿಸಿದರು. ಸಂತೋಷ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
























