ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ನೃತ್ಯ ನಿರ್ದೇಶಕ ವಿದ್ವಾನ್ ಬಿ. ದೀಪಕ್ ಕುಮಾರ್ ಅವರು ಭರತನಾಟ್ಯ ರಂಗಪ್ರವೇಶ ಮಾಡಿ 30 ವರ್ಷ ಆದ ಹಿನ್ನೆಲೆಯಲ್ಲಿ ಜ. 11ರಂದು ಸಂಜೆ 5ಕ್ಕೆ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನೃತ್ಯೋತ್ಕೃಮಣ ಆಯೋಜಿಸಲಾಗಿದೆ ಎಂದು ಅಕಾಡೆಮಿಯ ನೃತ್ಯ ಗುರು ವಿದುಷಿ ಪ್ರೀತಿಕಲಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1996ರ ಜನವರಿ 12ರಂದು ಮಂಗಳೂರಿನ ಟೌನ್ ಹಾಲ್ನಲ್ಲಿ ರಂಗಪ್ರವೇಶ ಕಾರ್ಯಕ್ರಮ ನಡೆದಿತ್ತು. ಅದನ್ನು ಮರುಸೃಷ್ಟಿಸುವ ಕಾರ್ಯಕ್ರಮವೇ ನೃತ್ಯೋತ್ಕೃಮಣ.
ಆ ಸಂದರ್ಭ ರಂಗಪ್ರವೇಶಕ್ಕೆ ಹಿನ್ನೆಲೆ ನುಡಿಸಿದವರ ಪೈಕಿ ಮೃದಂಗ ವಾದನ ಮಾಡಿದ ಕರ್ನಾಟಕ ಕಲಾಶ್ರೀ ಜಿ ಗುರುಮೂರ್ತಿ ಬೆಂಗಳೂರು ಅವರೇ ಮೃದಂಗ ವಾದನದಲ್ಲಿ ಸಹಕರಿಸಲಿದ್ದಾರೆ. ನೃತ್ಯದ ಅಮೂಲ್ಯ ಕ್ಷಣಗಳನ್ನು ಸೆರಹಿಡಿದಿದ್ದ ಯಜ್ಞ ಮಂಗಳೂರು ಅವರು ನೃತ್ಯದ ಕ್ಷಣಗಳನ್ನು ಮತ್ತೊಮ್ಮೆ ಕ್ಯಾಮೆರಾದಲ್ಲಿ ಸೆರೆಹಿಡಿಯಲಿದ್ದಾರೆ. ನೃತ್ಯ ಗುರುಗಳಾದ ಬೆಂಗಳೂರು ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ನೃತ್ಯ ಕಲಾವಿದೆ ಡಾ. ವೀಣಾ ಮೂರ್ತಿ ವಿಜಯ್ ಬೆಂಗಳೂರು ಮತ್ತು ಮಂಗಳೂರು ನಾಟ್ಯನಿಕೇತನ ಕೊಲ್ಯ ಇದರ ನೃತ್ಯ ಕಲಾವಿದೆ ಗುರು ವಿದುಷಿ ರಾಜಶ್ರೀ ಉಳ್ಳಾಲ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸದಸ್ಯೆ ದಂತ ವೈದ್ಯೆ ಡಾ. ಆಶಾ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಇದೇ ಸಂದರ್ಭ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಲೋಕೇಶ್ ಬನ್ನೂರು ಅವರನ್ನು ಗೌರವಿಸಲಾಗುವುದು. ಹಿಮ್ಮೇಳದಲ್ಲಿ ನಟುವಾಂಗ ಮತ್ತು ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗಳದಲ್ಲಿ ವಿದ್ವಾನ್ ಜಿ ಗುರುಮೂರ್ತಿ ಬೆಂಗಳೂರು, ಮೃದಂಗದಲ್ಲಿ ಮೇಧಾ ಉಡುಪ ಮಂಗಳೂರು, ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ ಸಹಕರಿಸಲಿದ್ದಾರೆ ಎಂದು ಹೇಳಿದರು.
17ನೇ ವಯಸ್ಸಿನಲ್ಲಿ ರಂಗಪ್ರವೇಶ:
ವಿದ್ವಾನ್ ದೀಪಕ್ ಕುಮಾರ್ ಮಾತನಾಡಿ, ಭರತನಾಟ್ಯ ರಂಗ ಪ್ರವೇಶ ಮಾಡುವ ಸಂದರ್ಭ ತಾನು ಪಿಯುಸಿ ಓದುತ್ತಿದ್ದೆ. 17ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದ್ದೆ. ಇದೀಗ 30 ವರ್ಷಗಳ ಬಳಿಕ ಮತ್ತೊಮ್ಮೆ ಅದನ್ನು ಪ್ರಸ್ತುತಿ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.























