ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ಬೆಳ್ಳಿಚಡವು ಅಯ್ಯಪ್ಪ ಸ್ವಾಮಿ-ಶಾರದಾಂಭ ಭಜನಾ ಮಂದಿರ ಮತ್ತು ನಾಗಸಾನಿಧ್ಯ ಇದರ 3ನೇ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮ ಡಿ. 7 ಮತ್ತು 8ರಂದು ನಡೆಯಲಿದೆ ಎಂದು ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಜಯಾನಂದ ಕೋರಿಗದ್ದೆ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಈ ಕಾರ್ಯಕ್ರಮ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ ಹಾಗೂ ಕುಂಟಾರು ರವೀಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಡಿ. 7ರಂದು ಬೆಳಿಗ್ಗೆ 5 ಗಂಟೆಗೆ ದೀಪಾರಾಧನೆ ಮತ್ತು ಶರಣುಘೋಷದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ 6 ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. . ಸಂಜೆ 5 ಗಂಟೆಗೆ ಕುಣಿತ ಭಜನೆ, 6 ಗಂಟೆಗೆ ಶರಣುಘೋಷ ಬಳಿಕ 6.30ಕ್ಕೆ ಪಂಚಲಿಂಗೇಶ್ವರ ದೇವಳದಿಂದ ಶರಣುಘೋಷ ನೃತ್ಯಭಜಕರ ಕುಣಿತದೊಂದಿಗೆ ಭಜನಾ ಮಂದಿರದ ತನಕ ಉಲ್ಫೆ ಮೆರವಣಿಗೆ ನಡೆಯಲಿದೆ.
ಡಿ. 8ರಂದು ಬೆಳಿಗ್ಗೆ 5 ಗಂಟೆಗೆ ದೀಪಾರಾಧನೆ ಮತ್ತು ಶರಣುಘೋಷದ ಬಳಿಕ ನಾಗತಂಬಿಲ, ಭಜನಾ ಕಾರ್ಯಕ್ರಮ, 10 ಗಂಟೆಗೆ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ಗಂಟೆಗೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಾನಂದ ಕೋರಿಗದ್ದೆ ವಹಿಸಲಿದ್ದಾರೆ. ಅತಿಥಿಗಳಾಗಿ ಉದ್ಯಮಿ ಜನಾರ್ಧನ ಪೂಜಾರಿ ಪದಡ್ಕ, ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಯಂ ಭಾಗವಹಿಸಲಿದ್ದಾರೆ. ಸಂಜೆ ಶಿವಪಂಚಾಕ್ಷರಿ ಯಕ್ಷಗಾನ ಪ್ರತಿಷ್ಠಾನ ಈಶ್ವರಮಂಗಲದ ಮಕ್ಕಳಿಂದ ಸುದರ್ಶನೋಪಾಖ್ಯಾನ ಯಕ್ಷಗಾನ ನಡೆಯಲಿದೆ. ರಾತ್ರಿ ಮಹಾಪೂಜೆ ಅನ್ನಸಂತರ್ಪಣೆ ಬಳಿಕ ಶಬರಿಮಲೆ ಅಯ್ಯಪ್ಪ ಯಕ್ಷಗಾನ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಗೌರವ ಸಲಹೆಗಾರ ಡಾ.ಶ್ರೀಕುಮಾರ್, ಕಾರ್ಯದರ್ಶಿ ಅಣ್ಣಯ್ಯ ಗೌಡ ಉರಿಕ್ಯಾಡಿ, ಅಯ್ಯಪ್ಪ ಸೇವಾಸಮಿತಿ ಅಧ್ಯಕ್ಷ ಚಂದ್ರಶೇಖರ ಪೆರ್ನಾಜೆ, ಸದಸ್ಯರಾದ ಮೇನಾಲ ಪ್ರವೀಣ್ ರೈ ಹಾಗೂ ಬಾಲಕೃಷ್ಣ ಪಾಟಾಳಿ ಉಪಸ್ಥಿತರಿದ್ದರು.






















