ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನ.15ರಂದು ಆರಂಭಗೊಂಡ ಲಕ್ಷದೀಪೋತ್ಸವ, 19ರಂದು ಧರ್ಮಸ್ಥಳದ ಗೌರಿಮಾರು ಕಟ್ಟೆ ಉತ್ಸವದ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿ ಸಮಾಪನಗೊಂಡಿತು.
ಲಕ್ಷದೀಪೋತ್ಸವದ ಕೊನೆ ದಿನದಂದು ಅಮೃತವರ್ಷಿಣಿ ಸಭಾಂಗಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು.

ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುವಾಗ ಎಲ್ಲಾ ಸಂದೇಹಗಳ ಗುಂಡಿಗಳು ಮುಚ್ಚಿ ಹೋಗಿದ್ದನ್ನು ನಾನು ಕಂಡೆ. ಮುಖವಾಡ ಮತ್ತು ಮುಸುಕುಗಳೆಲ್ಲವೂ ಕಳಚಿ ಬಿದ್ದಿದ್ದನ್ನು ಕಂಡೆ. ಬುರುಡೆಗಳೆಲ್ಲವೂ ಬರಿದಾಗಿದ್ದನ್ನು ಕಂಡೆ. ಸುಳ್ಳು ಮಕಾಡೆ ಮಲಗಿದ್ದನ್ನು ಕಂಡೆ. ಸತ್ಯ ಗೆದ್ದಿದ್ದನ್ನು ಕೂಡ ಕಂಡೆ. ಗೆದ್ದದ್ದು ಮಂಜುನಾಥ ಮೂಡಿಸಿದ ಪ್ರಜ್ಞೆ. ಗೆದ್ದಿದ್ದು ವೀರೇಂದ್ರ ಹೆಗ್ಗಡೆಯವರ ಸ್ಥಿತಪ್ರಜ್ಞೆ. ನಾನಿದನ್ನು ವಿವರಿಸಬೇಕಿಲ್ಲ, ನಿಮಗೆಲ್ಲ ಅರ್ಥವಾಗಿರುತ್ತದೆ. ಸತ್ಯ ಸೂರ್ಯನ ಕಿರಣಗಳಷ್ಟು ಸುಸ್ಪಷ್ಟವಾಗಿವೆ. ಆಕಾಶ ನೀಲಿಯಾಗಿ, ಶುಭ್ರವಾಗಿದೆ. ಕಾರ್ಮೋಡಗಳೆಲ್ಲ ಚದುರಿ ಹೋಗಿವೆ ಎಂದರು.
ಹಿರಿಯ ಸಾಹಿತಿ, ಅಂಕಣಕಾರ ಪ್ರೊ. ಪ್ರೇಮಶೇಖರ, ಲೇಖಕಿ, ಗಮಕ ವ್ಯಾಖ್ಯಾತ್ರಿ ಶಾಂತಾ ನಾಗಮಂಗಲ, ಬೆಂಗಳೂರಿನ ಆರ್.ಎಂ.ಎಸ್. ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಆಡಳಿತಾಧಿಕಾರಿ ಡಾ. ಆರ್. ರಘು, ಸಾಹಿತಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ.ಬಿ.ಎಂ. ಶರಭೇಂದ್ರ ಸ್ವಾಮಿ, ಧಾರವಾಡ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯ, ಲಕ್ಷದೀಪೋತ್ಸವ ಪ್ರಯುಕ್ತ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಭಕ್ತಾದಿಗಳು, ಕಲಾಭಿಮಾನಿಗಳ ಮನರಂಜನೆಗಾಗಿ ವೈವಿಧ್ಯಮಯ ಸಾಂಸ್ಕೃತಿಕ ಯಕ್ಷಗಾನ, ಜಾದೂ ಮೊದಲಾದ ಕಾರ್ಯಕ್ರಮಗಳಿಂದ ಕಲಾಭಿಮಾನಿಗಳು ಮನರಂಜನೆಯ ರಸದೌತಣ ಅನುಭವಿಸಿದರು. 5 ದಿನಗಳ ಕಾಲ ಧರ್ಮಸ್ಥಳಕ್ಕೆ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನದ ಜತೆಗೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿ ಲಕ್ಷದೀಪೋತ್ಸವದ ಸಂಭ್ರಮಾಚರಣೆಯಲ್ಲಿ ಮಿಂದೆದ್ದರು.
ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾಗೋಷ್ಠಿಯ ನಾಗಸ್ವರವಾದನದೊಂದಿಗೆ ತ್ರಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶುಭ ನಾಂದಿಯಾಯ್ತು. ಬೆಂಗಳೂರಿನ ಕೌಶಿಕ್ ಐತಾಳ್ ಮತ್ತು ತಂಡದವರಿಂದ ಹಿಂದುಸ್ಥಾನಿ ಸಂಗೀತ ಹಾಗೂ ಭಜನ್ ಕಾರ್ಯಕ್ರಮ ಸಂಗೀತಪ್ರಿಯರ ಮನಸ್ಸಂತೋಷಪಡಿಸಿತು. ಹುಬ್ಬಳ್ಳಿಯ ಸುಜಯ್ ಶಾನಭಾಗ್ ನಿರ್ದೇಶನದಲ್ಲಿ ಪ್ರಸ್ತುತಿಗೊಂಡ ಸನಾತನಿ ನೃತ್ಯ ವೈಭವ ಕಲಾಭಿಮಾನಿಗಳ ಮನಸೂರೆಗೊಂಡಿತು.
ಉಪನ್ಯಾಸಕ ಮಹಾವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಎರಡನೇ ದಿನ ರಾತ್ರಿ ವಿದುಷಿ ಡಾ. ಶೀಲಾ ಉನ್ನಿಕೃಷ್ಣನ್ ನಿರ್ದೇಶನದಲ್ಲಿ ಚೆನ್ನೈಯ ಶ್ರೀ ದೇವಿ ನೃತ್ಯಾಲಯ ತಂಡದ ಕಲಾವಿದರು ಭರತನಾಟ್ಯ ಕಾರ್ಯಕ್ರಮದಲ್ಲಿ ಸುಮಾರು 2 ಗಂಟೆಗಳ ಕಾಲ ಶಿವಭಕ್ತಿ, ವಂದೇ ಶಿವಂ ಶಂಕರಂ, ಬ್ರಹ್ಮಮುರಾರಿ ಸುರಾ ರ್ಚಿತ ಲಿಂಗಮ್, ಆದಿ ಶಂಕರಾಚಾರ್ಯ ವಿರಚಿತ ಲಿಂಗಾಷ್ಟಕ ಮೊದಲಾದ ನೃತ್ಯರೂಪಕಗಳಿಗೆ ಮನೋಜ್ಞ ಹಾವ ಭಾವ ಅಭಿನಯಗಳಿಂದ ನೃತ್ಯ ರಸಿಕರ ಹೃನ್ಮನಸೂರೆಗೊಂಡರು.
ಮೂರನೇ ದಿನ ಬೆಂಗಳೂರಿನ ಖ್ಯಾತ ಸಂಗೀತ ಕಲಾವಿದ ರಾಹುಲ್ ವೆಲ್ಟಾಲ್ ಮತ್ತು ತಂಡದವರ ಸಂಗೀತ ಸಂಜೆ ಕಾರ್ಯಕ್ರಮದ ಮೂಲಕ ಸಂಗೀತ ಕಲಾ ಭಿಮಾನಿಗಳು ನಿರೀಕ್ಷೆಯ ಭಕ್ತಿ, ಭಾವ ಗೀತೆಗಳನ್ನು ಹೃದ್ಯವಾಗಿ ಆಸ್ವಾದಿಸಿದರು. ಬಳಿಕ ಬಡಗುತಿಟ್ಟು ಯಕ್ಷಗಾನ ಕಲಾವಿದರಿಂದ ಪ್ರಸ್ತುತಿಗೊಂಡ ದಕ್ಷಯಜ್ಞ ಪೌರಾಣಿಕ ಪ್ರಸಂಗದ ಯಕ್ಷಗಾನ ಪ್ರದರ್ಶನ ಯಕ್ಷಗಾನ ಪ್ರಿಯರ ಮೆಚ್ಚುಗೆ, ಅಭಿನಂದನೆಗೆ ಪಾತ್ರವಾಯಿತು.
ವಸ್ತು ಪ್ರದರ್ಶನ ವೇದಿಕೆಯಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಪ್ರೌಢ ಶಾಲಾ ಆವರಣದಲ್ಲಿ ಆರಂಭಗೊಂಡ 45ನೇ ವರ್ಷದ ವಸ್ತು ಪ್ರದರ್ಶನದಲ್ಲಿನ.15ರಿಂದ 19ರ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6ರಿಂದ ರಾತ್ರಿಯವರೆಗೂ ನೆರೆದ ಭಕ್ತಾದಿಗಳಿಗೆ ಮನರಂಜನೆ ನೀಡಿತು.



























