ಪುತ್ತೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಬರುವಾಗ ಪುತ್ತೂರಿನ ನೂತನ ಕಾಂಗ್ರೆಸ್ ಕಚೇರಿಯ ಉದ್ಘಾಟನೆ ನೆರವೇರಿಸುತ್ತೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ksrtc ಬಸ್ ನಿಲ್ದಾಣ ಮುಂಭಾಗ ಶುಕ್ರವಾರ ಸಂಜೆ ನಡೆದ ಕಾಂಗ್ರೆಸ್ ಕಚೇರಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
16 ಸಾವಿರ ಚದರ ಅಡಿಯ ದೊಡ್ಡ ಕಚೇರಿ ಕಟ್ಟಡ ಇಲ್ಲಿ ತಲೆ ಎತ್ತಲಿದೆ. ಮುಂದಿನ 8 ತಿಂಗಳಿನಲ್ಲಿ ಉದ್ಘಾಟನೆಗೆ ಸಜ್ಜಾಗಲಿದೆ. ಇದರ ಕಾಮಗಾರಿಗಾಗಿ ರಶೀದಿ ವ್ಯವಸ್ಥೆ ಇದೆ. 100 ರೂನಿಂದ ಲಕ್ಷ ರೂ.ವರೆಗೂ ಅನುದಾನ ನೀಡಬಹುದು. ಆದರೆ ಒತ್ತಡವಿಲ್ಲ ಎಂದರು.
ಪಕ್ಷ ಎಂದರೆ ದೊಡ್ಡ ಮಾವಿನ ಮರದಂತೆ. ಕೈಬೆರಳಲ್ಲಿ ವ್ಯತ್ಯಾಸ ಇರುವಂತೆ ಸಂಘಟನೆಯ ಒಳಗೂ ಇರುತ್ತದೆ. ಈ ವ್ಯತ್ಯಾಸಗಳನ್ನು ನಮ್ಮೊಳಗೆ ಹಂಚಿಕೊಂಡು ಸರಿಪಡಿಸಿಕೊಳ್ಳಬೇಕು. ಮಾವಿನ ಮರದಿಂದ ಹಣ್ಣು ತಿನ್ನುವವರು ತಿನ್ತಾರೆ, ನೆರಳು ಪಡೆಯುವವರು ನೆರಳು ಪಡೆದುಕೊಳ್ತಾರೆ. ಆದರೆ ಎಲ್ಲರೂ ಒಟ್ಟಾಗಿ ಸೇರಿ ಬೆಳೆಸುವ ಕೆಲಸ ಮಾಡಬೇಕು ಎಂದರು.





















