- ಗಣೇಶ್ ಎನ್. ಕಲ್ಲರ್ಪೆ
ಪುತ್ತೂರು: ಒಟ್ಟು ನಾಲ್ಕು ಮಂದಿ ಪುತ್ತೂರು ನಗರಸಭೆಯ ಕೌನ್ಸಿಲರ್ಸ್ ಮೃತಪಟ್ಟಿದ್ದಾರೆ; ಅದು ಎರಡು ವರ್ಷಗಳ ಅಂತರದಲ್ಲಿ.
2023ರ ಮಾರ್ಚ್ 16ರಂದು ಶಿವರಾಂ ಸಫಲ್ಯ, 2023ರ ಅಕ್ಟೋಬರ್ 17ರಂದು ಶಕ್ತಿ ಸಿನ್ಹಾ, 2025ರ ಜೂನ್ 5ರಂದು ರಮೇಶ್ ರೈ, 2025ರ ಜೂನ್ 21ರಂದು ಶೀನಪ್ಪ ನಾಯ್ಕ.
ನಾಲ್ವರು ಕೌನ್ಸಿಲರ್ಸ್ ಮೂರು ವಾರ್ಡ್. ಇದರಲ್ಲಿ ಮೂವರು ಬಿಜೆಪಿ ಬೆಂಬಲಿತರು, ಒಬ್ಬರು ಕಾಂಗ್ರೆಸ್ ಬೆಂಬಲಿತರು.
ಮೊದಲಿಬ್ಬರು ಕೌನ್ಸಿಲರ್ಸ್ ಮೃತಪಟ್ಟ ಬಳಿಕ ತೆರವಾದ ನಗರಸಭೆಯ ಹುದ್ದೆಗೆ 2018ರ ಆಗಸ್ಟ್ 28ರಂದು ಉಪಚುನಾವಣೆ ನಡೆಯಿತು. ಇದರಲ್ಲಿ ಶಿವರಾಂ ಸಫಲ್ಯ ಅವರ ಹುದ್ದೆಗೆ ದಿನೇಶ್ ಶೇವಿರೆ ಹಾಗೂ ಶಕ್ತಿ ಸಿನ್ಹಾ ಅವರ ಹುದ್ದೆಗೆ ರಮೇಶ್ ರೈ ಅವರು ಗೆದ್ದು ಬಂದರು. ಇವರಿಬ್ಬರೂ ಬಿಜೆಪಿ ಬೆಂಬಲಿತರೇ.
ಕಳೆದೊಂದು ವಾರದ ಅವಧಿಯಲ್ಲಿ ಮತ್ತೆ ನಗರಸಭೆಯ ಮರಣ ಮೃದಂಗ ಭಾರಿಸಿತು ನೋಡಿ. ಕೇವಲ 20 ದಿನಗಳ ಅಂತರದಲ್ಲಿ ಮತ್ತಿಬ್ಬರು ಕೌನ್ಸಿಲರ್ಸ್ ಕೊನೆಯುಸಿರೆಳೆದರು. ಶಕ್ತಿ ಸಿನ್ಹಾ ಅವರ ನಿಧನದ ಬಳಿಕ ತೆರವಾಗಿದ್ದ ಹುದ್ದೆಯನ್ನು ಅಲಂಕರಿಸಿದ್ದ ರಮೇಶ್ ರೈ ಆತ್ಮಹತ್ಯೆಗೆ ಶರಣಾದರೆ, ಆರ್ಯಾಪು ವಾರ್ಡ್ 30ರ ಕೌನ್ಸಿಲರ್ ಶೀನಪ್ಪ ನಾಯ್ಕ ಅವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.
ಇಬ್ಬರು ನಗರಸಭೆ ಕೌನ್ಸಿಲರ್ಸ್ಗಳ ಅನುಪಸ್ಥಿತಿ ನಗರಸಭೆಗೆ ನೋವಿನ ವಿಷಯ ಒಂದು ಕಡೆಯಾದರೆ, ಎರಡು ಹುದ್ದೆಗಳು ತೆರವಾದದ್ದು ಇನ್ನೊಂದು ಕಡೆ.
ಹಾಗಾದರೆ ಮತ್ತೆ ಉಪಚುನಾವಣೆ ನಡೆಯಲಿದೆಯೇ?
ಗೆದ್ದಿದ್ದರು, ಆದರೆ ಅಧಿಕಾರವಿಲ್ಲ. ಅಧಿಕಾರವಿತ್ತು, ಆದರೆ ಅಧ್ಯಕ್ಷರೇ ಇಲ್ಲ. ಇನ್ನು ವಾರ್ಡ್ನ ಪರಿಸ್ಥಿತಿ, ಇರುವ ನೇತಾರನನ್ನು ಕಳೆದುಕೊಳ್ಳುವ ಯೋಗ. ಒಟ್ಟಾರೆ ಏನೋ ಸರಿ ಇಲ್ಲ ಎಂದು ತಲೆ ಕೆರೆದುಕೊಳ್ಳುವಂತೆ ಮಾಡುವ ಪರಿಸ್ಥಿತಿ. ನಗರಸಭೆ ಇತಿಹಾಸದಲ್ಲಿ ಈ ಅವಧಿ ವಿಚಿತ್ರ ತಿರುವುಗಳ ಯುಗ.
ಇನ್ನೊಂದು ವಿಶೇಷವೇನೆಂದರೆ, ನಗರಸಭೆ ಸದಸ್ಯರ ಈ ಅವಧಿ ಸರಿಸುಮಾರು 7 ವರ್ಷಗಳಷ್ಟು ಕಾಲ ದೀರ್ಘವಾದದ್ದು. ಸಾಮಾನ್ಯವಾಗಿ 5 ವರ್ಷಕ್ಕೆ ಅವಧಿ ಮುಗಿಯುತ್ತದೆ. ಆದರೆ ಇಲ್ಲಿ ಮೀಸಲಾತಿಯ ಗಲಾಟೆ ನಗರಸಭೆಯಲ್ಲಿ ನಿರ್ವಾತವನ್ನು ಸೃಷ್ಟಿಸಿತ್ತು ಎನ್ನುವುದನ್ನು ಮರೆಯುವಂತಿಲ್ಲ.
2018ರ ಆಗಸ್ಟ್ 28ರಂದು ಪುತ್ತೂರು ನಗರಸಭೆಗೆ ಚುನಾವಣೆ ನಡೆದಿತ್ತು. ಒಟ್ಟು 31 ವಾರ್ಡ್ಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 5, ಎಸ್.ಡಿ.ಪಿ.ಐ. 1 ಸ್ಥಾನ ಪಡೆದಿತ್ತು. ಬಹುಮತ ಪಡೆದುಕೊಂಡಿದ್ದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎನ್ನುವಷ್ಟರಲ್ಲಿ ಮೀಸಲಾತಿಯ ಗಲಾಟೆ ಹೆಚ್ಚಾಯಿತು. ಚೆಂಡು ಹೈಕೋರ್ಟ್ ಅಂಗಳಕ್ಕೆ ತಲುಪಿತ್ತು. ಹೀಗಾಗಿ ಸರಿಸುಮಾರು 2 ವರ್ಷಗಳ ಕಾಲ ಸ್ಥಳೀಯಾಡಳಿತ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಮುಂದುವರಿಯಿತು. ಹಾಗಾಗಿ ಕೌನ್ಸಿಲರ್ಸ್ಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಚಡಪಡಿಸಿದರು.
ಕೊನೆಗೂ ಮೀಸಲಾತಿ ಪ್ರಕಟವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಆಗಿನಿಂದ, ಕೌನ್ಸಿಲರ್ಸ್ಗಳಿಗೆ ಒಟ್ಟು 5 ವರ್ಷದ ಅಧಿಕಾರಾವಧಿ ಸಿಗಬೇಕಲ್ಲವೇ! ಹಾಗಾಗಿ 2025ರ ನವಂಬರ್ 2ರವರೆಗೆ ಅಧಿಕಾರದ ಅವಧಿ ನೀಡಲಾಗಿದೆ. ಅಲ್ಲಿಗೆ ನಗರಸಭೆ ಕೌನ್ಸಿಲರ್ಸ್ಗಳ ಈಗಿನ ಅವಧಿ ಮುಕ್ತಾಯ. ಮತ್ತೊಮ್ಮೆ ಚುನಾವಣೆ ನಡೆಯಬೇಕು ತಾನೇ?
ಚುನಾವಣೆ ಎದುರಿಸಲು ಇನ್ನು ಉಳಿದಿರುವುದು ನಾಲ್ಕು ತಿಂಗಳು ಮತ್ತು ಬೆರಳೆಣಿಕೆಯ ಕೆಲ ದಿನಗಳು ಮಾತ್ರ. ಇದಕ್ಕೆ ಮೊದಲೇ ಚುನಾವಣೆ ಘೋಷಣೆಯಾದರೆ, ನೀತಿ ಸಂಹಿತೆ ಜಾರಿಯಾಗುತ್ತದೆ. ಅಲ್ಲಿಗೆ ಮತ್ತೆ ಒಂದಷ್ಟು ದಿನಗಳಿಗೆ ಕತ್ತರಿ ಬೀಳಲಿದೆ.
So, ಉಪಚುನಾವಣೆ ನಡೆಯುವುದು ಕಷ್ಟವೇ ಎನ್ನಬಹುದು. ಖಾಲಿಯಾಗಿರುವ ನಗರಸಭೆಯ ಎರಡು ಸ್ಥಾನಗಳ ಹೆಚ್ಚುವರಿ ಜವಾಬ್ದಾರಿ ಅಧಿಕಾರಿಗಳ ಹೆಗಲಿಗೇ ಬೀಳಲಿದೆ.