Gl
ರಾಜಕೀಯ

ಜಿಪಂ, ತಾಪಂ, ಗ್ರಾಪಂ, ಸ್ಥಳೀಯಾಡಳಿತ ಚುನಾವಣೆಗೆ ಕಾಂಗ್ರೆಸ್ ಸಿದ್ಧ | ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ

ಮುಂದೆ ಬರುವ ತಾ.ಪಂ, ಜಿ.ಪಂ, ಗ್ರಾ.ಪಂ, ಸ್ಥಳೀಯ ಆಡಳಿತ ಚುನಾವಣೆಯಲ್ಲಿ ನಮ್ಮ ಪ್ಲಾನಿಂಗ್ ಎಷ್ಟಿದೆ ಎಂಬುದನ್ನು ಕಾರ್ಯಕರ್ತ, ಜನಪ್ರತಿನಿಧಿಯ ಪರ್ಫಾಮೆನ್ಸ್ ಮೂಲಕ ಅಳತೆ ಮಾಡಬಹುದು.ಈ ನಿಟ್ಟಿನಲ್ಲಿ ಯುವಕರಿಗೆ ಬೂತ್ ಮಟ್ಟದಲ್ಲಿ ಆದಷ್ಟು ಆದ್ಯತೆ ನೀಡಿದ್ದೇವೆ. ಹಿರಿಯರನ್ನು ಬ್ಲಾಕ್ ಮಟ್ಟಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದೇವೆ.ಕಾಂಗ್ರೆಸ್ ಕುಟುಂಬ ಹೆಮ್ಮರವಾಗಿ ಬೆಳೆದಿದೆ.ಅದರ ನೆರಳನ್ನು ನಾವು ಪಡೆದುಕೊಳ್ಳಬೇಕು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹಲವು ಪ್ರಯೋಗ ಮತ್ತು ಪ್ರಥಮಗಳಲ್ಲಿ ಮುಂದಿರುವ ಪುತ್ತೂರಿನಲ್ಲಿ ರಾಜ್ಯದಲ್ಲೇ ಪ್ರಪ್ರಥಮವಾಗಿ ಕಾಂಗ್ರೆಸ್ ಪಕ್ಷದ ಪ್ರಮುಖರಿಗೆ, ವಿವಿಧ ಸಮಿತಿಗಳ ಅಧ್ಯಕ್ಷರುಗಳಿಗೆ, ಸರಕಾರದಿಂದ ನಾಮನಿರ್ದೇಶಿತ ಸದಸ್ಯರುಗಳಿಗೆ ಪಕ್ಷದ ಚಟುವಟಿಕೆ ಮತ್ತು ವಿವಿಧ ರೀತಿಯ ಮಾರ್ಗದರ್ಶನ ನೀಡಲು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕಾರಿಣಿ ಸಭೆಯು ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.

Pashupathi

ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಡಾ|ಮಂಜುನಾಥ ಭಂಡಾರಿ ಅವರು ಉದ್ಘಾಟಿಸಿದರು.

akshaya college

`ಕಟ್ಟುತ್ತೇವಾ ನಾವು ಕಟ್ಟುತ್ತೇವಾ’ ಎಂಬ ಜನಪದ ಗೀತೆಯನ್ನು ಮಹಮ್ಮದ್ ಬಡಗನ್ನೂರು ಅವರು ಹಾಡುವ ಮೂಲಕ ಕಾರ್ಯಾಕಾರಿಣಿಗೆ ಚಾಲನೆ ನೀಡಲಾಯಿತು. ಸಭೆಯಲ್ಲಿ ಭಾಗವಹಿಸಿದವರು ಹಾಡಿಗೆ ಧ್ವನಿಗೂಡಿಸಿದರು.

ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಗುರಿ: ಕಾರ್ಯಕಾರಿಣಿಯನ್ನು ಉದ್ಘಾಟಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಡಾ|ಮಂಜುನಾಥ ಭಂಡಾರಿ ಅವರು ಮಾತನಾಡಿ, ಪುತ್ತೂರು ಶಾಸಕ ಅಶೋಕ ರೈ ಅವರು ಪಕ್ಷವನ್ನು ತಳಮಟ್ಟದಿಂದಲೇ ಕಟ್ಟುವ ಒಂದು ಮುಖ್ಯ ಉದ್ದೇಶ ಇಟ್ಟುಕೊಂಡು ಈ ಕಾರ್ಯಕಾರಿಣಿ ಆಯೋಜಿಸಿದ್ದಾರೆ. ನಾವೆಲ್ಲ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದರೂ ದೀಪದ ಮೂಲಕ ಪರಸ್ಪರ ಮುಖ ನೋಡಿದಂತೆ ಪಕ್ಷವನ್ನು ಯಾವ ರೀತಿ ಬೆಳೆಸಬೇಕು, ಬೂತ್ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ವಲಯ ಮಟ್ಟದಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂದು ತರಬೇತುದಾರರ ಅನುಭವಗಳನ್ನು ಪಡೆಯಬೇಕಾಗಿದೆ. ಆ ಮೂಲಕ ನಿಮ್ಮ ಜ್ಞಾನದ ದೀಪವನ್ನು ಮತ್ತೊಮ್ಮೆ ಹಚ್ಚಲು ಕಾರ್ಯಕಾರಣಿ ಆಯೋಜನೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನಾನು ಮುಖ್ಯಮಂತ್ರಿಗಳ ಜೊತೆ ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ ನಮಗೆ ಪಕ್ಷ ಬಿಟ್ಟು ಯಾವುದೂ ಇಲ್ಲ. ಹಾಗಾಗಿ ಅಶೋಕ್ ಕುಮಾರ್ ರೈ ಅವರ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಯಾಕೆಂದರೆ ಇಂತಹ ಕಾರ್ಯಕ್ರಮದಿಂದ ಮಾತ್ರ ನಾವು ಪಕ್ಷವನ್ನು ಕಟ್ಟಲು ಸಾಧ್ಯ. ಇವತ್ತು ಒಬ್ಬ ಶಾಸಕ ಮನಸ್ಸು ಮಾಡಿದರೆ ಏನೂ ಮಾಡಬಹುದು ಎಂಬುದಕ್ಕೆ ಪುತ್ತೂರಿಗೆ ಮೆಡಿಕಲ್ ಕಾಲೇಜು ತಂದಿರುವ ಅಶೋಕ್ ಕುಮಾರ್ ರೈ ಅವರನ್ನು ನೋಡಬಹುದು ಎಂದು ಮಂಜುನಾಥ ಭಂಡಾರಿ ಶ್ಲಾಘನೆ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ತಾಯಿ ಬೇರಿನಂತೆ:
ಅಶೋಕ್ ರೈ ಅವರು ಕಾರ್ಯಕ್ರಮ ಆಯೋಜನೆ ಮಾಡಬಹುದು, ನಿಮಗೆ ಬೇಕಾದ ಸಂಪನ್ಮೂಲ ಕೊಡಬಹುದು.ಅದನ್ನು ಸಂಪೂರ್ಣ ಕಾರ್ಯಗತ ಮಾಡಬೇಕಾಗಿರುವುದು ನೀವು. ಯಾಕೆಂದರೆ ತಾಯಿ ಬೇರು ಇದ್ದರೂ ಅದಕ್ಕೆ ಬೇಕಾದ ಸಹಕಾರ ನೀಡುವುದು ನೂರಾರು ಸಣ್ಣ ಬೇರುಗಳು. ತಾಯಿ ಬೇರು ಒಂದರಿಂದಲೇ ಮರ ಗಟ್ಟಿಯಾಗಿ ನಿಲ್ಲುವುದಿಲ್ಲ. ಅದೇ ರೀತಿ ಬ್ಲಾಕ್ ಕಾಂಗ್ರೆಸ್ ಪಕ್ಷದ ತಾಯಿ ಬೇರು ಇದ್ದಂತೆ. ಅದಕ್ಕೆ ಮಹಿಳಾ ಕಾಂಗ್ರೆಸ್, ಯುವಕ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್ ಸಹಿತ ಸುಮಾರು 25 ಘಟಕಗಳು ಸಣ್ಣ ಬೇರಿನಂತೆ ಸಹಕಾರ ನೀಡಬೇಕು. ಒಬ್ಬ ಶಾಸಕನು ಹಲವಾರು ಕೆಲಸ ಮಾಡಬೇಕಾದರೆ, ಯೋಜನೆಗಳನ್ನು ತರಬೇಕಾದರೆ ಅದಕ್ಕೆ ನಿಮ್ಮಂಥ ನೂರಾರು ಮಂದಿಯ ಸಹಕಾರ ಬೇಕು ಎಂದು ಡಾ|ಮಂಜುನಾಥ ಭಂಡಾರಿ ಹೇಳಿದರು.

ಬೇರೆ ಪಕ್ಷಗಳ ಮತಗಳನ್ನೂ ಸೆಳೆಯಬೇಕು:
ಚುನಾವಣೆಯಲ್ಲಿ ಗೆಲ್ಲಬೇಕೆಂದಾಗ ಕೇವಲ ಕಾಂಗ್ರೆಸ್ ಮತ ಮಾತ್ರವಲ್ಲದೆ ನಾವು ಬೇರೆ ಪಕ್ಷದ ಮತಗಳನ್ನೂ ಸೆಳೆಯಬೇಕಾಗಿದೆ. ಶೇ.30 ಮತಗಳು ಎಲ್ಲಾ ಪಕ್ಷಗಳಲ್ಲೂ ಕಟ್ಟಿಟ್ಟ ಬುತ್ತಿ ಇರುತ್ತದೆ. ಆದರೆ ಇನ್ನೂ ಶೇ.40 ಮತಗಳು ಯಾರು ಬೇಕಾದರೂ ತೆಗೆದುಕೊಳ್ಳಬಹುದು. ಆ ಶೇ.40 ಮತಗಳನ್ನು ನಾವು ಪಡೆಯುವ ಪ್ರಯತ್ನ ಮಾಡಬೇಕು. ಇದು ತಳಮಟ್ಟದ ಬೂತ್ ಮಟ್ಟದ ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಅವರನ್ನು ನಮ್ಮ ಕಡೆ ಸೆಳೆಯಲು ಶಿಸ್ತು ಬದ್ಧವಾಗಿ ಮಾಡುವ ಕೆಲಸ ಆಗಬೇಕು. ಅದಕ್ಕಾಗಿ ಇಂತಹ ತರಬೇತಿ ನೀಡಲಾಗುತ್ತದೆ ಎಂದು ಡಾ| ಮಂಜುನಾಥ ಭಂಡಾರಿ ಹೇಳಿದರು.

ಚುನಾವಣೆಗೆ ಆರು ತಿಂಗಳು ಇರುವಾಗ ಕೆಲಸ ಮಾಡುವುದಲ್ಲ:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಇಲ್ಲಿ ಬರಿ ಕಾರ್ಯಾಗಾರ ಮಾತ್ರ. ಯಾವುದೇ ಭಾಷಣಕ್ಕೆ ಆದ್ಯತೆ ಇಲ್ಲ. ಅಶೋಕ್ ಕುಮಾರ್ ರೈ ಕಾಂಗ್ರೆಸ್ ಪಕ್ಷದ ಶಾಸಕನಾದರೂ ಕೂಡಾ ಪ್ರತಿ ಮನೆಗೆ ಹೋಗಿ ಮತ ಕೇಳಲು ಸಾಧ್ಯವಿಲ್ಲ. ಪ್ರತಿ ಗ್ರಾಮದ ಮನೆಗಳ ಬೇಡಿಕೆ, ಕಷ್ಟಗಳಿಗೆ ಸ್ಪಂದನೆ ಕೊಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನನ್ನ ಪರವಾಗಿ, ಪಕ್ಷದ ಪರವಾಗಿ ಪ್ರತಿ ಮನೆಗೆ ತಲುಪುವ ಮತ್ತು ಪ್ರತಿ ಮನೆಗಳ ವಿಷಯ ಬಲ್ಲವರು ವಲಯ ಮತ್ತು ಬೂತ್ ಅಧ್ಯಕ್ಷರುಗಳು. ಅಂತಹ ತಳಮಟ್ಟದ ಕಾರ್ಯಕರ್ತರಿಗೆ ಪಕ್ಷದ ಯೋಜನೆಗಳು, ಪಕ್ಷದ ಕಾರ್ಯಕ್ರಮಗಳು, ಶಾಸಕರು ಮಾಡಿದ ಯೋಜನೆ, ತಂದಿರುವ ಅನುದಾನದ ಕುರಿತು ಮಾಹಿತಿ ಕೊಡಲು ಈ ಕಾರ್ಯಾಗಾರ ಆಯೋಜಿಸಲಾಗಿದೆ. ಜೊತೆಗೆ ಬೂತ್ ಅಧ್ಯಕ್ಷರು ಯಾವ ರೀತಿ ಕೆಲಸ ಮಾಡಬೇಕು. ಅವರು ಸ್ಥಳೀಯ ಮಟ್ಟದಲ್ಲಿ ಸಮಾಜದಲ್ಲಿ ಹೇಗೆ ಸೇರಿಕೊಂಡಿರಬೇಕು. ಸರಕಾರದ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸುವ ಮತ್ತು ಮಾಹಿತಿ ನೀಡುವ ಮೂಲಕ ಮುಂದೆ ಪಕ್ಷಕ್ಕೆ ಮತ್ತು ಚುನಾವಣೆಗೆ ಸಹಕಾರಿಯಾಗುವ ಕೆಲಸ ಆಗಲಿದೆ. ಇನ್ನು ಚುನಾವಣೆಗೆ ಮೂರು ವರ್ಷ ಇದೆ. ಆದರೆ ಚುನಾವಣೆಗೆ ಆರು ತಿಂಗಳು ಇರುವಾಗ ಕೆಲಸ ಮಾಡುವುದಲ್ಲ. ಚುನಾವಣೆಯ ಯಶಸ್ವಿ ಕಾಣಲು ಮೂರು ವರ್ಷ ಮೊದಲೇ ಕೆಲಸ ಮಾಡಬೇಕು. ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ ತೋರಿಸಿ, ಸಹಾಯ ಮಾಡುವ ಮೂಲಕ ಮತದಾರರ ಮನಸ್ಸು ಗೆಲ್ಲಬೇಕು ಎಂದರು.

ನಮ್ಮ ಉದ್ದೇಶವೊಂದೇ, ನಾವೆಲ್ಲ ಒಂದೇ ಕುಟುಂಬ, ಪ್ರೀತಿ ವಿಶ್ವಾಸದಿಂದ ಜನರ ಮನಸ್ಸನ್ನು ಗೆಲ್ಲುವ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿರಬೇಕು. ಮುಂದೆ ಬರುವ ತಾ.ಪಂ, ಜಿ.ಪಂ, ಗ್ರಾ.ಪಂ, ಸ್ಥಳೀಯ ಆಡಳಿತ ಚುನಾವಣೆಯಲ್ಲಿ ನಮ್ಮ ಪ್ಲಾನಿಂಗ್ ಎಷ್ಟಿದೆ ಎಂಬುದನ್ನು ಕಾರ್ಯಕರ್ತ, ಜನಪ್ರತಿನಿಧಿಯ ಪರ್ಫಾಮೆನ್ಸ್ ಮೂಲಕ ಅಳತೆ ಮಾಡಬಹುದು.ಈ ನಿಟ್ಟಿನಲ್ಲಿ ಯುವಕರಿಗೆ ಬೂತ್ ಮಟ್ಟದಲ್ಲಿ ಆದಷ್ಟು ಆದ್ಯತೆ ನೀಡಿದ್ದೇವೆ. ಹಿರಿಯರನ್ನು ಬ್ಲಾಕ್ ಮಟ್ಟಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದೇವೆ.ಕಾಂಗ್ರೆಸ್ ಕುಟುಂಬ ಹೆಮ್ಮರವಾಗಿ ಬೆಳೆದಿದೆ.ಅದರ ನೆರಳನ್ನು ನಾವು ಪಡೆದುಕೊಳ್ಳಬೇಕು ಎಂದರು.

ದಿನವೊಂದಕ್ಕೆ 5 ಮತವನ್ನು ಬೇರೆ ಪಕ್ಷದಿಂದ ಸೆಳೆಯುವ ಗುರಿ:
ನಾವು ಕಾಂಗ್ರೆಸ್, ಬಿಜೆಪಿ ಎಂದು ನೋಡದೆ ಎಷ್ಟು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ ಮತ್ತು ಎಷ್ಟು ಮಂದಿಯನ್ನು ತಮ್ಮ ಕಡೆ ಎಳೆದಿದ್ದೇವೆ ಎಂದು ನೋಡಬೇಕು. ದಿನವೊಂದಕ್ಕೆ 5 ಮತವನ್ನು ಬೇರೆ ಪಕ್ಷದಿಂದ ಮತ್ತು ಸಮಾನ ಮನಸ್ಕರಿಂದ ಸೆಳೆಯುವ ಗುರಿ ಹೊಂದಬೇಕು. ನಮ್ಮ ಪರವಾಗಿ ಕೆಲಸ ಮಾಡಿದರೆ ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬಹುದು. 224 ಬೂತ್‌ನಲ್ಲಿ ಈಗಿನ ಮತಕ್ಕಿಂತ ಇನ್ನೂ ತಲಾ 25 ಹೆಚ್ಚಿನ ಮತವನ್ನು ನಮ್ಮ ಕಡೆಗೆ ಸೆಳೆಯುವ ಕೆಲಸ ಮಾಡಬೇಕು. ಈ ಕೆಲಸ ಆಗಬೇಕಾದರೆ ತಳಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಅಪಪ್ರಚಾರಕ್ಕೆ ಅನುದಾನ ತಂದು, ಕಾಮಗಾರಿಯ ಮೂಲಕ ಉತ್ತರ:
ಸರಕಾರ ಕೊಟ್ಟ ಐದು ಗ್ಯಾರೆಂಟಿಗಳು ಪ್ರತಿ ಮನೆ ಮನೆಯಲ್ಲೂ ಮರೆಯಲು ಬಿಡಬಾರದು.ಇಷ್ಟು ದೊಡ್ಡ ಯೋಜನೆ ಇಷ್ಟರ ತನಕ ಯಾವುದೇ ಸರಕಾರ ನೀಡಿಲ್ಲ.ಅನುದಾನದ ವಿಚಾರದ ಕುರಿತು ಬೇರೆ ಬೇರೆ ಪಕ್ಷಗಳು ಅಪಪ್ರಚಾರ ಮಾಡುವುದನ್ನು ಕಂಡಿzವೆ.ಅವರ ಅಪಪ್ರಚಾರಕ್ಕೆ ಅನುದಾನ ತಂದು ಕಾಮಗಾರಿ ಮಾಡಿ ಮನಸ್ಸಿಗೆ ಮುಟ್ಟುವಂತೆ ತಲುಪಿಸಿದರೆ ಖಂಡಿತಾ ಜನರು ನಮ್ಮ ಪರವಾಗಿ ಇರುತ್ತಾರೆ.ಈ ನಿಟ್ಟಿನಲ್ಲಿ ನಾವೆಲ್ಲ ಕಾಂಗ್ರೆಸ್ ಕುಟುಂಬ ಜೊತೆಯಲ್ಲಿ ಕೆಲಸ ಮಾಡಬೇಕು ಎಂದರು.

ತರಬೇತುದಾರ ಮುನೀರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಮ್.ಎಸ್.ಮೊಹಮ್ಮದ್, ಕೆಪಿಸಿಸಿ ಸದಸ್ಯ ಕಾವು ಹೇಮನಾಥ ಶೆಟ್ಟಿ, ಪ್ರಸಾದ್‌ಕೌಶಲ್ ಶೆಟ್ಟಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ್, ಶಶಿಕಿರಣ್ ರೈ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಪೂರ್ಣೇಶ್ ಭಂಡಾರಿ, ಹರ್ಷದ್ ದರ್ಬೆ, ಸುಭಾಶ್ಚಂದ್ರ ರೈ ಕೊಳ್ನಾಡು, ಉಲ್ಲಾಸ್ ಕೋಟ್ಯಾನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಶಿವರಾಮ ಆಳ್ವ, ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಸೇವಾ ದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ, ಗ್ಯಾರೆಂಟಿ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಶರೂನ್ ಸಿಕ್ವೇರಾ,ನಝೀರ್ ಮಠ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ವಂದಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಕಾರಿಣಿಯಲ್ಲಿ ಮುನೀರ್, ಸುಧೀರ್ ಕುಮಾರ್ ಮರೋಳಿ, ಜಿ.ಸಿ.ಚಂದ್ರಶೇಖರ್ ವಿಶೇಷ ತರಬೇತುದಾರರಾಗಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಕಾರ್ಯಕಾರಿಣಿ ಅವಧಿಯ ನಿರ್ವಹಣೆ ಮಾಡಿದರು. ಸಭಾಂಗಣದ ಹೊರವಲಯದಲ್ಲಿ ಶಾಸಕರ ಭಾವಚಿತ್ರದ ಸೆಲ್ಫಿ ಕಾರ್ನರ್ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕಾರಿಣಿಗೆ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಒಳಪ್ರವೇಶವಿತ್ತು. ಈ ಕುರಿತು ಪ್ರತ್ಯೇಕ 5 ಕೇಂದ್ರಗಳಲ್ಲಿ ನೋಂದಾವಣೆ ಮಾಡಲಾಗುತ್ತಿತ್ತು.ಬಂದ ಅತಿಥಿಗಳಿಗೆ ಕಾರ್ಯಾಗಾರ ವೀಕ್ಷಣೆಗೆ ಪ್ರತ್ಯೇಕ ಕೊಠಡಿಗೆ ಎಲ್‌ಡಿಪಿ ಪರದೆಯ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಒಂದೊಂದು ಅವಧಿಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದವರು ತೆರಳಿದ ಬಳಿಕ ಇನ್ನೊಂದು ಅವಧಿಯ ಕಾರ್ಯಕಾರಿಣಿ ನಡೆಯುತ್ತಿತ್ತು. ಮಧ್ಯಾಹ್ನ ಊಟ, ಸಂಜೆ ಚಹಾ ಮತ್ತು ರಾತ್ರಿ ಕುಟುಂಬ ಸಮ್ಮಿಲನದೊಂದಿಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಶೋಕ ಪರ್ವ' ಕೈಪಿಡಿ ಬಿಡುಗಡೆ:

ಶಾಸಕ ಅಶೋಕ್ ಕುಮಾರ್ ರೈ ಅವರು ಶಾಸಕರಾದ ಬಳಿಕ ಅವರು ಮಾಡಿದ ಸಾಧನೆ, ಪುತ್ತೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ತಂದಿರುವ ವಿವಿಧ ಅನುದಾನ, ಕಾಮಗಾರಿಗಳ ಕುರಿತ ಮಾಹಿತಿಯುಳ್ಳ ಕೈಪಿಡಿ ಅಶೋಕ ಪರ್ವವನ್ನು ಪ್ರಥಮ ಅವಧಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು,ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಸಹಿತ ಮತ್ತಿತರರು ಉಪಸ್ಥಿತರಿದ್ದರು.

ಸೇವಾದಳದಿಂದ ಧ್ವಜಾರೋಹಣ:

ಕಾರ್ಯಕಾರಿಣಿ ನಡೆಯುವ ಮೊದಲು ಸಭಾಂಗಣದ ಹೊರಾಂಗಣದಲ್ಲಿ ರಾಷ್ಟ್ರಧ್ವಜ ಮತ್ತು ಪಕ್ಷದ ಧ್ವಜಾರೋಹಣ ನೆರವೇರಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಅವರು ರಾಷ್ಟ್ರಧ್ವಜ ಮತ್ತು ವಿಧಾನ ಪರಿಷತ್ ಸದಸ್ಯ ಡಾ|ಮಂಜುನಾಥ ಭಂಡಾರಿ ಅವರು ಕಾಂಗ್ರೆಸ್ ಪಕ್ಷದ ಧ್ವಜಾರೋಹಣ ನೆರವೇರಿಸಿದರು. ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ ಅವರು ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಧ್ವಜಗೀತೆ, ವಂದೇ ಮಾತರಂ ಹಾಡಲಾಯಿತು. ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್‌ದಾಸ್ ಕೊಟ್ಟಾರಿ, ಮಹಿಳಾ ಪ್ರಧಾನ ಕಾರ್ಯದರ್ಶಿ ಅನಿತಾ, ಖಜಾಂಚಿ ಮೇರಿ, ಕಾರ್ಯದರ್ಶಿ ವಿಡಿಯಾ, ಬೆಳ್ತಂಗಡಿ ಬ್ಲಾಕ್ ಕಾರ್ಯದರ್ಶಿ ಪ್ರದೀಪ್ ಕೆ.ಸಿ, ಉಪಾಧ್ಯಕ್ಷ ಅನಿಲ್ ಪಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

4 ವಿಭಾಗದಲ್ಲಿ ನಡೆದ ಕಾರ್ಯಾಗಾರ:

4 ವಿಭಾಗದಲ್ಲಿ ಕಾರ್ಯಾಗಾರ ನಡೆಯಿತು. ಬೆಳಿಗ್ಗೆ ಗಂಟೆ 10ಕ್ಕೆ ವಲಯ ಮತ್ತು ಬೂತ್ ಅಧ್ಯಕ್ಷರುಗಳಿಗೆ, 12 ಗಂಟೆಯಿಂದ ಮಧ್ಯಾಹ್ನ ಗಂಟೆ 2ರ ತನಕ ಸರಕಾರದ ಹಂತದಲ್ಲಿ ನಾಮನಿರ್ದೇಶಿತ ಮತ್ತು ನೇಮಕಗೊಂಡ ಸದಸ್ಯರಿಗೆ, 3 ಗಂಟೆಯಿಂದ ಸಂಜೆ ಗಂಟೆ 4ರ ತನಕ ಪಕ್ಷದ ಪ್ರಮುಖ ನಾಯಕರಿಗೆ ಕಾರ್ಯಾಗಾರ ನಡೆದು ಸಂಜೆ ಗಂಟೆ 5ರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕುಟುಂಬ ಸಮ್ಮಿಲನ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ವ್ಹೀಲ್ ಚೇರಿನಲ್ಲಿ ವಿಧಾನಸಭೆ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ! ಅಷ್ಟಕ್ಕೂ ಸಿಎಂಗೇನಾಯ್ತು?

ಇಂದಿನಿಂದ ವಿಧಾನಸಭೆ ಅಧಿವೇಶನ. ಈ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಅವರು ವ್ಹೀಟ್‌ ಚೇರಿನಲ್ಲಿ…