ಅಮೃತಸರ: ಸುಮಾರು 200 ಮಂದಿ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತು ಹಾರಾಟ ನಡೆಸಿರುವ ಅಮೆರಿಕ ಸೇನಾ ವಿಮಾನ ಬುಧವಾರ ಮಧ್ಯಾಹ್ನ ಇಲ್ಲಿನ ಶ್ರೀ ಗುರು ರಾಮದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ವಿಮಾನ ಬೆಳಗ್ಗೆ ಇಳಿಯುವ ನಿರೀಕ್ಷೆಯಿತ್ತು. ಇದುವರೆಗೂ ವಿಮಾನದಲ್ಲಿದ್ದವರ ವಿವರ ಲಭ್ಯವಾಗಿಲ್ಲ.ಯುಎಸ್ ಮಿಲಿಟರಿ ವಿಮಾನ ಸಿ -17 ಪಂಜಾಬ್ ಮತ್ತು ನೆರೆಯ ರಾಜ್ಯಗಳಿಂದ ಬಂದ 205 ಅಕ್ರಮ ವಲಸಿಗರನ್ನು ಕರೆ ತರುತ್ತಿದೆ.
ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಅವರು ಮಂಗಳವಾರ, ರಾಜ್ಯ ಸರಕಾರವು ವಲಸಿಗರನ್ನು ಸ್ವೀಕರಿಸಲಿದೆ ಮತ್ತು ವಿಮಾನ ನಿಲ್ದಾಣದಲ್ಲಿ ಕೌಂಟರ್ಗಳನ್ನು ಸ್ಥಾಪಿಸುತ್ತದೆ ಎಂದು ಹೇಳಿದ್ದಾರೆ.
ಪಂಜಾಬ್ ಎನ್ಆರ್ಐ ವ್ಯವಹಾರಗಳ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರು ಮಂಗಳವಾರ ಯುಎಸ್ ಸರಕಾರದ ನಿರ್ಧಾರದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ಆರ್ಥಿಕತೆಗೆ ಕೊಡುಗೆ ನೀಡಿದ ಈ ವ್ಯಕ್ತಿಗಳನ್ನು ಗಡಿಪಾರು ಮಾಡುವ ಬದಲು ಶಾಶ್ವತ ಆಶ್ರಯ ನೀಡಬೇಕಾಗಿತ್ತು ಎಂದು ಹೇಳಿದರು.
ಅನೇಕ ಭಾರತೀಯರು ಕೆಲಸದ ಪರವಾನಿಗೆಯ ಮೇಲೆ ಯುಎಸ್ ಪ್ರವೇಶಿಸಿದ್ದಾರೆ, ಅವಧಿ ಮುಗಿದ ನಂತರ ಅವರನ್ನು ಅಕ್ರಮ ವಲಸಿಗರನ್ನಾಗಿ ಮಾಡಿದೆ ಎಂದು ಹೇಳಿದರು.
ಯುಎಸ್ ನಲ್ಲಿ ವಾಸಿಸುವ ಪಂಜಾಬಿಗಳ ಕಾಳಜಿ ಮತ್ತು ಹಿತಾಸಕ್ತಿಗಳ ಬಗ್ಗೆ ಚರ್ಚಿಸಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಮುಂದಿನ ವಾರ ಭೇಟಿ ಮಾಡಲು ಯೋಜಿಸಿರುವುದಾಗಿ ಸಚಿವ ಕುಲದೀಪ್ ಸಿಂಗ್ ಹೇಳಿದರು.