ಹೊಸದಿಲ್ಲಿ: ಭಾರತೀಯ ಸೇನಾಪಡೆಗಳು, ಪ್ರಧಾನಿ ನರೇಂದ್ರ ಮೋದಿ ಅನಂತರ, ಇದೀಗ ಕೇಂದ್ರ ವಿದೇಶಾಂಗ ಸಚಿವಾಲಯವೂ ಪಾಕಿಸ್ಥಾನಕ್ಕೆ ಖಡಕ್ ಸಂದೇಶ ರವಾನಿಸಿದೆ.
ಜಮ್ಮು-ಕಾಶ್ಮೀರ ವಿಚಾರದಲ್ಲಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಪಾಕ್ ಆಕ್ರಮಿಸಿಕೊಂಡಿರುವ ಕಾಶ್ಮೀರದ (ಪಿಒಕೆ) ಭಾಗವನ್ನು ಕೂಡಲೇ ತೆರವು ಮಾಡಬೇಕು ಎಂದು ಮಾಧ್ಯಮಗಳಿಗೆ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.
ಕದನ ವಿರಾಮ ಏರ್ಪಟ್ಟ ಕುರಿತು ವಿವರಣೆ ನೀಡಿದ ಜೈಸ್ವಾಲ್, ಪಾಕಿಸ್ಥಾನದ ಡಿಜಿಎಂಒ (ಸೇನಾ ಕಾರ್ಯಾಚರಣೆ ನಿರ್ದೇಶಕ) ಭಾರತದ ಡಿಜಿಎಂಒ ಜತೆಗೆ ಮಾತಾಡಿದ ನಂತರ ಸೇನಾ ದಾಳಿ ನಿಲ್ಲಿಸುವ ನಿರ್ಧಾರ ಮಾಡಲಾಯಿತು ಎಂದು ಹೇಳಿದ್ದಾರೆ.
ಸಿಂಧೂ ಒಪ್ಪಂದ ರದ್ದು ಮುಂದುವರಿಯುತ್ತದೆ
ಪಾಕ್ನೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು ಮುಂದುವರಿಯುತ್ತದೆ. ಪಾಕ್ ಉಗ್ರವಾದ ನಿಲ್ಲಿಸುವವರೆಗೆ ಇದರಲ್ಲಿ ಬದಲಾವಣೆಯಿಲ್ಲ ಎಂದು ಜೈಸ್ವಾಲ್ ಹೇಳಿದ್ದಾರೆ.